ಎಂಟಿಬಿ ಎದೆಯಲ್ಲಿ ಈಗ ನಾನಿಲ್ಲ ಯಡಿಯೂರಪ್ಪ ಇದಾನೆ: ಸಿದ್ಧರಾಮಯ್ಯ
ಹೊಸಕೋಟೆ, ನವೆಂಬರ್ 16: ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಒಬ್ಬ ದ್ರೋಹಿ. ಮಾತೆತ್ತಿದರೆ ಎದೆಯಲ್ಲಿ ಸಿದ್ಧರಾಮಣ್ಣ ಇದ್ದಾನೆ ಅಂತ ಹೇಳುತ್ತಿದ್ದ, ಆದರೆ ಈಗ ಅವನ ಎದೆಯಲ್ಲಿ ಯಡಿಯೂರಪ್ಪ ಇಟ್ಟುಕೊಂಡಿದ್ದಾನಂತೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಎಂಟಿಬಿ ವಿರುದ್ಧ ಗುಟುರು ಹಾಕಿದರು.
18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?
ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಲು ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಹೊಸಕೋಟೆ ತಾಲ್ಲೂಕು ಕಚೇರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗಂಡೂರಾವ್, ಭೈರತಿ ಸುರೇಶ್ ಜೊತೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಸಿದರು.
ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರದ ಎಂಟಿಬಿ
ಈ ವೇಳೆ ಮಾತನಾಡಿದ ಸಿದ್ಧರಾಮಯ್ಯ, ಹೊಸಕೋಟೆ ಮತದಾರರು ಸ್ವಾಭಿಮಾನಿಗಳಾಗಿದ್ದಲ್ಲಿ ಎಂಟಿಬಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ, ಪದ್ಮಾವತಿ ಅವರನ್ನು ಗೆಲ್ಲಿಸಬೇಕು ಎಂದರು. ನನ್ನ ಸರ್ಕಾರದಲ್ಲಿ ಎಂಟಿಬಿ ಗೆ ಸಚಿವ ಸ್ಥಾನ ಕೊಟ್ಟೆ, ನಿಗಮ ಮಂಡಳಿ ಕೊಟ್ಟೆ ಆದರೆ ಈಗ ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಹೋಗಿದ್ದಾನೆಂದು ಹೇಳಿದರು. ಇದೇ ವೇಳೆ ಇನ್ನೊರ್ವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧವೂ ಹರಿಹಾಯ್ದರು. ಅಲ್ಲದೇ ಯಾವ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಗೆಲ್ಲವುದಿಲ್ಲ ಎಂದರು.