ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆ ಅಡಿ 5 ಲಕ್ಷದ ತನಕ ಅನುಕೂಲ
Recommended Video
ಬೆಂಗಳೂರು, ನವೆಂಬರ್ 16: ಅಂತೂ ಮೂರು ತಿಂಗಳ ಗೊಂದಲಕ್ಕೆ ಕರ್ನಾಟಕ ಸರಕಾರ ಕೊನೆ ಹಾಡಿದೆ. ಆರೋಗ್ಯ ಕರ್ನಾಟಕ ಯೋಜನೆಯನ್ನು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆ ಜತೆಗೆ ಸೇರಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಸಮಗ್ರ ಆರೋಗ್ಯ ಯೋಜನೆ ದೊರೆತಂತಾಗಿದೆ. ಇದರಿಂದ ಅಂದಾಜು 4.4 ಕೋಟಿಗೂ ಹೆಚ್ಚು ಮಂದಿಗೆ ಅನುಕೂಲ ಆಗಲಿದೆ.
ಅಕ್ಟೋಬರ್ ಮೂವತ್ತರಂದು ಕೇಂದ್ರ ಸರಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಆಗಿನಿಂದಲೇ ಈ ಯೋಜನೆ ಜಾರಿಯಲ್ಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಯೋಜನೆ ಅಡಿಯಲ್ಲಿ, ಇದನ್ನು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಹೆಸರಿನಲ್ಲೇ ಕರೆಯಲಾಗುವುದು.
ಆಯುಷ್ಮಾನ್ ಭಾರತ ಯೋಜನೆ : ಯಾರು ಫಲಾನುಭವಿ, ಯಾರು ಅರ್ಹರು?
ಬಡತನ ರೇಖೆಗಿಂತ ಕೆಳಗೆ ಇರುವ (ಬಿಪಿಎಲ್) ಕುಟುಂಬವು ಪ್ರತಿ ವರ್ಷ 5 ಲಕ್ಷದವರೆಗೆ ಅನುಕೂಲ ಪಡೆಯಬಹುದು. ಮತ್ತು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು 1.5 ಲಕ್ಷದ ತನಕ ಪಡೆಯಬಹುದು. ಈ ಯೋಜನೆ ಅಡಿ 1614 ಚಿಕಿತ್ಸೆ ಬರುತ್ತದೆ. ಕರ್ನಾಟಕದಾದ್ಯಂತ ಇರುವ 385 ಸರಕಾರಿ ಆಸ್ಪತ್ರೆ, 531 ಖಾಸಗಿ ಆಸ್ಪತ್ರೆಗಳು ಒಳಗೊಳ್ಳುತ್ತವೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ಸೇವೆ, ಇಲ್ಲಿವೆ ವಿವರ
ಆಧಾರ್ ಹಾಗೂ ಪಡಿತರ ಚೀಟಿ ಇರಬೇಕು
ಈ ಅನುಕೂಲ ಪಡೆಯಲು ಬಿಪಿಎಲ್ ಕುಟುಂಬಗಳು ಆಧಾರ್ ಹಾಗೂ ಪಡಿತರ ಚೀಟಿ ನೀಡಬೇಕಾಗುತ್ತದೆ. ಎಪಿಎಲ್ ಕುಟುಂಬಗಳು ಆಧಾರ್ ನೀಡಿದರೆ ಸಾಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಡಿ ಭಾಗದಲ್ಲಿ ಇರುವವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಗಡಿ ಭಾಗದ ಕೇರಳ, ಮಹಾರಾಷ್ಟ್ರ, ತೆಲಂಗಾಣ ಹಾಗೂ ತಮಿಳುನಾಡಿನ ಮೂವತ್ತಾರು ಆಸ್ಪತ್ರೆಗಳ ಜತೆಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದೆ.
ವಲಸೆ ಬಂದವರಿಗೂ ಯೋಜನೆ ಅನುಕೂಲ
ಜತೆಗೆ ಕರ್ನಾಟಕಕ್ಕೆ ವಲಸೆ ಬಂದವರಿಗೂ ಈ ಯೋಜನೆ ಅಡಿಯಲ್ಲಿ ಅನುಕೂಲ ದೊರೆಯುತ್ತದೆ. ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಮತ್ತು ಇತರ ಅಧಿಕೃತ ಕೇಂದ್ರಗಳಿಂದ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು. ಆರೋಗ್ಯ ಕಾರ್ಡ್ ಇಲ್ಲದವರು ಸಹ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
ಮೂರು ವಿಭಾಗವಾಗಿ ಚಿಕಿತ್ಸೆಗಳ ವಿಂಗಡಣೆ
ಸರಕಾರವು ಚಿಕಿತ್ಸೆಯನ್ನು ಮೂರು ವಿಭಾಗವಾಗಿ ವಿಂಗಡಿಸಿದೆ. 2A (ಸರಳ ಮತ್ತು ಎರಡನೇ ಹಂತದ ಚಿಕಿತ್ಸೆ, ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ), 2B (ಸಣ್ಣ ಪ್ರಮಾಣದ ತುರ್ತು ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ; ಒಂದು ವೇಳೆ ಆ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ಆ ವ್ಯವಸ್ಥೆ ಇಲ್ಲದಿದ್ದಲ್ಲಿ) ಮತ್ತು 3 (ಗಂಭೀರವಾದ ಚಿಕಿತ್ಸೆಗಳು ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ).
169 ಚಿಕಿತ್ಸೆಗಳನ್ನು ತುರ್ತು ಎಂದು ಪರಿಗಣನೆ
169 ಚಿಕಿತ್ಸೆಗಳನ್ನು ತುರ್ತು ಎಂದು ಪರಿಗಣಿಸಲಾಗಿದೆ. ಅದನ್ನು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರಕಾರಿ ಆಸ್ಪತ್ರೆ ಪ್ರತಿನಿಧಿಗಳಿಗೆ ನವೆಂಬರ್ 20, ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ 27ರಂದು ಕಾರ್ಯಾಗಾರ ಆಯೋಜಿಸಲಾಗಿದೆ.