ಓಕಳಿಪುರಂ ಸಿಗ್ನಲ್ ಫ್ರೀ ಕಾರಿಡಾರ್ ಮುಗಿಸಲು ಗಡುವು ನೀಡಿದ ಮೇಯರ್
ಬೆಂಗಳೂರು, ಅಕ್ಟೋಬರ್ 25 : ಬೆಂಗಳೂರಿನ ಓಕಳಿಪುರಂನಲ್ಲಿ ನಡೆಯುತ್ತಿರುವ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಮುಗಿಸಲು ಮೇಯರ್ ಗಡುವು ನೀಡಿದ್ದಾರೆ. 352 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಮಂಗಳವಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಬಿಬಿಎಂಪಿ ಮೇಯರ್ ಸಂಪತ್ ರಾಜ್, 'ಎಂಟು ಪಥಗಳ ಮೇಲ್ಸೇತುವೆ ಕಾಮಗಾರಿಯನ್ನು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಿದ್ದೇನೆ' ಎಂದರು.
ಚಿತ್ರಗಳು : ಓಕಳಿಪುರಂ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ
'352 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ರೈಲ್ವೆ ಇಲಾಖೆಯಿಂದ ಸ್ವಾಧೀನ ಪಡಿಸಿಕೊಂಡಿರುವ 3 ಎಕರೆ 20 ಗುಂಟೆ ಜಾಗಕ್ಕೆ 154 ಕೋಟಿ ರೂ. ಪಾವತಿ ಮಾಡಲಾಗಿದೆ. 8 ಅಂಡರ್ ಪಾಸ್, 2 ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ 95 ಕೋಟಿ ಒದಗಿಸಲಾಗಿದೆ' ಎಂದು ತಿಳಿಸಿದರು.
ಓಕಳಿಪುರಂ ಅಷ್ಟಪಥ ಕಾಮಗಾರಿಯ ಅಡ್ಡಿಗಳು ನಿವಾರಣೆ
'ಮಲ್ಲೇಶ್ವರಂನಿಂದ ಸಿಟಿ ರೈಲು ನಿಲ್ದಾಣ, ರಾಜಾಜಿನಗರದಿಂದ ಸಿಟಿ ರೈಲು ನಿಲ್ದಾಣ ಸಂಪರ್ಕಿಸುವ ಎರಡು ಪಥದ ರಸ್ತೆ ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿವೆ. ಉಳಿದ ರಸ್ತೆಗಳನ್ನು ಮಾರ್ಚ್ ಅಂತ್ಯದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಿದ್ದೇನೆ' ಎಂದು ಹೇಳಿದರು.
'ಓಕಳಿಪುರಂ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ತುಮಕೂರು, ಮೈಸೂರು ರಸ್ತೆಗೆ ಸಂಚರಿಸುವ ವಾಹನ ಸವಾರರಿಗೆ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ರಾಜಾಜಿನಗರ, ವಿಜಯನಗರ, ಮಲ್ಲೇಶ್ವಂ ಕಡೆಗೆ ಸಾಗುವ ವಾಹನ ಸವಾರರಿಗೆ ಅನುಕೂಲವಾಗಲಿದೆ' ಎಂದು ಸಂಪತ್ ರಾಜ್ ತಿಳಿಸಿದರು.