'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...
ಬೆಂಗಳೂರು, ಜನವರಿ 7: ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಬೆಂಗಳೂರು ನಗರದ ಅಭಿವೃದ್ದಿಗೆ ಹಲವರು ದುಡಿದಿದ್ದಾರೆ. ದುಡಿಯುತ್ತಿದ್ದಾರೆ. ಆದರೆ, ಯಾವುದೇ ಪ್ರಚಾರ ಬಯಸದೇ ತಮ್ಮದೇಯಾದ ಇತಿಮಿತಿಯಲ್ಲಿಯೂ ಬೆಂಗಳೂರು ಅಭಿವೃದ್ದಿಗಾಗಿ ಇನ್ನೂ ಅನೇಕರು ನಿಸ್ವಾರ್ಥದಿಂದ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಕಾರಣರಾದ ತೆರೆಮರೆ ನಾಯಕರನ್ನು ಸಾರ್ವಜನಿಕರೇ ಗುರುತಿಸಿ, ಅವರನ್ನು ಬೆಳಕಿಗೆ ತರಲು 'ನಮ್ಮ ಬೆಂಗಳೂರು ಪ್ರಶಸ್ತಿ ಟ್ರಸ್ಟ್' ಅವಕಾಶ ಮಾಡಿಕೊಟ್ಟಿದೆ. 2009 ರಿಂದ ಆರಂಭವಾಗಿರುವ ನಮ್ಮ ಬೆಂಗಳೂರು ಪ್ರಶಸ್ತಿ ಈ ವರ್ಷ 11ನೇ ಆವೃತ್ತಿಯ ಪ್ರಶಸ್ತಿ ನೀಡಲು ಸಿದ್ದತೆ ಮಾಡಿಕೊಂಡಿದೆ. ಇದಕ್ಕಾಗಿ ಬೆಂಗಳೂರಿಗರು ವೆಬ್ ಸೈಟ್ ನಲ್ಲಿ ತಮಗೆ ಸೂಕ್ತ ಅನಿಸಿದವರನ್ನು ನಾಮನಿರ್ದೇಶನ ಮಾಡಬಹುದಾಗಿದೆ.
ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿ?
ಹನ್ನೊಂದನೆ ಆವೃತ್ತಿಯ ನಮ್ಮ ಬೆಂಗಳೂರು ಪ್ರಶಸ್ತಿಯೂ ಐದು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ.
ವರ್ಷದ ನಾಗರಿಕ (Citizen Individual)
ವರ್ಷದ ಉದಯೋನ್ಮುಖ ತಾರೆ (Rising Star)
ವರ್ಷದ ಮಾಧ್ಯಮ ವ್ಯಕ್ತಿ (Media Individual)
ವರ್ಷದ ಸಾಮಾಜಿಕ ಉದ್ಯಮಿ (Social Enterpreneur)
ವರ್ಷದ ಸರ್ಕಾರಿ ಅಧಿಕಾರಿ (Government Official) ಎಂಬ ಐದು ವಿಭಾಗಗಳಲ್ಲಿ ಬೆಂಗಳೂರಿಗರು ತಮಗೆ ಸೂಕ್ತ ಅನಿಸಿದವರ ಹೆಸರನ್ನು www.nammabengaluruawards.org ನಲ್ಲಿ ಜನವರಿ 31 ರೊಳಗೆ ನಾಮನಿರ್ದೇಶನ ಮಾಡಬಹುದಾಗಿದೆ.
16 ಜನ ಜ್ಯೂರಿಗಳು
ಆಯ್ಕೆ ಸಮಿತಿ, ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ನಾಮನಿರ್ದೇಶನಗೊಂಡ ಐವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತದೆ. ಆ ನಂತರ 'ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ' ಘೋಷಣೆ ಆಗಲಿದೆ. ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ 16 ಜನ (ಜ್ಯೂರಿಗಳು) ಇದ್ದು, 2020 ರ ಮಾರ್ಚ್ 28 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?
ವೈಯಕ್ತಿಕ ಸಂದರ್ಶನ
ಜನವರಿ 31 ಕ್ಕೆ ನಾಮನಿರ್ದೇಶನ ಪೂರ್ಣಗೊಳ್ಳುತ್ತದೆ. ಫೆಬ್ರುವರಿಯಲ್ಲಿ ನಾಮನಿರ್ದೇಶನಗಳನ್ನು ವಿವರವಾಗಿ ಪರಿಶೀಲಿಸಿ, ಕೆಲವೊಂದು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಐದೂ ವಿಭಾಗದಿಂದ 25 ಜನರನ್ನು ಅಂತಿಮಗೊಳಿಸಿ, ಅವರನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಆ ನಂತರವೇ ಪ್ರಶಸ್ತಿಗೆ ಭಾಜನರಾದವರ ಹೆಸರುಗಳನ್ನು ಘೋಷಣೆ (ಮಾರ್ಚ್ 28) ಮಾಡಲಾಗುತ್ತದೆ.
ನಾಮನಿರ್ದೇಶನಕ್ಕೆ ಚಾಲನೆ
ನಮ್ಮ ಬೆಂಗಳೂರು ಅವಾರ್ಡ್ ಟ್ರಸ್ಟ್ 'ಮೈ ಸಿಟಿ ಮೈ ಹಿರೋಸ್' (ನಮ್ಮ ಬೆಂಗಳೂರು ಪ್ರಶಸ್ತಿ) ಗೆ ನಾಮನಿರ್ದೇಶನ ಮಾಡಲು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಮಂಗವಾರ ಚಾಲನೆ ನೀಡಿತು. ಸೇಂಟ್ ಜೋಸೆಪ್ ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿಗೆ ಹೆಸರುಗಳನ್ನು ನಾಮನಿರ್ದೇಶನ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ನಮ್ಮ ಬೆಂಗಳೂರು ಅವಾರ್ಡ ಟ್ರಸ್ಟ್ನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ಬೆಂಗಳೂರು ಅಭಿವೃದ್ದಿಗೆ ಯಾವುದೇ ತರದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರನ್ನು ಪ್ರಶಸ್ತಿಗೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನಾಮನಿರ್ದೇಶನ ಮಾಡಬೇಕು ಎಂದು ಜ್ಯೂರಿಗಳು ಮನವಿ ಮಾಡಿದರು.