ಮಂತ್ರಿ ಮಾಲ್, ಓರೆಯಾನ್ ಮಾಲ್, ಸಿಗ್ಮಾ ಮಾಲ್ ಮೇಲೆ ದಾಳಿ
ಮಿನರಲ್ ವಾಟರ್ ಬಾಟಲಿಗಳನ್ನು ನಿಗದಿತ ದರಕ್ಕಿಂತ ಹೆಚ್ಚು ಮೊತ್ತ ಖರೀದಿಸಬೇಕಾಗಿರುವ ದುಸ್ತಿತಿಗೆ ಮಾಲ್ ಗಳಿಗೆ ಬರುವ ಗ್ರಾಹಕರನ್ನು ತಳ್ಳಲಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ.
ಬೆಂಗಳೂರು, ಮೇ 3: ನೀರಿನ ಬಾಟಲಿಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಗರದ ಕೆಲ ಪ್ರತಿಷ್ಠಿತ ಶಾಪಿಂಗ್ ಮಾಲ್ ಗಳ ಮೇಲೆ ಬುಧವಾರ ಮಧ್ಯಾಹ್ನ ರಾಜ್ಯ ಕಾನೂನು ಮಾಪನ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜಾಜಿ ನಗರದಲ್ಲಿರುವ ಒರಿಯಾನ್ ಮಾಲ್, ಮಲ್ಲೇಶ್ವರಂನಲ್ಲಿನ ಮಂತ್ರಿ ಮಾಲ್ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಸಿಗ್ಮಾ ಮಾಲ್ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಿನರಲ್ ವಾಟರ್ ಬಾಟಲಿಗಳನ್ನು ನಿಗದಿತ ದರಕ್ಕಿಂತ ಹೆಚ್ಚು ಮೊತ್ತ ಖರೀದಿಸಬೇಕಾಗಿರುವ ದುಸ್ತಿತಿಗೆ ಮಾಲ್ ಗಳಿಗೆ ಬರುವ ಗ್ರಾಹಕರನ್ನು ತಳ್ಳಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಅವರು ದಾಳಿ ನಡೆಸಲು ಆದೇಶ ನೀಡಿದ್ದರು. ಹಾಗಾಗಿ, ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ನಗರದ ಕೆಲ ಮಾಲ್ ಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಮಾಲ್ ಗಳಲ್ಲಿನ ವಿವಿಧ ಅಂಗಡಿಗಳಲ್ಲಿದ್ದ ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.