ಇದೇ ಮೊದಲ ಬಾರಿಗೆ ಎಂಬಿಬಿಎಸ್ ಫೇಲ್ ಆದವರಿಗೂ ಪೂರಕ ಪರೀಕ್ಷೆ!
ಬೆಂಗಳೂರು, ಏಪ್ರಿಲ್ 11: ಮೊಟ್ಟ ಮೊದಲ ಬಾರಿಗೆ ಎಂಬಿಬಿಎಸ್ ಮೊದಲ ವರ್ಷದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ಫಲಿತಾಂಶ ಪ್ರಕಟವಾದ ಎರಡು ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎಂ.ಕೆ. ರಮೇಶ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ನೇರವಾಗಿ ಎರಡನೇ ವರ್ಷದ ಕೋರ್ಸಿಗೆ ಪ್ರವೇಶ ಪಡೆದು ಒಂದು ವರ್ಷದ ಸಮಯದ ನಷ್ಟವನ್ನು ತಪ್ಪಿಸಲಾಗುತ್ತಿದೆ ಎಂದರು.
ಮಗ/ಮಗಳು ವೈದ್ಯರಾಗಬೇಕಾ? ಹಂ... ವಿಚಾರ ಮಾಡಿ!
ಘಟಿಕೋತ್ಸವ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 20 ನೇ ಘಟಿಕೋತ್ಸವ ಸಮಾರಂಭವನ್ನು 12 ನೇ ಏಪ್ರಿಲ್ 2018 ರಂದು ಬೆಂಗಳೂರಿನ ನಿಮಾನ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಎಂ. ವೆಂಕಯ್ಯ ನಾಯ್ಡು ಅವರು ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಘನತೆವೆತ್ತ ರಾಜ್ಯಪಾಲರು ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಡಾ. ವಾಜುಭಾಯಿ ರುಢಾಭಾಯಿ ವಾಲಾ ಅವರು ವಹಿಸಲಿರುವರು ಎಂದು ತಿಳಿಸಿದರು.
ಈ ಸಾಲಿನಲ್ಲಿ ದಾನಿಗಳು ಹಾಗೂ ವಿಶ್ವವಿದ್ಯಾಲಯ ವತಿಯಿಂದ ಒಟ್ಟು 84 ಚಿನ್ನದ ಪದಕ ಹಾಗೂ 07 ನಗದು ಬಹುಮಾನಗಳನ್ನು ಸಾದನೆ ಗೈದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಒಟ್ಟು 26,469 ಅಭ್ಯರ್ಥಿಗಳು ತೇರ್ಗಡೆ ಹೊಂದಿ ಪದವಿಗೆ ಅರ್ಹರಾಗಿದ್ದಾರೆ. 68 ಪಿ.ಎಚ್.ಡಿ, 138 ಸೂಪರ್ ಸ್ಪೆಷಾಲಿಟಿ, 5,581 ಸ್ನಾತಕೋತ್ತರ ಪದವಿ, 182 ಫೆಲೋಷಿಪ್ ಕೋರ್ಸ್, 18 ಸರ್ಟಿಫಿಕೇಟ್ ಕೋರ್ಸ್ ಮತ್ತು 20,482 ಪದವೀಧರ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.