ಕಂಬಳಕ್ಕಾಗಿ ಬೆಂಗಳೂರಿನಲ್ಲಿ ತೀವ್ರಗೊಂಡ ಪ್ರತಿಭಟನೆ
ಬೆಂಗಳೂರು, ಜನವರಿ 22: ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗಾಗಿ ಪ್ರತಿಭಟನೆ ನಡೆದು ಯಶಸ್ವಿಯಾದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಈ ವಿಚಾರವಾಗಿ ನೂರಾರು ಪ್ರತಿಭಟನಾಕಾರರು ಬೆಂಗಳೂರಿನ ಫ್ರಿಡಂ ಪಾರ್ಕಿನಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಯಾವುದೇ ಮುಖಂಡರಿಗೆ ಕರೆ ನೀಡದೆ 'ಸಾಮಾನ್ಯ ಕನ್ನಡಿಗರು' ಸಂಘಟನೆಯಿಂದ ಪ್ರತಿಭಟನೆ ನಡೆಯುತ್ತಿದೆ. ಸಾಂಪ್ರದಾಯಿಕ ಕ್ರೀಡೆ ಕಂಬಳ ಉಳಿಸಿ ಎಂದು ಧರಣಿ ನಿರತರು ಒತ್ತಾಯಿಸುತ್ತಿದ್ದಾರೆ.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]
ಪ್ರತಿಭಟನಾಕಾರರ ತೆರವು
ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ಅನುಮತಿ ಪಡೆಯದೇ ಇದ್ದ ಕಾರಣ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸುತ್ತಿದ್ದಾರೆ. ಮೊದಲು ಪ್ರತಿಭಟನಾಕಾರರು ಬೆಂಗಳೂರಿನ ಹಲಸೂರು ಕೆರೆ ಬಳಿ ಪ್ರತಿಭಟನೆಗೆ ಅನುಮತಿ ಪಡೆದುಕೊಂಡಿದ್ದರು. ಆದರೆ ಅಲ್ಲಿ ಅನುಮತಿ ಹಿಂತೆಗೆದುಕೊಂಡಿದ್ದರಿಂದ ಫ್ರೀಡಂ ಪಾರ್ಕಿಗೆ ಪ್ರತಿಭಟನೆ ಸ್ಥಳಾಂತರ ಮಾಡಲಾಗಿತ್ತು.
'ಜಲ್ಲಿಕಟ್ಟುವಿಗೆ ಅವಕಾಶ ನೀಡುತ್ತಿದ್ದಾರೆ ಆದರೆ ನಮ್ಮ ಕಂಬಳಕ್ಕೆ ಅವಕಾಶ ನೀಡುತ್ತಿಲ್ಲ. ಇದು ಸರಿಯಲ್ಲ. ಕಂಬಳಕ್ಕೂ ಅವಕಾಶ ನೀಡಬೇಕು. ಪ್ರತಿಭಟನೆ ಮಾಡಿಯೇ ಇಲ್ಲ ಎಂದು ತಾರತಮ್ಯ ಮಾಡುವುದು ಸರಿಯಲ್ಲ,' ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.[ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ: ಜಲ್ಲಿಕಟ್ಟುವಿನಂತೆ ಕಂಬಳವೂ ನಡೆಯಲಿ]
ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ
ಪ್ರತಿಭಟನೆ ನಡೆಯುತ್ತಿದ್ದ ಜಾಗಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿ ಬೆಂಬಲ ಸೂಚಿಸಿದರು. ಈ ಸಂದರ್ಭ ಅವರು, ಕಂಬಳ ಪ್ರತಿಭಟನೆಗೆ ಕ್ಯಾರೆ ಅನ್ನದ ಸಿಲಿಕಾನ್ ಸಿಟಿ ಮಂದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
"ಜಟ್ಟಿಕಟ್ಟುವಿಗೆ ತಮಿಳುನಾಡು ಸಂಪೂರ್ಣ ಬೆಂಬಲ ನೀಡಿತ್ತು. ಆದರೆ ನಮ್ಮಲ್ಲಿ ಬೆಂಬಲ ನೀಡುತ್ತಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ವಾತಾವರಣ ಇಲ್ಲ. ನಮ್ಮ ಜನರಲ್ಲಿ ಹೋರಾಟದ ಆಸಕ್ತಿ ಇಲ್ಲ," ಎಂದರು.
ಇದೇ ಸಂದರ್ಭ ಅವರು, "ರಾಜ್ಯ ಸರ್ಕಾರ ಕಂಬಳ ನಿಷೇಧವನ್ನ ಹಿಂಪಡೆಯಬೇಕು ಅಂತ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿದೆ. ತಮಿಳುನಾಡಿನಲ್ಲಾದಂತಹ ಪ್ರತಿಭಟನೆ ನಮ್ಮಲ್ಲೂ ಆಗಬೇಕು. ಎಲ್ಲಾ ವಿಷಯದಲ್ಲೂ ನಮಗೆ ಅನ್ಯಾಯವಾಗುತ್ತಿದೆ. ಕರ್ನಾಟಕದ ಜನರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡೋವರೆಗೆ ಅವರು ನಮಗೆ ಬೆಂಬಲ ನೀಡುವುದಿಲ್ಲ," ಎಂದು ಹೇಳಿದರು.