ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಆಸಕ್ತಿ ಇಲ್ಲ: ರಾಮಲಿಂಗಾರೆಡ್ಡಿ
ಬೆಂಗಳೂರು, ಮಾರ್ಚ್ 21: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇತಿಹಾಸದ ದಾಖಲೆಗಳನ್ನು ನೋಡುವುದಾದರೆ 1989ರಲ್ಲಿ ಕಾಂಗ್ರೆಸ್ ನ ಆರ್. ಗುಂಡೂರಾವ್ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಕೈ ಪಕ್ಷದ ಈ ಸ್ಥಾನದಲ್ಲಿನ ಕಡೆಯ ಗೆಲುವಾಗಿತ್ತು.
ಅಲ್ಲಿಂದೀಚೆಗೆ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಕೃಷ್ಣ ಬೈರೇ ಗೌಡ ಅವರುಗಳು ಸಂಸದರಾಗಿದ್ದ ದಿ. ಅನಂತಕುಮಾರ್ ಗೆ ಸ್ಪರ್ಧೆಯೊಡ್ಡಬಹುದಾದ ಹುರಿಯಾಳುಗಳು ಎಂದು ಗುರುತಿಸಿಕೊಂಡಿದ್ದರು.
ಕಳೆದ 38 ವರ್ಷಗಳಿಂದ ಬೆಂಗಳುರು ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಸಂಸದೀಯ ಚುನಾವಣೆ ಗೆದ್ದಿಲ್ಲ, ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಸ್ಪರ್ಧಿಸುತ್ತಾರೆಯೇ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಾರಾದರೂ ಇದ್ದಲ್ಲಿ ಅದು ರೆಡ್ಡಿಯವರು ಮಾತ್ರ ಎಂದು ಹೇಳಲಾಗಿತ್ತು. ಆದರೆ ಅವರು ನಿರಾಸಕ್ತಿ ತೋರಿದ್ದಾರೆ.