ಬೆಂಗಳೂರಲ್ಲಿ ರೆಮಿಡಿಸ್ವಿರ್ ಔಷಧಿ ಪೂರೈಕೆಗೆ SAST ಏಜೆನ್ಸಿ ನಿಯೋಜನೆ
ಬೆಂಗಳೂರು, ಏಪ್ರಿಲ್ 15: ಕೊರೊನಾವೈರಸ್ ಎರಡನೇ ಅಲೆಯ ಭೀತಿ ನಡುವೆ ಬೆಂಗಳೂರಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ರೆಮ್ಡೆಸಿವಿರ್ ಔಷಧಿಯ ಲಭ್ಯತೆಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.
"ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರ ಶಿಫಾರಸ್ಸು ಮಾಡಿರುವ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕ ರೆಮಿಡಿಸ್ವಿರ್ ಔಷಧ ಸರಬರಾಜು ಮಾಡಲು SASTಗೆ ಹೊಣೆಗಾರಿಕೆ ನೀಡಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
ಇದರ ಜೊತೆಗೆ "ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಶ್ರೀ ಕೆಂಪಯ್ಯ ಸುರೇಶ್, ಉಪ ಔಷಧ ನಿಯಂತ್ರಕರರು, ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೋಂಕಿತರ SRF ID ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು" ಎಂದು ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ
ಮೂರು
ಕಂಪನಿಗಳಿಂದ
ಔಷಧಿ
ಉತ್ಪಾದನೆ:
ಕರ್ನಾಟಕದಲ್ಲಿ ರೆಮ್ಡೆಸಿವಿರ್ ಔಷಧಿಗೆ ಯಾವುದೇ ರೀತಿ ಅಭಾವವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಮೂರು ಕಂಪನಿಗಳು ಈ ಔಷಧಿಯನ್ನು ಉತ್ಪಾದಿಸುತ್ತಿವೆ. ಸರ್ಕಾರವು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಔಷಧಿಯನ್ನು ಪೂರೈಕೆ ಮಾಡಲಾಗುವುದು. ಯಾರಿಗೆ ರೆಮ್ಡೆಸಿವಿರ್ ಔಷಧಿಯು ಅಗತ್ಯವಿದೆ ಎಂಬುದರ ಬಗ್ಗೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಬುಧವಾರ ಸಚಿವರು ತಿಳಿಸಿದ್ದರು.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ:
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 11265 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1094912ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನ 38 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 13046ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4364 ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 996367 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 85480 ಸಕ್ರಿಯ ಪ್ರಕರಣಗಳಿವೆ.