ಜೈವಿಕ ನಾವೀನ್ಯತಾ ಕೇಂದ್ರದಲ್ಲಿ ಸಚಿವರ ಆದೇಶಕ್ಕೆ ಕಿಮ್ಮತ್ತಿಲ್ಲ!
ಬೆಂಗಳೂರಿನಲ್ಲಿರುವ ಜೈವಿಕ ನಾವೀನ್ಯತಾ ಕೇಂದ್ರದಲ್ಲಿ ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲವಾ? ಈಗಿನ ಸ್ಥಿತಿ ನೋಡಿದರೆ ಹಾಗನಿಸುತ್ತದೆ. ಏಕೆಂದರೆ ನೇಮಕಾತಿ ಸೇರಿದಂತೆ ಯಾವುದೇ ಕಾರ್ಯ ಕೈಗೊಳ್ಳಬಾರದು ಎಂಬ ಸಚಿವರ ಆದೇಶವನ್ನೇ ಧಿಕ್ಕರಿಸಲಾಗಿದೆ
ಬೆಂಗಳೂರು, ಏಪ್ರಿಲ್ 6: ಜೈವಿಕ ನಾವೀನ್ಯತಾ ಕೇಂದ್ರದಲ್ಲಿ ಸಚಿವರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲವಾ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ಈ ಕೇಂದ್ರವು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತದೋ ಅದರ ಸಚಿವರಾಗಿದ್ದ ಎಸ್.ಆರ್.ಪಾಟಿಲರಿಗೆ ಇಲ್ಲಿನ ಅವ್ಯವಸ್ಥೆ, ಅವ್ಯವಹಾರಗಳೆಲ್ಲ ಗಮನಕ್ಕೆ ಬಂದು, ಕೇಂದ್ರದಲ್ಲಿ ಯಾವುದೇ ಕೆಲಸವನ್ನು ಸರಕಾರದ ಮುಂದಿನ ಆದೇಶದವರೆಗೆ ಮಾಡಕೂಡದು ಎಂದು ತಿಳಿಸಿದ್ದರು.
ಆದರೆ, ಸಚಿವರ ಆದೇಶಕ್ಕೆ ನಯಾಪೈಸೆ ಬೆಲೆ ಕೊಡದೆ ಇಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಮಾಡಿದ್ದಾರೆ. ಈ ಸಂಬಂಧ ಸಚಿವರ ಆದೇಶ ಪತ್ರ ಒನ್ಇಂಡಿಯಾಗೆ ಲಭ್ಯವಾಗಿದೆ. ಜೈವಿಕ ನಾವೀನ್ಯತಾ ಕೇಂದ್ರದ ಉಸ್ತುವಾರಿ ಇಲಾಖೆಯು ಈಗ ಸಚಿವ ಪ್ರಿಯಾಂಕ್ ಖರ್ಗೆ ಅವರ ಜವಾಬ್ದಾರಿಗೆ ಬರುತ್ತದೆ. ಈ ಕೇಂದ್ರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬುದನ್ನು ಸಹ ಈ ಹಿಂದೆ ವರದಿ ಮಾಡಲಾಗಿದೆ.[ಪ್ರಿಯಾಂಕ್ ಖರ್ಗೆಯವರೇ ಜೈವಿಕ ನಾವೀನ್ಯತಾ ಕೇಂದ್ರದ ಕಡೆ ನೋಡ್ರೀ]
ಇದೀಗ ಸಚಿವರ ಆದೇಶ ಪತ್ರ ಸಿಕ್ಕಿದೆ. ಸರಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟವಾಗಲು ಕಾರಣರಾದವರ ವಿರುದ್ಧ ಈಗಲಾದರೂ ಕ್ರಮ ತೆಗೆದುಕೊಳ್ಳಬೇಕು. ಸಮಗ್ರವಾದ ತನಿಖೆಯೊಂದನ್ನು ನಡೆಸಬೇಕು ಎಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.