ಬಂಧುಗಳನ್ನು ಕಣ್ತುಂಬ ನೋಡಿಕೊಂಡು ಮನೆಯಿಂದ ಹೊರಡಿ
ಬೆಂಗಳೂರು, ಅಕ್ಟೋಬರ್ 14 : ಬೆಂಗಳೂರಿನಲ್ಲಿ ಬೆಳಗಿನಲ್ಲಾಗಲಿ, ಸಂಜೆಯ ಹೊತ್ತಿನಲ್ಲಾಗಲಿ ರಸ್ತೆಗಿಳಿಯುವ ಮುನ್ನ, ಬಂಧುಗಳನ್ನು ಒಂದು ಬಾರಿ ಕಣ್ತುಂಬ ನೋಡಿಕೊಂಡು, ಸಂಜೆ ಸುರಕ್ಷಿತವಾಗಿ ಮನೆಗೆ ವಾಪಸ್ ಬರುವಂತಾಗಲಪ್ಪಾ ಎಂದು ಮನೆಯ ದೇವರಿಗೆ ಒಂದು ನಮಸ್ಕಾರ ಹಾಕಿಕೊಂಡು ಹೊರಬೀಳುವಂಥವರಾಗಿ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಬಿಬಿಎಂಪಿಯನ್ನಾಗಲಿ, ಬೆಂಗಳೂರಿನ ಮೇಯರ್ ಸಂಪತ್ ರಾಜ್ ಅವರನ್ನಾಗಲಿ, ಬೆಂಗಳೂರಿನ ಅಭಿವೃದ್ಧಿಯನ್ನು ತಲೆಯ ಮೇಲೆ ಹೊತ್ತುಕೊಂಡಿರುವ ಶ್ರೀಮಾನ್ ಕೆಜೆ ಜಾರ್ಜ್ ಅವರನ್ನಾಗಲಿ ಅಥವಾ ಇಡೀ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರನ್ನಾಗಲಿ ನಂಬಿಕೊಂಡು ರಸ್ತೆಗಿಳಿಯಿರುವ ಸಂದರ್ಭ ಇದಲ್ಲವೇ ಅಲ್ಲ.
ಎಚ್ಎಸ್ಆರ್ ಬಡಾವಣೆಯ ರಸ್ತೆಯ ಮೇಲೆ ಜನರ ಕಣ್ಣೀರ ಕಾಲುವೆ
ಇದು ವಸ್ತುಸ್ಥಿತಿ. ಎಲ್ಲಿ ರಸ್ತೆಗುಂಡಿ ತೆರೆದುಕೊಂಡಿದೆಯೋ, ಎಲ್ಲಿ ರಾಜಾಕಾಲುವೆ ಬಾಯಿಬಿಟ್ಟುಕೊಂಡಿದೆಯೋ, ಎಲ್ಲಿ ಪ್ರವಾಹ ಉಕ್ಕಿಬರುತ್ತದೆಯೋ ನಂಬಲಸಾಧ್ಯವಾದ ಪರಿಸ್ಥಿತಿ ಬೆಂಗಳೂರಿನಲ್ಲಿ. ಮೊದಲು ಸಂಜೆ ಅಥವಾ ರಾತ್ರಿ ಮಾತ್ರ ಸುರಿಯುತ್ತಿದ್ದ ಮಳೆ ಈಗೀಗ ಹಗಲು ಕೂಡ ಸುರಿಯುತ್ತಿದೆ. ಶನಿವಾರ, ಅಕ್ಟೋಬರ್ 14 ಕೂಡ ವಿಭಿನ್ನವಾಗಿಲ್ಲ.
ಪರಮ ದುರವಸ್ಥೆಯ ಆಗರ ಲಗ್ಗೆರೆ ಸೇತುವೆ ಅಕ್ಕಪಕ್ಕ
ಕೆಲವೆಡೆ ಬೆಳಗಿನಿಂದಲೇ ಮಳೆ ಪ್ರತ್ಯಕ್ಷವಾದರೆ, ಜಯನಗರದಂಥ ಬಡಾವಣೆಯಲ್ಲಿ ಮಧ್ಯಾಹ್ನವೇ ಕಡುಗತ್ತಲಾವರಿಸಿಕೊಂಡು ಮಳೆಯ ನರ್ತನ ಆರಂಭವಾಗಿದೆ. ಶನಿವಾರವಾದ್ದರಿಂದ ಮನೆಯಲ್ಲಿಯೇ ಇದ್ದಿರೋ ನಿಮಗಿಂತ ಪುಣ್ಯವಂತರು ಇನ್ನೊಬ್ಬರಿಲ್ಲ. ಬದಲಾಗಿ, ಸಿನೆಮಾ ನೋಡೋಣವೆಂದು, ಕಚೇರಿಗೆ ಹೋಗೋಣವೆಂದು ರಸ್ತೆಗಿಳಿದಿರೋ ನೀವುಂಟು ನಿಮ್ಮ ಗ್ರಹಚಾರವುಂಟು.
ಒನ್ಇಂಡಿಯಾ ಫಲಶ್ರುತಿ : ಆವಲಹಳ್ಳಿ ಜಂಕ್ಷನ್ ನಲ್ಲಿ ಪೇದೆ ಪ್ರತ್ಯಕ್ಷ
ವಾರದ ಹಿಂದೆ ಬಿಬಿಎಂಪಿಯೇ ಲೆಕ್ಕ ಕೊಟ್ಟಂತೆ 20 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಮುಚ್ಚಲು ಅರ್ಜಿ ಹಾಕಿಕೊಂಡಿದ್ದವು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಭರ್ಜರಿ ವರ್ಷಧಾರೆ ಆಗುತ್ತಿರುವುದರಿಂದ, ರಸ್ತೆಗುಂಡಿಗಳ ಸಂಖ್ಯೆ 50 ಸಾವಿರ ಮೀರಿದ್ದರೂ ಅಚ್ಚರಿಯಿಲ್ಲ. ಕೆಲವೆಡೆ ತಾತ್ಕಾಲಿಕವಾಗಿ ಮುಚ್ಚಲಾಗಿದೆಯಾದರೂ, ಮಳೆಯ ಹೊಡೆತಕ್ಕೆ ರಸ್ತೆಗಳು ಮತ್ತಷ್ಟು ಅಧ್ವಾನವಾಗಿವೆ.
ರೇನ್ ಕೋಟ್, ಛತ್ರಿ ನಿಮ್ಮ ಸಂಗಾತಿಯಾಗಿರಲಿ
ಬೈಕಲ್ಲಿ ಹೋಗುವವರು ರೇನ್ ಕೋಟ್ ಜೊತೆಯಲ್ಲಿಟ್ಟುಕೊಳ್ಳಿ, ಬಸ್ಸಲ್ಲಿ ಅಡ್ಡಾಡುವವರು ಛತ್ರಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಕಾರಲ್ಲಿ ಅಡ್ಡಾಡುವವರು ಕೂಡ ರಾಜಾ ಕಾಲುವೆ ಬಳಿ ದಾಟುವಾಗ ಅತ್ಯಂತ ಜಾಗರೂಕತೆಯಿಂದ ದಾಟಬೇಕು. ಅಲ್ಲದೆ ಮುಂದೆ ವಾಹನ ಓಡಿಸುವವರ ಬಗ್ಗೆ ಕೂಡ ಎಚ್ಚರಿಕೆ ಇರಬೇಕು.
ಸ್ವಲ್ಪ ತಡವಾದರೆ ಆಕಾಶವೇನೂ ಕಳಚಿಬೀಳುವುದಿಲ್ಲ
ಬೆಳಿಗ್ಗೆ ಮನೆಯಿಂದ ಕಚೇರಿಗೆ ಅಥವಾ ಸಂಜೆಯ ವೇಳೆ ಕಚೇರಿಯಿಂದ ಕೆಲಸ ಮುಗಿಸಿ ಮನೆ ತಲುಪುವುದು ಅರ್ಧ ಗಂಟೆ ತಡವಾದರೂ ಪರವಾಗಿಲ್ಲ, ಮಳೆಯ ಪ್ರಭಾವ ಕಡಿಮೆಯಾದ ಮೇಲೆ ಹೊರಡಿ. ಎಲ್ಲಾದರೂ ಸಿಲುಕಿಕೊಂಡಿದ್ದರೆ ಮನೆಯವರಿಗೆ ನೀವೆಲ್ಲಿದ್ದೀರೆಂದು ತಪ್ಪದೆ ಫೋನ್ ಮಾಡಿ ತಿಳಿಸಿ.
ಪ್ರವಾಹ ದಾಟುವ ಹುಂಬ ಸಾಹಸ ಬೇಡ
ನೀರಿನ ಪ್ರವಾಹ ಜೋರಾಗಿದ್ದರೆ ಅಪ್ಪಿತಪ್ಪಿಯೂ ಅದನ್ನು ದಾಟುವ ಹುಂಬ ಸಾಹಸಕ್ಕೆ ಇಳಿಯಬೇಡಿ. ಮಕ್ಕಳಿದ್ದರಂತೂ ಇನ್ನಷ್ಟು ಜಾಗರೂಕರಾಗಿರಿ. ಜನನ ಮರಣ ನಮ್ಮ ಕೈಲಿಲ್ಲವಾದರೂ, ಬುದ್ಧಿಯಂತೂ ಕನಿಷ್ಠ ನಮ್ಮ ತಲೆಯಲ್ಲಿರಬೇಕು.
ತೆರೆದ ಗುಂಡಿ ಮುಂದೆ ಇದ್ದಿರಬಹುದೆ?
ದ್ವಿಚಕ್ರ ಅಥವಾ ನಾಲ್ಕು ಚಕ್ರಗಳ ವಾಹನದಲ್ಲಿ ಅಡ್ಡಾಡುವಾಗ ಮುಂದೆ ತೆರೆದ ಗುಂಡಿ ಮುಂದೆ ಇದ್ದಿರಬಹುದೆ ಎಂಬ ಎಚ್ಚರಿಕೆಯಿಂದಲೇ ಗಾಡಿ ಚಲಾಯಿಸಿ. ಎಲ್ಲಕ್ಕಿಂತ ಹೆಚ್ಚಾಗಿ ಬಿಸಿರಕ್ತದ ಹುಡುಗರು ಪಲ್ಸರ್, ಡಿಯೋ, ಡ್ಯೂಕ್ ಓಡಿಸುವಾಗ ನಿಮಗೂ ಅಪ್ಪಅಪ್ಪ, ಅಕ್ಕತಂಗಿಯರಿದ್ದಾರೆ ಎಂಬುದು ಗಮನದಲ್ಲಿಟ್ಟು ಗಾಡಿ ಓಡಿಸಿ.
ಮನೆ ಬಿದ್ದರೆ ಮತ್ತೆ ಕಟ್ಟಿಕೊಳ್ಳಬಹುದು
ನಿಮ್ಮ ಮನೆ ತೀರ ಹಳೆಯದಾಗಿದ್ದರೆ ಅಥವಾ ಬೀಳುವ ಅಪಾಯವಿದ್ದರೆ ದಯವಿಟ್ಟು ಸಂಸಾರ ಸಮೇತರಾಗಿ ಬೇರೆಡೆಗೆ ಸ್ಥಳಾಂತರಗೊಳ್ಳಿರಿ ಅಥವಾ ಗೋಡೆ ಬೀಳದಂತೆ ಕ್ರಮ ತೆಗೆದುಕೊಳ್ಳಿ. ಮನೆ ಬಿದ್ದರೆ ಮತ್ತೆ ಕಟ್ಟಿಕೊಳ್ಳಬಹುದು. ಏನಾದರೂ ಜೀವಕ್ಕೆ ಅಪಾಯ ಉಂಟಾದರೆ, ಸಾಂತ್ವನ ಹೇಳಲು ಸಿದ್ದರಾಮಯ್ಯ ಬರಬಹುದು, ಆದರೆ ಅದಕ್ಕೆ ಹೊಣೆಗಾರರು ನೀವೇ ಆಗುತ್ತೀರಿ.
ಸಿಕ್ಕಸಿಕ್ಕದ್ದನ್ನು ರಸ್ತೆಬದಿಯಲ್ಲಿ ತಿನ್ನಬೇಡಿ
ಎಲ್ಲೆಲ್ಲಿಯೂ ವೈರಲ್ ಜ್ವರ ಹರಡುತ್ತಿರುವುದರಿಂದ ಮಳೆ ಬರುತ್ತಿದೆಯೆಂದು ರಸ್ತೆ ಬದಿಯಲ್ಲಿ ಮಾರುವ ಬಜ್ಜಿ, ಬೋಂಡಾ ತಿನ್ನಬೇಡಿ. ಬಾಯಿರುಚಿಗಿಂತ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಇನ್ನು ಮನೆಯಲ್ಲಿಯೇ ಇರುವ ಸೌಭಾಗ್ಯ ನಿಮ್ಮದಾಗಿದ್ದರೆ, ಕಾಫಿ ಜೊತೆ ಕ್ಯಾಪ್ಸಿಕಂ ಬೋಂಡಾನೋ, ಬಾಳೆಕಾಯಿ ಬಜ್ಜಿಯನ್ನೋ ಮಾಡಿ ತಿಂದು ಮಜಾ ಮಾಡಿ.