ನಟ ದರ್ಶನ್ ಮನೆ ಇನ್ನು 'ಸರಕಾರಿ ಸ್ವತ್ತು'!
ದರ್ಶನ್ ಮನೆಯ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದು, ಕೆಲವರು ಮಾಧ್ಯಮದವರಿಗೆ ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆ ತಡೆ ಒಡ್ಡುತ್ತಿದ್ದಾರೆ.
ಬೆಂಗಳೂರು, ಅಕ್ಟೋಬರ್ 22: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿರುವ ನಟ ದರ್ಶನ್ ಮನೆ ಸೇರಿದಂತೆ ಒತ್ತುವರಿ ಆಗಿರುವ ಜಾಗಗಳನ್ನು ವಶಕ್ಕೆ ಪಡೆಯಲು ಶನಿವಾರ ಜಿಲ್ಲಾಡಳಿತ ಪ್ರಕ್ರಿಯೆ ಅರಂಭಿಸಿದೆ. ನಾಮಫಲಕ ಅಳವಡಿಸಲು ಎಲ್ಲ ತಯಾರಿ ನಡೆಯುತ್ತಿದ್ದು, ತಹಶೀಲ್ದಾರ್ ಶಿವಕುಮಾರ್ ಈ ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ.
ದರ್ಶನ್ ಮನೆಯ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದ್ದು, ಕೆಲವರು ಮಾಧ್ಯಮದವರಿಗೆ ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆ ತಡೆ ಒಡ್ಡುತ್ತಿದ್ದಾರೆ. 'ಅವರನ್ನು ತಡೆಯೋದು ಬಿಟ್ಟು ನಿವೇನು ಮಾಡ್ತಿದೀರಿ?' ಎಂದು ಪೊಲೀಸರನ್ನೇ ದಬಾಯಿಸುತ್ತಿದ್ದಾರೆ.[ದರ್ಶನ್ ಮನೆ ತೆರವು ಖಚಿತ: ಜಿಲ್ಲಾಧಿಕಾರಿ ಶಂಕರ್ ಸ್ಪಷ್ಟನೆ]
ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಯಲಾಗುತ್ತಿದೆ. ಬೆಳಗ್ಗೆ 11ರ ವರೆಗೂ ದರ್ಶನ್ ಮನೆಯ ಮುಂದೆ ನಾಮಫಲಕ ಅಳವಡಿಸಿರಲಿಲ್ಲ. ಆದರೆ ದರ್ಶನ್ ಅಭಿಮಾನಿ ಸಂಘದವರು ಎಂದು ಹೇಳಿಕೊಂಡು ಜನ ಜಮೆಯಾಗುತ್ತಲೇ ಇದ್ದರು. ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆ ಪಕ್ಕದ ಖಾಲಿ ಜಾಗದಲ್ಲಿ ಸರಕಾರಿ ಸ್ವತ್ತು ಎಂದು ನಾಮಫಲಕ ಅಳವಡಿಸುವ ಕಾರ್ಯ ನಡೆದಿತ್ತು.[ರಾಜ ಕಾಲುವೆ ಒತ್ತುವರಿಯಾಗಿದ್ದರೆ ನಾನೇ ಅಗೆದುಕೊಡ್ತೀನಿ: ನಟ ದರ್ಶನ್]
ಇಲ್ಲಿನ 45 ಮನೆಗಳ ಮಾಲೀಕರು ಹಾಗೂ ಎಸ್ ಎಸ್ ಆಸ್ಪತ್ರೆ ಒತ್ತುವರಿ ತೆರವಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವುದರಿಂದ ಆ ಆಸ್ತಿಗಳ ತೆರವು ಕಾರ್ಯಾಚರಣೆ ಕೈಗೊಂಡಿಲ್ಲ. ಮೂರು ಎಕರೆ ವ್ಯಾಪ್ತಿಯ 44 ಆಸ್ತಿಗಳ ಬಳಿ ಸರಕಾರಿ ಸ್ವತ್ತು ಎಂದು ಹಾಕಲಾಗುವುದು. ಐಡಿಯಲ್ ಹೋಮ್ ಹಾಗೂ ಎಸ್ ಎಸ್ ಆಸ್ಪತ್ರೆಗೆ ಫಲಕ ಹಾಕಿಲ್ಲ.