ಡಿಕೆ ಹೇಳಿದ್ದು ಸುಳ್ಳಾ ? ಸಂತೋಷ್ ಹೇಳ್ತಿರೋದು ಸುಳ್ಳಾ ?
ಬೆಂಗಳೂರು, ಡಿಸೆಂಬರ್ 1: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಎನ್. ಆರ್. ಸಂತೋಷ್ ಮನೆಗೆ ತೆರಳಿದ್ದು, "ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಡಿ.ಕೆ. ಶಿವುಕುಮಾರ್ ಅವರು ಎಂಭತ್ತು ಶಾಸಕರನ್ನು ಇಟ್ಟುಕೊಂಡು ಸರ್ಕಾರ ಮಾಡಿದವರು, ಎಂಭತ್ತು ತರ ಮಾತನಾಡುತ್ತಾರೆ"ಎಂದು ಸಂತೋಷ್ ಹೇಳಿದ್ರು. "ಸಿಡಿಯೊಂದು ಎಂಎಲ್ಸಿ ಮೂಲಕ ಕೇಂದ್ರದ ನಾಯಕರಿಗೆ ತಲುಪಿದೆ, ಅದು ಎಡವಟ್ಟಾಗಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ" ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು. ಇವರಿಬ್ಬರಲ್ಲಿ ಯಾರ ಮಾತು ನಿಜ ? ಯಾರು ಸುಳ್ಳು ? ಸಿಡಿ ಹಾಗೂ ಪೆನ್ ಡ್ರೈವ್ ಗಾಗಿ ಸಂತೋಷ್ ಮಾಡಿದ್ದ ಕೃತ್ಯ ಸುಳ್ಳಾ ? ದಾಖಲೆಗಳ ಸಮೇತ ಇಲ್ಲಿ ವಿವರಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ನಾನಾ ವಿಚಾರಗಳು ಚರ್ಚೆಗೆ ಬಂದಿವೆ. ಅದರಲ್ಲಿ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣ ಸಂತೋಷ್ ಪಾಲಿಗೆ ನುಂಗುಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಎನ್. ಆರ್. ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್; ಹೇಳಿದ್ದೇನು?
ಪೊಲೀಸರ ಹೊರಸಿರುವ ದೋಷಾರೋಪ ಪಟ್ಟಿ ರದ್ದು ಕೋರಿ ಸಂತೋಷ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅದಕ್ಕೆ ಆಕ್ಷೇಪಿಸಿರುವ ದೂರುದಾರ ವಿನಯ್ ತನ್ನ ವಾದವನ್ನು ತಾನೇ ಮಂಡಿಸಿ 80 ಪುಟಗಳ ಆಕ್ಷೇಪಣೆ ಸಲ್ಲಿಸಿದ್ದಾರೆ. ಬರುವ ಡಿಸೆಂಬರ್ 14 ರಂದು ಸಂತೋಷ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯ ಸಮಗ್ರ ವಿವರ ಒನ್ ಇಂಡಿಯಾ ಕನ್ನಡ ತನ್ನ ಓದುಗರ ಮುಂದಿಡುತ್ತಿದೆ.
ಅವತ್ತು ಮೇ. 11, 2017 ರಂದು ಈಶ್ವರಪ್ಪ ಅವರ ಆಪ್ತ ಸಹಾಯಕರಾಗಿದ್ದ ವಿನಯ್ ಅಪಹರಣ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತೀಚೆಗೆ ನಿವೃತ್ತಿ ಹೊಂದಿರುವ ಎಸ್ಪಿ ಬಡಿಗೇರ್ ಎ.ಆರ್. ಅವರು ತನಿಖಾಧಿಕಾರಿಯಾಗಿದ್ದಾರೆ. ಪ್ರಕರಣ ಸಂಖ್ಯೆ 163/2017 ಗೆ ಸಂಬಂಧಿಸಿದಂತೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 143, 147, 323, 325, 364(a), 511, 331, 120(b) 201 (R/w) 149 ಅಡಿ ದೋಷಾರೋಪ ಹೊರಿಸಿದ್ದಾರೆ. ಇದರಲ್ಲಿ ಮುಖ್ಮಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಮೊದಲ ಆರೋಪಿ. ಒಟ್ಟು ಹನ್ನೆರಡು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದ್ದು 2018 ಡಿಸೆಂಬರ್ 17 ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ರಾಜೇಂದ್ರ, ಶ್ರೀಕಾಂತ್, ಕಿಶೋರ್, ಅಯ್ಯಪ್ಪ, ಸೆಲ್ವ, ಅಭಿಷೇಕ್ ರಾವ್, ಶಿವಪ್ಪ, ಅರವಿಂದ ಸೇರಿದಂತೆ ಹನ್ನೆರಡು ಮಂದಿ ಆರೋಪಿಗಳಾಗಿದ್ದಾರೆ.
ಸಂತೋಷ್ ಆತ್ಮಹತ್ಯೆ ಯತ್ನ: ಆ ಸಚಿವ ಯಾರು? ಆ ಪರಿಷತ್ ಸದಸ್ಯ ಯಾರು?
ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಸೆಕ್ಷನ್ ಗಳ ಪೈಕಿ ಗಂಭೀರವಾಗಿರುವ ಆರೋಪ ಐಪಿಸಿ ಸೆಕ್ಷನ್ 364(a), ಅಪಹರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಭೀತಾದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರೊಂದಿಗೆ ಸಾಕ್ಷಿಗಳನ್ನು ನಾಶ ಮಾಡುವ ಆರೋಪಕ್ಕೆ ಸಂಬಂಧಿಸಿದಂತೆ ಸೆಕ್ಷನ್ 201 ಅಡಿ ಆರೋಪ ಹೊರಿಸಲಾಗಿದೆ. 120(b) ಸಂಚು ರೂಪಿಸಿರುವ ಅಪರಾಧ, ಇಂತಹ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇಷ್ಟೆಲ್ಲಾ ನಡೆಯುವುದು ಒಂದು ಸಿಡಿ ಹಾಗೂ ಪೆನ್ ಡ್ರೈವ್ ಗಾಗಿ. ಆದರೆ, ದೋಷಾರೋಪ ಪಟ್ಟಿಯಲ್ಲಿ ಆ ಪೆನ್ ಡ್ರೈವ್ ಯಾರಿಗೆ ಸೇರಿದ್ದು, ಅದರಲ್ಲಿ ಏನಿತ್ತು ಎಂಬ ವಿಚಾರವನ್ನು ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.
ಯಡಿಯೂರಪ್ಪ ಅವರ 'ಟ್ರಸ್ಟ್, ಸಂತೋಷ್ ಬೆಳೆದು ಬಂದ ದಾರಿ
ಬಿಜೆಪಿ ಕಾರ್ಯಕರ್ತನಾಗಿರುವ ವಿನಯ್ ಅವರ ಬಳಿ ಕೆ.ಎಸ್. ಈಶ್ವರಪ್ಪ ಅವರಿಗೆ ಸಂಬಂಧಿಸಿದ ಪೆನ್ಡ್ರೈವ್ ಹಾಗೂ ಸಿಡಿ ಇದೆ. ಹೇಗಾದರೂ ಮಾಡಿ ಅವನ್ನು ಪಡೆಯಲು ಮೊದಲನೇ ಆರೋಪಿ ಸಂತೋಷ್, ಎರಡನೇ ಆರೋಪಿ ರಾಜೇಂದ್ರ ಅವರ ಜತೆ ಸೇರಿ ಸಂಚು ರೂಪಿಸುತ್ತಾರೆ. 12 ನೇ ಆರೋಪಿ ಅರವಿಂದ ರೆಡ್ಡಿ ಜತೆ ಸೇರಿ ಯೋಜನೆ ರೂಪಿಸಿ ಅದರಂತೆ ಮೇ. 11 ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಅಪಹರಿಸಲು ಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಲಾಗುತ್ತದೆ. ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ.
ಬಂಧನದ ವೇಳೆ ಸಂತೋಷ್ ಹೆಸರು ಕೇಳಿ ಬರುತ್ತದೆ. ಬಳಿಕ ತಲೆ ಮರೆಸಿಕೊಂಡಿದ್ದ ಸಂತೋಷ್ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು. ನ್ಯಾಯಾಲಯ ನಿರ್ದೇಶನವಿದ್ದರೂ ತನ್ನ ಮೊಬೈಲ್ ತನಿಖಾಧಿಕಾರಿಗಳಿಗೆ ನೀಡದೇ ಸಾಕ್ಷಿ ನಾಶ ಮಾಡಿದ ಆರೋಪ ಕೂಡ ಹೊರಿಸಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಜೀವಂತವಾಗಿರುವುದರಿಂದ ಆ ವ್ಯಕ್ತಿಯನ್ನೇ ಪೊಲೀಸರು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ದಾಖಲಿಸಿದ್ದಾರೆ. ಜತೆಗೆ ತನಿಖೆ ವೇಳೆ ಇತರೆ ಆರೋಪಿಗಳ ಹೇಳಿಕೆ ಪುಷ್ಟೀಕರಿಸುವ ಸಾಂಧರ್ಭಿಕ ಸಾಕ್ಷಿಗಳು ದೊರೆತಿರುವ ಕಾರಣ ಸಂತೋಷ್ ಪಾಲಿಗೆ ಈ ಕೇಸು ಭವಿಷ್ಯ ನಿರ್ಣಯಿಸಲಿದೆ.
ಅಚ್ಚರಿ ಏನೆಂದರೆ, ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾದ ಸಿಡಿ ಹಾಗೂ ಪೆನ್ ಡ್ರೈವ್ ನಲ್ಲಿ ಏನಿತ್ತು, ಅದು ಯಾರಿಗೆ ಸೇರಿದ್ದು ಎಂಬುದರ ಮಾಹಿತಿಯನ್ನು ಪೊಲೀಸರು ಕೂಡ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ಆದರೆ ತನಿಖಾಧಿಕಾರಿಗಳಿಗೆ ಮೊಬೈಲ್ ನೀಡದೇ ಸಾಕ್ಷಿ ನಾಶಪಡಿಸಿರುವ ಹೆಚ್ಚುವರಿ ಆರೋಪವನ್ನು ಸಂತೋಷ್ ಮೇಲೆ ಹೊರಿಸಿದ್ದಾರೆ. ದೋಷಾರೋಪ ಪ್ರಕರಣ ರದ್ದು ಕೋರಿ ಹೈಕೋರ್ಟ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿಯಿದೆ. ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿರುವ ಕಾರಣ ವಿಚಾರಣೆ ಎದುರಿಸುವ ಸಾಧ್ಯತೆಗಳೇ ಜಾಸ್ತಿ.