ಕೋವಿಡ್ ಹೊರತುಪಡಿಸಿ ಆರೋಗ್ಯ ತುರ್ತು ಪರಿಸ್ಥಿತಿಯೆ? ಈ ಸಂಖ್ಯೆಗೆ ಕಾಲ್ ಮಾಡಿ
ಬೆಂಗಳೂರು, ಏ. 09: ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಕೋವಿಡ್ 19 ಹೊರತು ಪಡಿಸಿ ಬೇರೆ ರೋಗಿಗಳ ಪರಿಸ್ಥಿತಿ ಶೋಚನೀಯವಾಗಿದೆ. ತುರ್ತು ಆರೋಗ್ಯ ಪರಿಸ್ಥಿತಿ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಆಗದಂತಹ ಪರಿಸ್ಥಿತಿ ಬೆಂಗಳೂರು ಮಹಾನಗರದಲ್ಲಿದೆ.
ಆರೋಗ್ಯ ಇಲಾಖೆಯ ಆಂಬುಲೆನ್ಸ್ಗಳು ಸಂಪೂರ್ಣವಾಗಿ ಕೊರೊನಾ ವೈರಸ್ ಕುರಿತಾದ ತುರ್ತು ಸೇವೆಗೆ ಕಾಯ್ದಿರಿಸಲಾಗಿದೆ. ಖಾಸಗಿ ವಾಹನಗಳು ರಸ್ತೆಗೆ ಇಳಿಯಲು ಅವಕಾಶವಿಲ್ಲ. ಕೊರೊನಾ ವೈರಸ್ ಭಯದಿಂದ 108 ಆಂಬುಲೆನ್ಸ್ಗಳಲ್ಲಿ ಆಸ್ಪತ್ರೆಗೆ ತೆರಳಲು ಜನರು ಹಿಂದು ಮುಂದೆ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮತ್ತೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಬೆಂಗಳೂರಿನ ಜನರಿಗೆ ದೂರವಾಣಿ ಸಂಖ್ಯೆಯೊಂದನ್ನು ಕೊಟ್ಟಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ದೂರವಾಣಿ ಕರೆ ಮಾಡಲು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಸ್ತಬ್ಧ; ಆರೋಗ್ಯ ತುರ್ತು ಪರಿಸ್ಥಿತಿ ಆತಂಕದಲ್ಲಿ ಜನರು
ಕೊರೊನಾ ವೈರಸ್ ಹೆಚ್ಚಾಗಿರುವ ದೇಶದ ಹಾಟ್ಸ್ಪಾಟ್ಗಳಲ್ಲಿ ಒಂದು ಗುರುತಿಸಿಕೊಂಡಿರುವ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಕೊರೊನಾ ವೈರಸ್ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಬೇರೆ ರೋಗಿಗಳ ಪರಿಸ್ಥಿತಿ ಆತಂಕದಲ್ಲಿದೆ. ಹೃದಯಾಘಾತ ಸೇರಿದಂತೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಸರ್ಕಾರ ಜನರ ಸಹಾಯಕ್ಕೆ ಬಂದಿದೆ. ಖಾಸಗಿ ಸಾರಿಗೆ ಸಂಸ್ಥೆಗಳಾಗಿರುವ ಊಬರ್, ಓಲಾ ಕ್ಯಾಬ್ ಸೇವೆಯನ್ನು ಪಡೆಯಲು ಸರ್ಕಾರ ನಿರ್ಧರಿಸಿ, ಆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ಓಲಾ ಮತ್ತು ಊಬರ್ ಸೇವೆ ಪ್ರಾರಂಭ
ತುರ್ತು ಆರೋಗ್ಯ ಸೇವೆಗಾಗಿ ಓಲಾ ಮತ್ತು ಊಬರ್ ಕ್ಯಾಬ್
ತುರ್ತು ಆರೋಗ್ಯ ಸೇವೆಗಾಗಿ ಓಲಾ ಮತ್ತು ಊಬರ್ ಕ್ಯಾಬ್ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುರ್ತು ಆರೋಗ್ಯ ಸೇವೆಗೆ 100 ಓಲಾ ಮತ್ತು 100 ಊಬರ್ ಕ್ಯಾಬ್ಗಳು ರಸ್ತೆಗೆ ಇಳಿದಿವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ತಿಳಿಸಿದ್ದಾರೆ. ಜೊತೆಗೆ ಓಲಾ, ಊಬರ್ ಸೇವೆಗೆ ಚಾಲನೆ ಕೊಟ್ಟಿದ್ದಾರೆ.
ತುರ್ತು ಸೇವೆಗಾಗಿ ದೂರವಾಣಿ ಸಂಖ್ಯೆ: 9154153917, 9154153918 ಹಾಗೂ 9154153919 ಸಂಖ್ಯೆಗಳಿಗೆ ಅಥವಾ ಊಬರ್, ಓಲಾ ಆ್ಯಪ್ ಮೂಲಕವೂ ಕ್ಯಾಬ್ಗಳನ್ನು ಬುಕ್ ಮಾಡಬಹುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಹಾಟ್ಸ್ಪಾಟ್ ಆಗಿದೆ ಬೆಂಗಳೂರು
ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಾಟ್ಸ್ಪಾಟ್ಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್ಡೌನ್ ಆದೇಶವನ್ನು ಜಾರಿಗೆ ತರಲಾಗಿದೆ. ಬೆಂಗಳೂರಿನಲ್ಲಿ ಈವರೆಗೆ ಒಟ್ಟು 65 ಪ್ರಕರಣಗಳು ಸೋಂಕುಗಳು ದೃಢಪಟ್ಟಿವೆ. ಒಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರಿಂದಾಗುವ ತೊಂದರೆ ನಿವಾರಿಸಲು ಈ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಲಾಕ್ಡೌನ್ ವಿಸ್ತರಣೆ ಕುರಿತು ಪ್ರಧಾನಿ ಜೊತೆ ಚರ್ಚಿಸಿ ನಾಳೆ ತೀರ್ಮಾನ: ಬಿಎಸ್ವೈ
ಏ. 14ರ ಬಳಿಕವೂ ಲಾಕ್ಡೌನ್ ಮುಂದುವರಿಕೆ
ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಏಪ್ರಿಲ್ 14ರ ಬಳಿಕವೂ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಲು ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಆಗಬಹುದಾದ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಓಲಾ, ಊಬರ್ ಸಾರಿಗೆ ವ್ಯವಸ್ಥೆಯ ಮೊರೆ ಹೋಗಿದೆ. ಬೆಂಗಳೂರಿನ ಸಾಮಾನ್ಯ ರೋಗಿಗಳಿಗೆ ಮಾತ್ರ ಈ ಸೌಲಭ್ಯದ ಅನಕೂಲವಿದೆ.