ಶಾಂತಿನಗರ: ಬಿಜೆಪಿ ನಾಯಕರ ಫ್ಲೆಕ್ಸ್ ಗಳಿಗೂ ಟ್ರಾಫಿಕ್ ಸಿಗ್ನಲ್ಲೇ ಬೇಕು!
ಬೆಂಗಳೂರು, ಜನವರಿ 06 : ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ರಸ್ತೆಗಳಲ್ಲಿ ಹಾಕಿದ್ದ ಫ್ಲೆಕ್ಸ್ ಟ್ರಾಫಿಕ್ ಸಿಗ್ನಲ್ ಗೆ ಅಡ್ಡಿ ಪಡಿಸಿದ್ದ ಈಗ ಹಳೆಯ ಸುದ್ದಿ.
ಇದೀಗ ಅದೇ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶ್ರೀಧರ್ ರೆಡ್ಡಿ ಅವರು ಕೂಡ ತಾವೇನು ಕಮ್ಮಿ ಇಲ್ಲ ಎಂಬಂತೆ ಹತ್ತಾರು ಫ್ಲೆಕ್ಸ್ ಗಳನ್ನು ರಸ್ತೆ ಮತ್ತು ಟ್ರಾಫಿಕ್ ಸಿಗ್ನಲ್ ಗೆ ಹೊಂದಿಕೊಂಡಂತೆಯೇ ಅಳವಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಶಾಸಕ ಹ್ಯಾರಿಸ್ ಅವರೇ ನಿಮ್ಮ ಶುಭಾಶಯ ಬೇಕು ಆದರೆ ಹೀಗಲ್ಲ!
ಓಲ್ಡ್ ಏರ್ ಫೊರ್ಟ್ ರಸ್ತೆಯಲ್ಲಿರುವ ಲೈಫ್ ಸ್ಟೈಲ್ ಬಳಿ ಇರುವ ಸಿಗ್ನಲ್ ಗೆ ಬಿಜೆಪಿ ಬೆಂಗಳೂರು ನಗರ ಕಾರ್ಯದರ್ಶಿ ಶ್ರೀಧರ್ ರೆಡ್ಡಿ ಅವರ ಫ್ಲೆಕ್ಸ್ ತೂಗುಹಾಕಲಾಗಿದೆ. ಫ್ಲೆಕ್ಸ್ ಗಳು ಹಾಗೂ ಬ್ಯಾನರ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಬಿಬಿಎಂಪಿ ಸೋತಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ವಿರುದ್ಧ ಸಮರವನ್ನೇ ಸಾರಿದ್ದರೂ ಈ ಕಾಯಿದೆ ಜನಪ್ರತಿನಿಧಿಗಳಿಗೆ ಅನ್ವಯಿಸುದಿಲ್ಲ ಎಂಬಂತೆ ಭಾಸವಾಗುತ್ತಿದೆ.
ಫ್ಲೆಕ್ಸ್ ತೆರವಿಗೆ ಜನವರಿ 06 ವರೆಗೆ ಗಡುವು
ಇಂತಹ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ಹಾವಳಿಯನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಜನವರಿ 6 ರವರೆಗೆ ಗಡುವುದು ನೀಡಲಾಗಿತ್ತು. ಒಂದೊಮ್ಮೆ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಸೋತಲ್ಲಿ ತಲೆದಂಡ ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದರು.
ಆದರೆ ಶನಿವಾರ ಜನವರಿ 6 ರವರೆಗೂ ಫ್ಲೆಕ್ಸ್ ಗಳನ್ನು ತೆರವುಗೊಳಿಸಿಲ್ಲ. ಕೇವಲ ಓಲ್ಡ್ ಏರ್ ಪೋರ್ಟ್ ರಸ್ತೆ, ಮದರ್ ಥೆರೆಸಾ ರಸ್ತೆಗಳು ಮಾತ್ರವಲ್ಲದೆ ಇಡೀ ಬೆಂಗಳೂರಿನಾದ್ಯಂತ ಸಾಕಷ್ಟು ಕಡೆಗಳಲ್ಲಿ ಇಂತಹ ಫ್ಲೆಕ್ಸ್ ಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಳವಡಿಸಲಾಗಿದೆ ಈ ಕುರಿತಾಗಿ ಮೇಯರ್ ಸಂಪತ್ ರಾಜ್ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಸಂಚಾರ ಪೊಲೀಸರಿಗೆ ಜಾಣಕುರುಡು
ಪ್ರತಿ ಟ್ರಾಫಿಕ್ ಸಿಗ್ನಲ್ ಬಳಿ ಸಾಮಾನ್ಯವಾಗಿ ಸಂಚಾರ ಪೊಲೀಸರು ಇದ್ದೇ ಇರುತ್ತಾರೆ. ಸಿಗ್ನಲ್ ಗೆ ಅಡ್ಡವಾಗಿರುವ ಫ್ಲೆಕ್ಸ್ ಗಳು ಇವರೆಗೆ ಗೋಚರಿಸಿಲ್ಲವೇ ಎನ್ನುವುದು ಪ್ರಶ್ನೆಯಾಗಿದೆ. ಈ ಸಿಗ್ನಲ್ ಗೆ ಫ್ಲೆಕ್ಸ್ ಅಡ್ಡವಾಗಿದ್ದರೂ ಟ್ರಾಫಿಕ್ ಪೊಲೀಸರು ಈ ಬಗ್ಗೆ ತಲೆಕಡಸಿಕೊಂಡಿಲ್ಲ. ಇದು ಶಾಸಕ ಶಾಸಕ ಹ್ಯಾರಿಸ್ ಗೆ ಸೇತರಿದ ಫ್ಲೆಕ್ಸ್ ಆಗಿರುವುದರಿಂದಲೇ ಟ್ರಾಫಿಕ್ ಪೊಲೀಸರು ಇದನ್ನು ಮುಟ್ಟಲು ಹೆದರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬಿಬಿಎಂಪಿ ಇಂತಹ ಫ್ಲೆಕ್ಸ್ ಗಳ ತೆರವಿಗೆ ಮುಂದಾಗುತ್ತಾ?
ಟ್ರಾಫಿಕ್ ಸಿಗ್ನಲ್ ಗೆ ಅಡ್ಡವಾಗಿರುವ ಈ ಫ್ಲೆಕ್ಸ್ ನ್ನು ತೆರವುಗೊಳಿಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಇನ್ನುಮುಂದಾದರೂ ಟ್ರಾಫಿಕ್ ಪೊಲೀಸರು ಇಲ್ಲವೇ ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ. ಶಾಂತಿನಗರ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀಧರ್ ರೆಡ್ಡಿ ಅವರು ಕೂಡ ಸಾರ್ವಜನಿಕರ ಕಳಕಳಿಯಿಂದಾದರೂ ಇದನ್ನು ತೆರವುಗೊಳಿಸಲು ಸೂಚನೆ ನೀಡಬೇಕಿದೆ.
ಫ್ಲೆಕ್ಸ್ ಗಳ ಮುದ್ರಣ ಮಳಿಗೆಗಳ ಮೇಲೆ ಅಧಿಕೃತವಾಗಿ ದಾಳಿ ನಡೆದಿಲ್ಲ
ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಅಧಿಕಾರಿಗಳಿಗೆ ಅನಧಿಕೃತ ಜಾಹೀರಾತುಗಳನ್ನು ಮುದ್ರಣ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಲು ಮೇಯರ್ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಅಂತಹ ಯಾವುದೇ ದಾಳಿ ನಡೆದಿಲ್ಲ. ಅನಧಿಕೃತ ಫ್ಲೆಕ್ಸ್ ಗಳನ್ನು ವಶಪಡಿಸಿಕೊಂಡಿಲ್ಲ. ಹಾಗಾಗಿ ರಾಜಾರೋಷವಾಗಿ ಇಂತಹ ಫ್ಲೆಕ್ಸ್ ಗಳನ್ನು ಯಾವುದೇ ಭಯವಿಲ್ಲದೆ ಅಳವಡಿಸಲಾಗುತ್ತಿದೆ.