ಕರ್ನಾಟಕದಲ್ಲಿ ಓಮಿಕ್ರಾನ್; ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿ ಇಲ್ಲ!
ಬೆಂಗಳೂರು, ಡಿಸೆಂಬರ್ 02; ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಭಾರತದಲ್ಲಿಯೇ ಮೊದಲ ಪ್ರಕರಣ ರಾಜ್ಯದಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ ಸೋಂಕು ಪತ್ತೆಯಾದರೂ ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲವಾಗಿದೆ.
46 ವರ್ಷದ ಪುರುಷನಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ (BU-1261243) ವೈದ್ಯನಾಗಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ನವೆಂಬರ್ 22ರಂದು ಆಸ್ಪತ್ರೆಯಲ್ಲಿ ಸೋಂಕಿತನ ಮಾದರಿಯನ್ನು ಪಡೆಯಲಾಗಿದ್ದು, ಪಾಟಿಸಿವ್ ಬಂದಿದೆ.
Breaking: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆ
ಸೋಂಕಿತ ವ್ಯಕ್ತಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ನವೆಂಬರ್ 21ರಂದು ಜ್ವರ ಮತ್ತು ಮೈಕೈ ನೋವಿನ ಲಕ್ಷಣಗಳು ಕಂಡುಬಂದಿವೆ. ನವೆಂಬರ್ 22ರಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ಆರ್ಟಿಪಿಸಿಆರ್ ಪರೀಕ್ಷೆಗಾಗಿ ಆಗಮಿಸಿದ್ದಾರೆ. ಸಂಜೆ 4 ಗಂಟೆಗೆ ಪಾಸಿಟಿವ್ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನ 'ಓಮಿಕ್ರಾನ್' ಪ್ರಕರಣ ದ್ವಿಗುಣ
ಪಾಸಿಟಿವ್ ಎಂದು ತಿಳಿದ ಬಳಿಕ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಸೋಂಕಿತ ವ್ಯಕ್ತಿ ನವೆಂಬರ್ 22ರಿಂದ 24ರ ತನಕ ಹೋಂ ಐಸಸೋಲೇಷನ್ಲಿದ್ದರು. ನವೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮೂರು ದಿನದ ಚಿಕಿತ್ಸೆ ಬಳಿಕ ನವೆಂಬರ್ 27ರಂದು ಡಿಸ್ಚಾರ್ಜ್ ಆಗಿದ್ದಾರೆ.
ಓಮಿಕ್ರಾನ್ ಕೊವಿಡ್ ರೂಪಾಂತರದ ಹುಟ್ಟಿಗೆ ಕಾರಣ ತಿಳಿಸಿದ ವಿಶ್ವ ಆರೋಗ್ಯ ಸಂಸ್ಥೆ
ಬಿಬಿಎಂಪಿ ನೀಡಿರುವ ಮಾಹಿತಿ ಅನ್ವಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 13 ಜನ ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿ 205 ಜನರಿದ್ದರು. ಎಲ್ಲರ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 3, ಎರಡನೇ ಹಂತದ ಸಂಪರ್ಕದಲ್ಲಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಎಲ್ಲರೂ ಐಸೋಲೇಷನ್ನಲ್ಲಿದ್ದಾರೆ.
ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕು ಪತ್ತೆ
— oneindiakannada (@OneindiaKannada) December 2, 2021
Live updates : https://t.co/uA5weFZwe1#Karnataka #OmicronVarient #B11259 #Covid19 #ಒನ್ಇಂಡಿಯಾಕನ್ನಡಸುದ್ದಿ pic.twitter.com/zBuX3AaogS
ಆರೋಗ್ಯ ಸಚಿವರ ಹೇಳಿಕೆ; ಕರ್ನಾಟಕದಲ್ಲಿ ಓಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕಿನ ಪ್ರಕರಣ ಪತ್ತೆಯಾದ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. "46 ವರ್ಷದ ವ್ಯಕ್ತಿ ವೈದ್ಯರಾಗಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ವೈದ್ಯರ ಜೊತೆ ಸಂಪರ್ಕದಲ್ಲಿದ್ದ 5 ಜನರ ವರದಿ ಪಾಸಿಟಿವ್ ಬಂದಿದೆ. 6 ಜನರು ಐಸೋಲೇಷನ್ನಲ್ಲಿದ್ದಾರೆ" ಎಂದರು.
"ಎಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿದ್ದಾರೆ. ಯಾರಿಗೂ ಸಹ ಗಂಭೀರವಾದ ರೋಗ ಲಕ್ಷಣಗಳು ಇಲ್ಲ. ಎಲ್ಲರೂ ಸಹ ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ" ಎಂದು ಸಚಿವರು ಸ್ಪಷ್ಟಪಡಿಸಿದರು.
ಬಿಬಿಎಂಪಿ ಆಯುಕ್ತರ ಪ್ರತಿಕ್ರಿಯೆ; ಬೆಂಗಳೂರು ನಗರದಲ್ಲಿ ಓಮಿಕ್ರಾನ್ ಪತ್ತೆಯಾದ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಪ್ರತಿಕ್ರಿಯೆ ನೀಡಿದ್ದಾರೆ, "ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದ್ದ 37 ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 445 ಜನರಿಗೆ ಬಿಬಿಎಂಪಿಯಿಂದ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು.
"ನಗರದಲ್ಲಿ ಕೋವಿಡ್ಡ ದೃಢಪಟ್ಟವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ. ಅಂತರಾಷ್ಟ್ರೀಯ ಪ್ರವಾಸಿಗರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಒಳಪಡಿಸುತ್ತಿದ್ದೇವೆ. ಹಿಂದೆ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶ ಬರಲು ಎರಡು ತಿಂಗಳುಗಟ್ಟಲೇ ಕಾಯಬೇಕಿತ್ತು. ಈಗ ಎಂಟದಿನದೊಳಗೆ ಕೈ ಸೇರುತ್ತಿದೆ" ಎಂದರು.
"ಓಮಿಕ್ರಾನ್ ದೃಢಪಟ್ಟ ಒಬ್ಬರು ಸೋಂಕಿತರು ಇತ್ತೀಚೆಗೆ ಯಾವುದೇ ಪ್ರವಾಸ ಕೈಗೊಂಡಿಲ್ಲ. ಆದ್ದರಿಂದ ರೂಪಾಂತರಿ ತಳಿ ಬಗ್ಗೆ ಹೆಚ್ಚಿನ ನಿಗಾವಹಿಸುವ ಅಗತ್ಯವಿದೆ. ವೈರಾಣು ಹರಡುವಿಕೆ ತಡೆಯುವ ಬಗ್ಗೆ ಬೇರೆ-ಬೇರೆ ಆಸ್ಪತ್ರೆಯ ವೈದ್ಯರ ಜೊತೆ ಸಭೆ ನಡೆಸಿದ್ದೇವೆ. ತಾಂತ್ರಿಕ ಸಲಹಾ ಸಮಿತಿಯು ಅಭಿಪ್ರಾಯ ಮತ್ತು ಸಲಹೆ ನೀಡಿದೆ. ರೂಪಾಂತರಿ ತಳಿ ಯಾವುದೇ ಇದ್ದರೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಬೇಕು" ಎಂದು ಬಿಬಿಎಂಪಿ ಆಯುಕ್ತರು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಮಾತನಾಡಿ, "ಓಮಿಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ರಾಜ್ಯದಲ್ಲಿ ಚಿತ್ರಮಂದಿರ, ಹೋಟೆಲ್ ಮತ್ತು ಮಾಲ್ಗಳನ್ನು ಮುಚ್ಚುವುದಿಲ್ಲ. ಆದರೆ ಅಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು" ಎಂದು ಹೇಳಿದ್ದಾರೆ.