ಮಂಡೂರಿಗೆ ಬಿಬಿಎಂಪಿ ತ್ಯಾಜ್ಯ ಆಯ್ತು ಈಗ ಬಿಎಂಟಿಸಿ ತ್ಯಾಜ್ಯದ ತಲೆಬಿಸಿ
ಬೆಂಗಳೂರು, ಏಪ್ರಿಲ್ 23: ಕೆಲ ವರ್ಷಗಳ ಹಿಂದೆ ತ್ಯಾಜ್ಯ ವಿಲೇವಾರಿಯಿಂದ ಕಂಗೆಟ್ಟು ಸುಧಾರಿಸಿಕೊಂಡಿದ್ದ ಮಂಡೂರು ಗ್ರಾಮಸ್ಥರಿಗೆ ಇದೀಗ ಬಿಎಂಟಿಸಿ ಘಟಕದ ತ್ಯಾಜ್ಯದ ಬಿಸಿ ತಟ್ಟಿದೆ.
ಬೆಂಗಳೂರು ಪೂರ್ವ ತಾಲೂಕಿನ ಮಂಡೂರು ಗ್ರಾಮದಲ್ಲಿ ಬಿಬಿಎಂಪಿಯು ಸಾವಿರಾರು ಟನ್ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿತ್ತು. ಇದರಿಂದಾಗಿ ಅಲ್ಲಿನ ವಾತಾವರಣ ಮಲಿನವಾಗಿತ್ತು. ಹೀಗಾಗಿ ಮಂಡೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ನಿರಂತರ ಹೋರಾಟ ನಡೆಸಿ 2014ರಿಂದ ಕಸ ವಿಲೇವಾರಿ ಸ್ಥಗತಿಗೊಳಿಸಿದ್ದರು.
ಎರಡು ತಿಂಗಳಲ್ಲಿ ಇ-ತ್ಯಾಜ್ಯ ಕಾರ್ಖಾನೆಗಳ ಪರಿಶೀಲನೆ: ನಿರ್ದಾಕ್ಷಿಣ್ಯ ಕ್ರಮ
ಆದರೆ, ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಬಿಎಂಟಿಸಿಯ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಮತ್ತೊಮ್ಮೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಮಂಡೂರು ಪ್ರದೇಶದಲ್ಲಿ ಬಿಎಂಟಿಸಿಗೆ ಸೇರಿದ ಜಾಗವಿದ್ದು ಅಲ್ಲಿ ಬೆಂಗಳೂರಿನ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ಮೊದಲೇ ತ್ಯಾಜ್ಯ ರಾಶಿಯ ಅಡ್ಡಪರಿಣಾಮಗಳಿಂದ ನೊಂದಿದ್ದ ಸಾರ್ವಜನಿಕರು, ಮತ್ತೊಮ್ಮೆ ಕಸ ವಿಲೇವಾರಿ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಂಡೂರಿನ ಸರ್ವೇ ನಂ.155ರಲ್ಲಿ ಬಿಎಂಟಿಸಿ ಒಡೆತನದಲ್ಲಿರುವ ಜಾಗವಿದ್ದು, ಮೂರು ದಿನಗಳಿಂದ ಸುಮಾರು 12ರಿಂದ 13 ಲಾರಿಗಳಲ್ಲಿ ಗುಜರಿ ಬಸ್ ಗಳ ತ್ಯಾಜ್ಯವನ್ನು ಸುರಿದಿದ್ದಾರೆ. ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯನ್ನೂ ಕೂಡ ನಡೆಸಿದ್ದಾರೆ.