ಬೆಂಗಳೂರಲ್ಲಿ ಇನ್ಮುಂದೆ ಹೆಲ್ಮೆಟ್ ಹಾಕಿದ್ದರಷ್ಟೇ ಗಾಡಿಗೆ ಪೆಟ್ರೋಲ್
ಬೆಂಗಳೂರು, ಜುಲೈ 27: ಅಯ್ಯೋ ಹೆಲ್ಮೆಟ್ ಹಾಕ್ಬೇಕಾ ಬ್ಯೂಟಿ ಹಾಳಾಗುತ್ತೆ ಎನ್ನುವುವವರು, ಕ್ರೇಜಿಗೆ ಹೆಲ್ಮೆಟ್ ತೆಗೆದು ಓಡಾಡುವವರು ಇನ್ಮುಂದೆ ನಡೆದುಕೊಂಡೇ ಹೋಗಬೇಕಾದ ಸಂದರ್ಭ ಬಂದರೂ ಬರಬಹುದು.
ಏಕೆಂದರೆ ಇನ್ನುಮುಂದೆ ಹೆಲ್ಮೆಟ್ ಹಾಕಿದರಷ್ಟೇ ಪೆಟ್ರೋಲ್ ಬಂಕ್ಗಳಲ್ಲಿ ಗಾಡಿಗೆ ಪೆಟ್ರೋಲ್ ಹಾಕಲಾಗುತ್ತದೆ ಎನ್ನುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಬೈಕಿಗೆ ಪೆಟ್ರೋಲ್ ಬೇಕೇ ಬೇಕು ಅಂತಿದ್ದರೆ ಹೆಲ್ಮೆಟ್ನ್ನು ಕೂಡ ಕಡ್ಡಾಯವಾಗಿ ಹಾಕಲೇಬೇಕು.
ಈ ಹಿಂದೆ ಮೈಸೂರಲ್ಲೂ ಇಂತಹದ್ದೊಂದು ನಿರ್ಧಾರ ಮಾಡಿ ಬಳಿಕ ಕೈಬಿಟ್ಟಿತ್ತು.ವಾಹನ ಸವಾರರ ಮತ್ತು ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಸಂಚಾರ ಪೊಲೀಸರು ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ಫುಟ್ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್
ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಸಾವುಗಳು ಹೆಲ್ಮೆಟ್ ಧರಿಸದೇ ಇರುವ ಕಾರಣ ಸಂಭವಿಸುತ್ತವೆ.ಹೆಲ್ಮೆಟ್ ಧರಿಸಿದ್ದರೆ ಗಾಯ ಮತ್ತು ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಬಿದ್ದಾಗ ತಲೆಗೆ ಪೆಟ್ಟಾಗುವ ಕಾರಣ ಸಾವು ಸಂಭವಿಸುತ್ತವೆ.
ಬೇರೆ ಎಲ್ಲೆಲ್ಲಿ ಈ ನಿಯಮಗಳಿವೆ?
ಉತ್ತರಪ್ರದೇಶದ ನೊಯ್ಡಾದಲ್ಲಿ ಜೂನ್ ತಿಂಗಳಿನಿಂದ ಈ ನಿಯಮ ಜಾರಿಗೆ ತರಲಾಗಿದೆ. ಅಲಿಗಢದಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಮೈಸೂರಿನಲ್ಲಿ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು ಆದರೆ ಇದುವರೆಗೂ ಜಾರಿಗೆ ಬಂದಿಲ್ಲ.
ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ
ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಯಾವಾಗ?
ಮೋಟಾರು ವಾಹನ ಕಾಯ್ದೆ 1988 ಕಲಂ 129ರ ಪ್ರಕಾರ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಬೆಂಗಳೂರಲ್ಲಿ ದಶಕದಿಂದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ. 2016ರ ಜನವರಿಯಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಂಡಿದೆ.
ಹೆಲ್ಮೆಟ್ ರಹಿತ ಚಾಲಕರು ಎಷ್ಟಿದ್ದಾರೆ?
ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಹೆಲ್ಮೆಟ್ ರಹಿತ ಚಾಲನೆ ಸ್ವಲ್ಪ ಕಡಿಮೆಯಾಗಿದೆ. 2017ರಲ್ಲಿ 20,19924, 2018 ರಲ್ಲಿ 16,48,240 ಮಂದಿ, 2019ರಲ್ಲಿ ಇದುವರೆಗೆ 10,00,796 ಮಂದಿ ಮೇಲೆ ಹೆಲ್ಮೆಟ್ ರಹಿತ ಪ್ರಯಾಣ ಪ್ರಕರಣ ದಾಖಲಾಗಿದೆ.
ಇನ್ನು 2017ರಲ್ಲಿ 16,99,716, 2018ರಲ್ಲಿ 13,40,824, 2019ರಲ್ಲಿ 69,776 ಹಿಂಬದಿ ಸವಾರ ಹೆಲ್ಮೆಟ್ ರಹಿತ ಪ್ರಯಾಣ ಪ್ರಕರಣಗಳು ದಾಖಲಾಗಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಡ್ರೋಣ್ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು
ಬೆಂಗಳೂರಿನ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಚರ್ಚೆ
ನಗರದ ಎಲ್ಲಾ 44 ಸಂಚಾರ ಠಾಣೆಗಳ ಅಧಿಕಾರಿಗಳಿಗೆ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಚರ್ಚೆ ನಡೆಸಿ ವಿಷಯ ಮನವರಿಕೆ ಮಾಡಲು ಸೂಚಿಸಲಾಗಿದೆ. ನಮ್ಮ ಉದ್ದೇಶಕ್ಕೆ ಸಹಕರಿಸುವಂತೆ ಕೋರಲಾಗಿದೆ. ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರಿಶೇಖರನ್ ತಿಳಿಸಿದ್ದಾರೆ.