ಬೆಂಗಳೂರಿನಲ್ಲಿ ಘರ್ಷಣೆಗೆ ಕಾರಣವಾಯ್ತು ಹೈದ್ರಾಬಾದ್ ಪ್ರಕರಣ
ಬೆಂಗಳೂರು, ಜನವರಿ,22: ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಆತ್ಮಹತ್ಯೆ ಇದೀಗ ಎನ್ಎಸ್ ಯುಐ ಹಾಗೂ ಎಬಿವಿಪಿ ನಡುವಿನ ಘರ್ಷಣೆಗೂ ಕಾರಣವಾಗಿದ್ದು, ಈ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಎಬಿವಿಪಿ ಮುಖಂಡರು ಮಾಧ್ಯಮಗಳಲ್ಲಿ ದಲಿತ ವಿದ್ಯಾರ್ಥಿ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಎನ್ಎಸ್ ಯುಐ ಖಂಡಿಸಿದ್ದು, ಎಬಿವಿಪಿ ಕಚೇರಿ ಮುಂದೆ ನಡೆದ ಪ್ರತಿಭಟನೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಈ ಕ್ರಮಕ್ಕೆ ಮುಂದಾದರು.[ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]
ಎಬಿವಿಪಿ ಮುಖಂಡರು ಹೇಳಿದ್ದೇನು?
ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಕ್ಸಲ್ ಹಾಗೂ ಉಗ್ರವಾದಿಗಳ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ನಡೆದ ಚರ್ಚೆಯಲ್ಲಿ ಹೇಳಿದ ಪರಿಣಾಮ ಎನ್ಎಸ್ ಯುಐ ಸಂಘಟನಾಕಾರರು ಎಬಿವಿಪಿ ವಿರುದ್ಧ ಕಿಡಿಕಾರಿದರು.
ಎಬಿವಿಪಿ ಮುಖಂಡರು ಈ ಹೇಳಿಕೆ ಸಾಬೀತು ಪಡಿಸಲಿ ಎಂದು ಎನ್ಎಸ್ ಯುಐ ಪಟ್ಟು ಹಿಡಿದ ಪರಿಣಾಮ ಎಬಿವಿಪಿ ಹಾಗೂ ಎನ್ಎಸ್ ಯುಐ ನಡುವೆ ಕಲ್ಲು ತೂರಾಟಗಳು ನಡೆದಿದ್ದು, ಎರಡು ತಂಡದವರೂ ಗಾಯಗೊಂಡಿದ್ದಾರೆ.[ಎಬಿವಿಪಿ ಕಾರ್ಯಕರ್ತರ ಮೇಲೆ ಎನ್ ಎಸ್ ಯುಐ ದಾಳಿ]
ಈ ಕುರಿತು ಶೇಷಾಧ್ರಿಪುರಂ ಪೊಲೀಸ್ ಠಾಣೆಯಲ್ಲಿ ಎನ್ಎಸ್ ಯುಐ ಜನರಲ್ ಸೆಕ್ರೆಟರಿ ಸಿರಿಲ್ ಪ್ರಭು, ಅಸೆಂಬ್ಲಿ ಕೋ ಆರ್ಡಿನೆಟರ್ ಸಂತೋಷ್ ಕುಮಾರ್, ಸ್ಟೇಟ್ ಸೆಕ್ರೆಟರಿ ಕೀರ್ತಿ ಗಣೇಶ್ ಇನ್ನು ಮುಂತಾದವರು ಸೇರಿ ಎಬಿವಿಪಿ ವಿರುದ್ಧ ದೂರು ನೀಡಿದ್ದಾರೆ.