ಸಾಹಿತಿ ಯು.ಆರ್ ಅನಂತಮೂರ್ತಿ ಅಸ್ತಂಗತ
ಬೆಂಗಳೂರು, ಆ.22: ನಾಡಿನ ಹೆಮ್ಮೆಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿ ಅವರು ಶುಕ್ರವಾರ ಸಂಜೆ ನಮ್ಮಗಲಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರಿಗೆ ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿತ್ತು, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ಘೋಷಿಸಿದ್ದಾರೆ.
ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೆ ಅವರ ಆರೋಗ್ಯ ಕುರಿತಂತೆ ವದಂತಿಗಳು, ಸುಳ್ಳು ಸುದ್ದಿಗಳು ಹಬ್ಬಿತ್ತು. ಆದರೆ, ಅಪಾರ ಅಭಿಮಾನಿಗಳ ಹಾರೈಕೆ ಫಲಿಸಲಿಲ್ಲ. ಪತ್ನಿ ಎಸ್ತಾರ್, ಪುತ್ರ ಶರತ್, ಪುತ್ರಿ ಅನುರಾಧಾ, ಅಳಿಯ ವಿವೇಕ್ ಶಾನಭೋಗ್ ಸೇರಿದಂತೆ ಅಪಾರ ಆಪ್ತರು, ಶಿಷ್ಯಂದಿರು, ಬಂಧು ಮಿತ್ರರನ್ನು ಅನಂತಮೂರ್ತಿ ಅಗಲಿದ್ದಾರೆ.
ಕೊನೆ ಕ್ಷಣದ ಯತ್ನ ಫಲ ನೀಡಲಿಲ್ಲ: ಸುಮಾರು 2-3 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. 15 ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಅವರ ದೇಹಾರೋಗ್ಯದಲ್ಲಿ ಏರುಪೇರಾಗಿತ್ತು. ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಐಸಿಯುನಲ್ಲಿರಿಸಿಕೊಂಡು ಡಾ. ಸುನೀಲ್ ಕಾರಂತ್ ನೇತೃತ್ವದ ತಂಡ ಅವರಿಗೆ ನಿರಂತರವಾಗಿ ಚಿಕಿತ್ಸೆ ಒದಗಿಸಲಾಗಿತ್ತು.
ಆದರೆ, ಸಂಜೆ 6 ಗಂಟೆ ವೇಳೆಗೆ ಅವರಿಗೆ ಲಘು ಹೃದಯಾಘಾತವಾಯಿತು. ಸುಮಾರು 45 ನಿಮಿಷಗಳ ಕಾಲ ಯುಆರ್ ಅನಂತಮೂರ್ತಿ ಅವರನ್ನು ಉಳಿಸಿಕೊಳ್ಳಲು ಅವಿರತ ಪ್ರಯತ್ನ ಮಾಡಲಾಯಿತು. ಆದರೆ, ನಮ್ಮಿಂದ ನಾಡಿನ ಹೆಮ್ಮೆಯ ಸಾಹಿತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಡಾ. ಸುದರ್ಶನ್ ಬಲ್ಲಾಳ್ ಅವರು ಸಾವಿನ ಸುದ್ದಿಯನ್ನು ಸುದ್ದಿಗಾರರಿಗೆ ಮುಟ್ಟಿಸಿದರು.
ರಾಜ್ಯದಲ್ಲಿ ಶೋಕಾಚರಣೆ: ಡಾ. ಯುಆರ್ ಅನಂತಮೂರ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಕರ್ನಾಟಕ ಸರ್ಕಾರ ಮೂರು ದಿನಗಳ ಕಾಲ ರಾಜ್ಯದೆಲ್ಲೆಡೆ ಶೋಕಾಚರಣೆಯನ್ನು ಘೋಷಿಸಿದೆ. ಶನಿವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಿರಿಯ ಸಾಹಿತಿ ಅನಂತಮೂರ್ತಿ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ತಂದಿದೆ. ಕನ್ನಡ ಸಾರಸ್ವತ ಲೋಕದ ದಿಗ್ಗಜ ಹಾಗೂ ನವ್ಯ ಸಾಹಿತ್ಯ ಚಳುವಳಿಯ ಪಿತಾಮಹರಾಗಿದ್ದರು. ಭಾಷಾ ಜಗತ್ತಿನಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆದು ಬೆಳಗಿದ ಅನಂತಮೂರ್ತಿ ಅವರ ನಿಧನದಿಂದಕನ್ನಡ ಸಾರಸ್ವತ ಲೋಕದಲ್ಲಿ ಶೋಕ ಆವರಿಸಿದಂತಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ. [ನಿಧನಕ್ಕೆ ಕಂಬನಿ ಮಿಡಿದ ಕರ್ನಾಟಕ]