ಕಾವೇರಿ ನೀರು, ಒಳಚರಂಡಿ ಸಂಪರ್ಕಕ್ಕೆ ಸ್ವಾಧೀನಾನುಭವ ಪತ್ರ ಬೇಕಿಲ್ಲ
ಬೆಂಗಳೂರು, ಫೆಬ್ರವರಿ 13: ಕಾವೇರಿ ನೀರು, ಒಳಚರಂಡಿ ಸಂಪರ್ಕ ಕಲ್ಪಿಸಲು ಸ್ವಾಧೀನಾನುಭವ ಪತ್ರ(OC) ಕಡ್ಡಾಯಗೊಳಿಸುವ ಆದೇಶವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 30/40 ಮತ್ತು 60/40 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲು ಸ್ವಾಧೀನಾನುಭವ ಪತ್ರ ಬೇಕಿಲ್ಲ. ಒಸಿ ಸಲ್ಲಿಸದ ಕಟ್ಟಡಗಳಿಗೆ ನೀರಿನ ತೆರಿಗೆಯಲ್ಲಿ ಶೇ.50ರಷ್ಟು ದಂಡ ಶುಲ್ಕ ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬೇಸಿಗೆ ಉತ್ತರ ಕನ್ನಡದ 423 ಹಳ್ಳಿ ಜನರ ಗಂಟಲಾರಿಸಲಿದೆ
2016ರ ಮೇ ನಂತರ ನಿರ್ಮಾಣವಾಗಿರುವ ನೆಲಮಹಡಿ ಜೊತೆ ಎರಡು ಮಹಡಿ ಮೇಲ್ಪಟ್ಟ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರು, ಒಳಚರಂಡಿ ಸೌಲಭ್ಯ ಕಲ್ಪಿಸಲು ಒಸಿ ನೀಡಬೇಕೆಂಬ ಆದೇಶ ಹೊರಡಿಸಲಾಗಿದೆ. ಒಸಿ ಇಲ್ಲದ ವಸತಿ ಕಟ್ಟಡಗಳಿಗೆ ನೀರಿನ ಶೇ.50ರಷ್ಟು ದಂಡ ಶುಲ್ಕ ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ.100ರಷ್ಟು ದಂಡ ಶುಲ್ಕ ವಿಧಿಸಲಾಗುತ್ತಿದೆ.
2017ರ ಡಿ.12ರಂದು ಪಾಲಿಕೆ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ 5 ಅಡುಗೆ ಕೋಣೆಗಳಿಗಿಂತ ಜಾಸ್ತಿ ಇರುವ ಅಥವಾ 5ಕ್ಕಿಂತ ಹೆಚ್ಚು ಕೋಣೆಗಳು ಒಂದೇ ಮಹಡಿಯಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ತಾತ್ಕಾಲಿಕ ನೀರು, ಒಳಚರಂಡಿ ಸಂಪರ್ಕ ಕಲ್ಪಿಸಲು ಒಸಿ ಕಡ್ಡಾಯಗೊಳಿಸಲಾಗಿದೆ.
ಐದು ಸಾವಿರ ಚ.ಮೀ ವಿಸ್ತೀರ್ಣದೊಳಗಿನ ವಸತಿ ಕಟ್ಟಡಗಳು ಮತ್ತು 3001 ಚ.ಮೀ ವಿಸ್ತೀರ್ಣ ಹೊಂದಿರುವ ವಾಣಿಜ್ಯ ಕಟ್ಟಡಗಳಿಂದ ಒಸಿ ಪಡೆಯದೆ ನೀರು, ಒಳಚರಂಡಿ ಸಂಪರ್ಕ ನೀಡಲಾಗುತ್ತಿದೆ.