ಬನಶಂಕರಮ್ಮ ಹುಂಡಿಗೆ ಬಿದ್ದ ಹಣದಲ್ಲಿ ರೂ.20 ಲಕ್ಷ ನಿಷೇಧಿತ ನೋಟುಗಳು
ನಿಷೇಧಿತ ರೂ.500 ಹಾಗು ರೂ.1000 ಮುಖಬೆಲೆಯ ನೋಟುಗಳು ದೇವಸ್ಥಾನಗಳ ಹುಂಡಿಗಳನ್ನು ಸೇರುತ್ತಿದ್ದು, ರಾಜ್ಯದ ಪ್ರಮುಖ ದೇವಾಲಯಗಳ ಆದಾಯದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ.
ಬೆಂಗಳೂರು, ನವೆಂಬರ್, 28: ಅಧಿಕ ಮುಖಬೆಲೆಯ ನೋಟು ನಿಷೇಧದಿಂದಾಗಿ ಹಲವು ಮಂದಿ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಇನ್ನು ಕೆಲವು ಮಂದಿ ಮಾತ್ರ ಅಕ್ರಮವಾಗಿ ಕೂಡಿಟ್ಟ ಹಣವನ್ನು ಏನು ಮಾಡಬೇಕೆಂದು ತೋಚದೆ ದೇವಸ್ಥಾನಗಳ ಹುಂಡಿಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಈ ಪರಿಣಾಮದಿಂದ ದೇಶದ ಹಲವು ಪ್ರಮುಖ ದೇವಸ್ಥಾನಗಳ ಹುಂಡಿಗಳು ಕೇವಲ ಎರಡೇ ವಾರಗಳಲ್ಲಿ ತುಂಬಿಹೋಗಿವೆ. ಅದರೆ ದೇವಸ್ಥಾನಗಳಿಗೆ ಸಮರ್ಪಣೆಯಾದ ಹಣದಲ್ಲಿ ಕೇವಲ ರೂ.500 ಹಾಗು ರೂ.1000 ಮುಖಬೆಲೆಯ ನೋಟುಗಳೇ ಹೆಚ್ಚಾಗಿವೆ.
ರಾಜ್ಯದಲ್ಲೂ ಇದೇ ಪರಿಸ್ಥಿತಿ ಇದ್ದು ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಸುಮಾರು 34 ಸಾವಿರ ದೇವಸ್ಥಾನಗಳ ಹುಂಡಿಗಳು ಕಳೆದ ಎರಡು ವಾರಗಳಿಂದ ತುಂಬುತ್ತಿವೆ.
ಕಳೆದ ಗುರುವಾರ ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯನ್ನು ತೆರೆದ ಆಡಳಿತ ಮಂಡಳಿ ಸಿಬ್ಬಂದಿ ರೂ. 56 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಬಿದ್ದಿದೆ ಎಂದು ತಿಳಿಸಿದ್ದಾರೆ.
ಅದರಲ್ಲಿ ಕನಿಷ್ಠ 20ಲಕ್ಷ ರೂ. ನಿಷೇಧಿತ ನೋಟುಗಳೇ ತುಂಬಿವೆ. ಅದನ್ನು ಬ್ಯಾಂಕ್ ಗೆ ನೀಡಿ ಬದಲಾಯಿಸಿಕೊಳ್ಳುತ್ತೇವೆ ಎಂದು ಆಡಳಿತ ಸಿಬ್ಬಂದಿ ತಿಳಿಸಿದ್ದಾರೆ. ಇದುವರೆಗೆ ದೇವಸ್ಥಾನದ ಹುಂಡಿಗೆ 40ಲಕ್ಷಕ್ಕೂ ಅಧಿಕ ಹಣ ಬಿದ್ದಿರಲಿಲ್ಲ. ಈಗ 56ಲಕ್ಷಕ್ಕೂ ಹೆಚ್ಚು ಹಣ ಹರಿದು ಬಂದಿದೆ ಎಂದು ಅವರು ಹೇಳುತ್ತಾರೆ.
ಕಳೆದ ಎರಡು ವಾರಗಳಲ್ಲಿ ಇಲಾಖೆಯ ದೇವಸ್ಥಾನಗಳ ಆದಾಯದಲ್ಲಿ ವಿಪರೀತ ಹೆಚ್ಚಳವಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಹಲವು ಪ್ರಮುಖ ದೇವಸ್ಥಾನಳಿಗೆ ಬರುವ ಆದಾಯ ಪರಿಗಣಿಸಿ ನಾವು ದೇವಸ್ಥಾನಗಳನ್ನು ಶ್ರೇಣಿ ಆಧಾರದ ಮೇಲೆ ವಿಂಗಡಿಸುತ್ತೇವೆ. ಆದರೆ ಹಳೆಯ ನೋಟುಗಳನ್ನು ನಿಷೇಧಿಸಿದ ನಂತರ ಹಲವು ದೇವಸ್ಥಾನಗಳ ಆದಾಯ ವಿರಪೀತ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ನಂಜನಗೂಡು ನಂಜುಡೇಶ್ವರ ದೇವಸ್ಥಾನ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಗಳ ಆದಾಯದಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. ಈ ದೇವಸ್ಥಾನಗಳಿಗೆ 3ರಿಂದ 4 ಕೋಟಿ ರೂ. ವಾರ್ಷಿಕ ಆದಾಯ ಬರುತ್ತದೆ.
ಮುಜರಾಯಿ ಇಲಾಖೆ ಸುಪರ್ದಿಗೊಳಪಟ್ಟಿರುವ ದೇವಸ್ಥಾನಗಳ ಹುಂಡಿಗಳ ಬೀಗವನ್ನು ಪ್ರತಿನಿತ್ಯ ತೆಗೆಯಲಾಗುತ್ತಿದೆ. ಮತ್ತು ಹಣವನ್ನು ಬ್ಯಾಂಕ್ ಗಳಿಗೆ ತುಂಬಿಸಲಾಗುತ್ತಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ.
ಈ ಕುರಿತು ಇಲಾಖೆಯ ಎಲ್ಲಾ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ದೇವಸ್ಥಾನಕ್ಕೆ ಬರುವ ಆದಾಯವನ್ನು ನೋಡಿಕೊಂಡು ಹುಂಡಿಗಳನ್ನು ತಿಂಗಳಿಗೊಮ್ಮೆ ತೆರೆಯುವುದಕ್ಕಿಂತ ವಾರದಲ್ಲಿ ಎರಡೂ ಬಾರಿ ಆದರೂ ತೆರೆದು ಹಣವನ್ನು ಬ್ಯಾಂಕ್ ಗಳಿಗೆ ತುಂಬಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.