ಟೌನ್ ಹಾಲ್ ಎದುರು ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ
ಬೆಂಗಳೂರು, ಫೆಬ್ರವರಿ 29: ಟೌನ್ ಎದುರು ಇನ್ನು ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಟೌನ್ ಹಾಲು ಎದುರು ಪ್ರತಿಭಟನೆ ನಡೆಸುವುದರಿಂದ ಟೌನ್ ಹಾಲ್ ಒಳಗೆ ನಡೆಯುವ ಕಾರ್ಯಕ್ರಮಗಳಿಗೆ ಹೊಡೆತ ಬಿದ್ದಿದೆ, ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದಂತಾಗಿದೆ. ಟೌನ್ ಹಾಲ್ ಎದುರು ಪ್ರತಿಭಟನೆ ಮಾಡುವುದರಿಂದ ಟ್ರಾಫಿಕ್ ತೊಂದರೆಯೂ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಂದ್; ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಅನುಮತಿ ಇಲ್ಲ
ಸಾಮಾನ್ಯವಾಗಿ ಎಲ್ಲಾ ಪ್ರತಿಭಟನೆಗಳು ಫ್ರೀಡಂ ಪಾರ್ಕ್ ಅಥವಾ ಟೌನ್ ಹಾಲ್ ಎದುರೇ ನಡೆಯುತ್ತಿತ್ತು. ಆದರೆ ಇನ್ನುಮುಂದೆ ಟೌನ್ ಹಾಲ್ ಎದುರು ಪ್ರತಿಭಟನೆಗೆ ಅವಕಾಶ ಕೊಡಬಾರದು ಎಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್, ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡುವುದರಿಂದ ಯಾರೂ ಟೌನ್ ಹಾಲ್ ಬಾಡಿಗೆಗೆ ಪಡೆಯುತ್ತಿಲ್ಲ. ಟೌನ್ ಹಾಲ್ ಮುಂದೆ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ.
ಹಾಗೆಯೇ ಟೌಲ್ ಹಾಲ್ ಬಳಿ ಮುಖ್ಯರಸ್ತೆ ಇದೆ. ಹೀಗಾಗಿ ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಮುಷ್ಕರಕ್ಕೆ ಅವಕಾಶವಿಲ್ಲ. ಈ ವಿಚಾರವನ್ನ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಯುವುದರಿಂದ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿ, ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೇ ಜನಸಾಮಾನ್ಯರಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಲು ಅವಕಾಶ ನೀಡದಿರಲು ಬಿಬಿಎಂಪಿ ನಿರ್ಧರಿಸಿದೆ.