‘ಇಂದಿರಾ ಕ್ಯಾಂಟೀನ್’ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ
ಇಸ್ಕಾನ್ ಈರುಳ್ಳಿ-ಬೆಳ್ಳುಳ್ಳಿಯನ್ನು ಅಡಿಗೆಗೆ ಬಳಸುವುದಿಲ್ಲ. ಹೀಗಾಗಿ ತಿನಿಸುಗಳು ರುಚಿಯಾಗಿರುವುದಿಲ್ಲ ಎಂಬ ದೂರುಗಳ ಹಿನ್ನಲೆಯಲ್ಲಿ ಸರಕಾರ ತನ್ನ ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಮರು ಪರಿಶೀಲನೆಯಲ್ಲಿಟ್ಟಿದೆ.
ಬೆಂಗಳೂರು, ಮಾರ್ಚ್ 31: ಸಿದ್ದರಾಮಯ್ಯ ಸರಕಾರದ ಬಹುನಿರೀಕ್ಷಿತ 'ಇಂದಿರಾ ಕ್ಯಾಂಟೀನ್' ಯೋಜನೆ ವಿಳಂಬದ ಹಾದಿ ಹಿಡಿದಿದೆ.
ಆರಂಭದಲ್ಲಿ ಯೋಜನೆಯನ್ನು ಇಸ್ಕಾನ್ ಸಂಸ್ಥೆಯ ಕೈಗಿಡಲು ಸರಕಾರ ಮುಂದಾಗಿತ್ತು. ಆದರೆ ಇಸ್ಕಾನ್ ಈರುಳ್ಳಿ-ಬೆಳ್ಳುಳ್ಳಿಯನ್ನು ಅಡಿಗೆಗೆ ಬಳಸುವುದಿಲ್ಲ. ಹೀಗಾಗಿ ತಿನಿಸುಗಳು ರುಚಿಯಾಗಿರುವುದಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆಯಲ್ಲಿಟ್ಟಿದೆ.[ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್: ಸಿದ್ದರಾಮಯ್ಯ]
ಮೂಲಗಳ ಪ್ರಕಾರ ಇಸ್ಕಾನ್ ಈರುಳ್ಳಿ ಬೆಳ್ಳುಳ್ಳಿಯನ್ನು ಅಡುಗೆಗೆಬಳಸದ ಹಿನ್ನಲೆಯಲ್ಲಿ ಊಟ ರುಚಿಯಾಗಿರುವುದಿಲ್ಲ ಎಂದು ಶಾಸಕರು, ಕಾರ್ಪೊರೇಟರ್ ಗಳು ಹಾಗೂ ಪೌರ ಕಾರ್ಮಿಕರು ದೂರಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ 'ಇಂದಿರಾ ಕ್ಯಾಂಟೀನ್ ಯೋಜನೆಗೆ ಸರಕಾರ 100 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಹೀಗಾಗಿ ಗುಣಮಟ್ಟದ ರುಚಿಯಾದ ಆಹಾರ ನೀಡಲು ಆದ್ಯತೆ ನೀಡಲಾಗುವುದು,' ಎಂದು ಹೇಳಿದ್ದಾರೆ.[ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನಮ್ಮ ಕ್ಯಾಂಟೀನ್]
ಈಗಾಗಲೇ ಇಸ್ಕಾನ್ ಗೆ ನೀಡಲು ವಿರೋಧ ವ್ಯಕ್ತವಾಗಿರುವುದರಿಂದ ಬೆಂಗಳೂರು ಹೊಟೇಲ್ ಮಾಲಿಕರ ಸಂಘದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದೂ ಹೇಳಿದ್ದಾರೆ. ಹೀಗಾಗಿ ಸರಕಾರ ಯಾರಿಗೆ ಈ ಕ್ಯಾಂಟೀನ್ ಗಳ ಉಸ್ತುವಾರಿ ನೀಡುತ್ತೋ ಕಾದು ನೋಡಬೇಕಾಗಿದೆ.
ಬೆಂಗಳೂರಿನ 198 ವಾರ್ಡುಗಳಲ್ಲಿ ಕ್ಯಾಂಟೀನ್ ಆರಂಭಿಸುವುದಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರಕಾರ ಘೋಷಿಸಿತ್ತು. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರು ಹಾಗೂ ವಯೋವೃದ್ಧರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ಆಹಾರ ನೀಡಲು ಈ ಕ್ಯಾಂಟೀನ್ ಆರಂಭಿಸುವುದಾಗಿ ಸರಕಾರ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.