ಬೆಂಗಳೂರು: ಗೋದ್ರೇಜ್ ವುಡ್ಸ್ ಮನ್ ಎಸ್ಟೇಟ್ ನಲ್ಲಿ ಸಂಭ್ರಮದ ಓಣಂ
ಬೆಂಗಳೂರು, ಸೆಪ್ಟೆಂಬರ್ 20: ಮಲಯಾಳಿಗಳು ವಾಸವಿರುವ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗೋದ್ರೇಜ್ ವುಡ್ಸ್ ಮನ್ ಎಸ್ಟೇಟ್ ನಲ್ಲಿ ಸೆ.17, ಭಾನುವಾರದಂದು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 'ಪೂಕಳಂ' ಎಂದೇ ಕರೆಯಲ್ಪಡುವ ಹೂವಿನ ರಂಗೋಲಿಯೊಂದಿಗೆ ಹಬ್ಬದ ಉಲ್ಲಾಸ ದ್ವಿಗುಣವಾಗಿತ್ತು.
ಚಂಡೆ ನಾದದೊಂದಿಗೆ ಎಸ್ಟೇಟಿನ ಎಲ್ಲ ನಿವಾಸಿಗಳೂ ಓಣಂ ಹಬ್ಬವನ್ನು ಆಚರಿಸಿದರು. ಈ ದಿನ ಮಾಡುವ 'ಓಣ ಸಧ್ಯ' (ಬಾಳೆ ಎಲೆಯಲ್ಲಿ ತರಹೇವಾರಿ ಖಾದ್ಯಗಳನ್ನು ಬಡಿಸಿ, ಉಣ್ಣುವ ಪದ್ಧತಿ)ವನ್ನು ನಿವಾಸಿಗಳೆಲ್ಲ ಸವಿದರು.
ಪ್ರಜೆಗಳನ್ನು ನೋಡಲು ಬಲಿ ಚಕ್ರವರ್ತಿ ಬರ್ತಾನಂತೆ!
ದೇವರ ಸ್ವಂತ ನಾಡು ಕೇರಳದ ಸಂಸ್ಕೃತಿ, ಪರಂಪರೆಗಳನ್ನು ನೆನಪಿಸುವಲ್ಲಿ ಓಣಂ ಹಬ್ಬ ಸಹಕಾರಿಯಾಯಿತು.
ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಓಣಂ ಮಲಯಾಳಿಗಳ ಪಾಲಿಗೆ ಅತ್ಯಂತ ಸಂಭ್ರಮದ ಹಬ್ಬ. ಈ ಹಬ್ಬದಲ್ಲಿ ವಿಷ್ಣುವಿನ ಅವತಾರ ವಾಮನನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ.
ಗೋದ್ರೇಜ್ ವುಡ್ಸ್ ಮನ್ ನಲ್ಲಿ ಆಚರಿಸಲ್ಪಟ್ಟ ಓಣಂ ನಲ್ಲಿ ಹೂವಿನ ರಂಗೋಲಿಯೊಂದಿಗೆ, ಹೊಸ ಬಟ್ಟೆ ತೊಟ್ಟ ನಿವಾಸಿಗಳು ಗಮನಸೆಳೆದರು.
ಮನಸೆಳೆವ ಪೂಕಳಂ
ಹೂವಿನಿಂದಲೇ ರಂಗೋಲಿಯ ಚಿತ್ತಾರ ಬರೆವ 'ಪೂಕಳಂ' ಓಣಂ ಹಬ್ಬದ ವಿಶೇಷ. ವಿಧ ವಿಧದ ಹೂವುಗಳ ಪೊಕಳೆಯನ್ನು ಬಿಡಸಿ ಅವುಗಳ ಮೂಲಕ ಬರೆವ ಚೆಂದದ ರಂಗೋಲಿ ಪ್ರತಿ ಮನೆಯ ಮುಂದೆಯೂ ರಾರಾಜಿಸಿ ಓಣಂ ಕಳೆಯನ್ನು ದುಪ್ಪಟ್ಟಾಗಿಸುತ್ತದೆ. ಗೋದ್ರೇಜ್ ವುಡ್ಸ್ ಮನ್ ಎಸ್ಟೇಟ್ ನಲ್ಲಿ ಬರೆದ ಚೆಂದದ ರಂಗೋಲಿ ಕಂಗೊಳಿಸಿದ್ದು ಹೀಗೆ.
ಸಂಭ್ರಮಕ್ಕೆ ಇಂಬು ನೀಡುವ ಹೆಂಗೆಳೆಯರು
ಯಾವತ್ತೂ ಹಾಗೆಯೇ. ಮಹಿಳೆಯರಿದ್ದರೆ ಅಲ್ಲಿ ಸಂಭ್ರಮಕ್ಕೆ ಇಂಬು ಸಿಕ್ಕಂತೆಯೇ. ಕೇರಳದ ಪಾರಂಪರಿಕ ಶ್ವೇತ ವರ್ಣದ ಸೀರೆ ಉಟ್ಟು ಓಣಂ ಆಚರಿಸಿದ ಹೆಂಗೆಳೆಯರು ಕಂಡಿದ್ದು ಹೀಗೆ.
ರಂಗೋಲಿಯೋ? ಲಲನೆಯರೋ? ಯಾರು ಚೆಂದ?
ಎದುರುಗಡೆ ಸುಂದರ ರಂಗೋಲಿ, ಹಿನ್ನೆಲೆಯಲ್ಲಿ ಚೆಂದ ಚೆಂದದ ಸೀರೆಯುಟ್ಟು ಮಿನುಗುತ್ತಿರುವ ಲಲನೆಯರು. ರಂಗೋಲಿಯೋ, ಲಲನೆಯರೋ ಯಾರು ಚೆಂದ ಎಂದು ಪ್ರಶ್ನಿಸಿದರೆ ಉತ್ತರಿಸುವುದಕ್ಕೆ ಕಷ್ಟವಾಗುವಂತಿದೆ ಈ ದೃಶ್ಯ.
ಎಲ್ಲೆಲ್ಲೂ ಪೂಕಳಂ
ಓಣಂ ಹಬ್ಬಕ್ಕೆ ಮೆರಗು ನೀಡುವುದೇ ಪೂಕಳಂ ರಂಗೋಲಿಯಾಗಿರುವುದರಿಂದ ಎಸ್ಟೇಟ್ ನ ಹಲವೆಡೆ ಚೆಂದ ಚೆಂದದ ರಂಗೋಲಿಗಳು ಕಂಗೊಳಿಸಿದವು.
ಮೃಷ್ಟಾನ್ನ ಭೋಜನ
ಓಣ ಸಧ್ಯ ಎಂದಜು ಕರೆಯಲ್ಪಡುವ ಓಣಂ ನ ವಿಶೇಷ ಮೃಷ್ಟಾನ್ನ ಭೋಜನವನ್ನು ಮಲಯಾಳಿ ನಿವಾಸಿಗಳಲ್ಲಿ ಇಷ್ಟಪಟ್ಟು ತಿಂದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡದಿದರು.