ಕಸದ ಮಾಫಿಯಾ ಮತ್ತು ಮಾಲಿನ್ಯ ವಿರುದ್ಧ ಏಕಾಂಗಿ ಹೋರಾಟ
ಬೆಂಗಳೂರು ನ. 18: ನಗರದಲ್ಲಿ ಕಸದ ಮಾಫಿಯಾ, ಅದರಿಂದ ಅಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ವಿಫಲವಾಗಿರುವ ಪರಿಸರ ಮಾಲಿನ್ಯ ಇಲಾಖೆ ವಿರುದ್ಧ ಸಮಾಜಿಕ ಕಾರ್ಯಕರ್ತ ಏಕಾಂಗಿ ಹೋರಾಟ ಶುರು ಮಾಡಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎದುರಲ್ಲಿ ಬ್ಯಾನರ್ ಹಿಡಿದು ಪ್ರತಿಭಟನೆ ಆರಂಭಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಎಂ. ಮಹೇಶ್ ರೆಡ್ಡಿ ಹೋರಾಟ ಆರಂಭಿಸಿದವರು. " ಭ್ರಷ್ಟರ ಮಾಲಿನ್ಯದ ಕನೋನಾ" ನ್ಯಾಯಾಲಯಗಳ ಆದೇಶಗಳು, ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ ಗಳು, ಸ್ವಚ್ಚ ಭಾರತ್ ಕಾರ್ಯಕ್ರಮಗಳು ಕಸದೊಂದಿಗೆ ಬೆರೆತು ಲ್ಯಾಂಡ್ ಫಿಲ್ ಗೆ ಹೋಗಿ ಪರಿಸರ ಮಾಲಿನ್ಯ ಆಗುತ್ತಿದೆ. ಇದನ್ನು ತಡೆಗಟ್ಟಲು ಯಾವ ಇಲಾಖೆ ಜವಾಭ್ಧಾರಿ ತೆಗೆದುಕೊಳ್ಳುತ್ತದೆ. ಎಷ್ಟು ವರ್ಷಗಳ ಸಮಯ ಬೇಕು ನನ್ನ ಪ್ರಶ್ನೆಗೆ ಉತ್ತರ ಕೊಡಿ ಎಂಬ ಒಕ್ಕಣೆಯುಳ್ಳ ಬ್ಯಾನರ್ ಹಿಡಿದು ಉರಿ ಬಿಸಿಲಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎದುರು ನಿಂತು ಮಹೇಶ್ ರೆಡ್ಡಿ ಹೋರಾಟ ಆರಂಭಿಸಿದ್ದಾರೆ.
ರಾಜಧಾನಿಯಲ್ಲಿ ಕಸದಿಂದ ನಾನಾ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಬಿಬಿಎಂಪಿ ವ್ಯಯಿಸಿದರೂ ಕಸವನ್ನು ಕಾನೂನು ಬದ್ಧವಾಗಿ ವಿಲೇವಾರಿ ಮಾಡುತ್ತಿಲ್ಲ. ಕಸ ವಿಂಗಡಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ವಚ್ಚ ಭಾರತ್ ಯೋಜನೆಯಡಿ ಇತ್ತೀಚೆಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದೆ.
ಕಸದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಹಣ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಈ ಹಣವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಕೆಲವು ಇಲಾಖೆಗಳು ಹಂಚಿಕೊಂಡಿವೆ. ಆದರೆ ಎಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಲಾಗಿದೆ ? ಕಸವೇ ಒಂದು ಅಕ್ರಮವಾಗಿ ಬದಲಾಗಿದೆ. ಕಸ ಸಮರ್ಪಕ ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ಯಾವ ಕ್ರಮವೂ ಜರುಗಿಸದೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಅಕ್ರಮದ ಒಂದು ಭಾಗವಾಗಿದೆ ಎಂದು ಮಹೇಶ್ ರೆಡ್ಡಿ ಆರೋಪಿಸಿದ್ದಾರೆ.
Recommended Video
ಕಸಕ್ಕೆ ಬೆಂಕಿ: ರಾಜಧಾನಿಯಲ್ಲಿ ಇತ್ತೀಚೆಗೆ ಕಸ ಸಮರ್ಪಕ ವಿಲೇವಾರಿಯಾಗುತ್ತಿಲ್ಲ. ಎಲ್ಲೆಂದರಲ್ಲಿ ಕಸಕ್ಕೆ ಬೆಂಕಿ ಇಟ್ಟು ಸುಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಕಸವನ್ನು ರಸ್ತೆಯ ಬದಿ ಸುಡುತ್ತಿರುವ ಸಾಕಷ್ಟು ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ.