ಸಿಲ್ಲಿಲಲ್ಲಿ ಧಾರವಾಹಿಯ ಲಲಿತಾಂಬೆ ಮತ್ತು ಪ್ರಧಾನಿ ಮೋದಿ: ದೇವನೂರು ವ್ಯಂಗ್ಯ
ಬೆಂಗಳೂರು, ಡಿ 16: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು, ಸಿಲ್ಲಿಲಲ್ಲಿ ಧಾರವಾಹಿಯಲ್ಲಿ ಬರುವ ಪಾತ್ರ ಸಮಾಜಸೇವಕಿ ಲಲಿತಾಂಬಗೆ, ಸಾಹಿತಿ ದೇವನೂರು ಮಹಾದೇವ ಹೋಲಿಸಿದ್ದಾರೆ.
"ನೋಟ್ ಬ್ಯಾನ್ ಅನಾಹುತದಿಂದ, ಜನ ಇನ್ನೂ ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲೇ ಪೌರತ್ವ ಕಾಯಿದೆಯಲ್ಲಿ ತಿದ್ದುಪಡಿ ತರುವ ಮೂಲಕ, ದೇಶಕ್ಕೆ ದೊಡ್ಡ ಆಘಾತವನ್ನು ಮೋದಿ ತಂದಿದ್ದಾರೆ" ಎಂದು ದೇವನೂರು ಬೇಸರ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ರಾಜ್ಯಗಳ ಪ್ರತಿಭಟನೆಗೆ ಕಾಂಗ್ರೆಸ್ ನೇರ ಹೊಣೆ: ಮೋದಿ
"ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿಯವರನ್ನು ನಂಬಿದಷ್ಟು, ಇನ್ಯಾರನ್ನೂ ಜನ ನಂಬಿರಲಿಲ್ಲ. ಆದರೆ, ಮೋದಿಯಿಂದ, ನಂಬಿಕೆ ದ್ರೋಹದ ಕೆಲಸವೇ ಹೆಚ್ಚಾಗಿದೆ" ಎಂದು ದೇವನೂರು ಹೇಳಿದ್ದಾರೆ.
"ಮೋದಿಯವರದ್ದು, ಸಿಲ್ಲಿಲಲ್ಲಿ ಧಾರವಾಹಿಯ ಲಲಿತಾಂಬ ಪಾತ್ರದಂತೆ. ನನ್ನನ್ನು ನಂಬಿ..ಪ್ಲೀಸ್..ಪ್ಲೀಸ್.. ಎಂದು ಆ ಪಾತ್ರ ಹೇಳುತ್ತಿರುತ್ತದೆ. ನಮ್ಮ ಪ್ರಧಾನಿಗಳೂ, ಪೌರತ್ವದ ವಿಚಾರದಲ್ಲಿ, ನನ್ನನ್ನು ನಂಬಿ ಎಂದು ಹೇಳುತ್ತಿದ್ದಾರೆ" ಎಂದು ದೇವನೂರು ವ್ಯಂಗ್ಯವಾಡಿದ್ದಾರೆ.
"ಮೋದಿಯವರ ಆಳ್ವಿಕೆ ಹೇಗೆ ಎಂದು ನನ್ನನ್ನು ಕೇಳಿದರೆ, ಜಾತಿಧರ್ಮದ ನಡುವೆ ಬೆಂಕಿಹಚ್ಚಿ, ಚಳಿಕಾಯಿಸುವ, ಕೆಲಸದ ವೈಖರಿ ಅವರದ್ದು ಎಂದು ಹೇಳುವೆ" ಎಂದು ದೇವನೂರು ತರಾಟೆಗೆ ತೆಗೆದುಕೊಂಡಿದ್ದಾರೆ.
"ಮೋದಿಯವರನ್ನು ನಂಬಿದ್ದಕ್ಕೆ, ತೆರಬೇಕಾದ ಬೆಲೆ ಏನೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಪೌರತ್ವದ ವಿಚಾರವನ್ನು ಕೆದಕಿ, ಮೋದಿ ತಪ್ಪು ಮಾಡಿದ್ದಾರೆ" ಎಂದು ದೇವನೂರು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.