ಸರ್ಕಾರದ ಮುಂದೆ ಬಹಮನಿ ಉತ್ಸವದ ಪ್ರಸ್ತಾವ ಇಲ್ಲ: ಉಮಾಶ್ರೀ
ಬೆಂಗಳೂರು, ಫೆಬ್ರವರಿ 15: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಹಮನಿ ಉತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಬಿಜೆಪಿ ಮತ್ತು ಅದರ ಮಿತ್ರ ಸಂಘಟನೆಗಳು ತೀವ್ರ ಆಕ್ರೋಶ ಪಡಿಸಿ ರಾಜ್ಯದಲ್ಲಿ ಚರ್ಚೆ ಹುಟ್ಟುಹಾಕಿವೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ 'ಬಹಮನಿ ಉತ್ಸವ ಆಚರಣೆಯ ಕುರಿತು ಕನ್ನಡ ಮತ್ತು ಸಂಸ್ಕೃತ ಇಲಾಖೆ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ' ಎಂದಿದ್ದಾರೆ.
ಇಲಾಖೆಯಿಂದ ಬಹಮನಿ ಉತ್ಸವ ಆಚರಿಸುವ ಯಾವುದೇ ಆದೇಶ ಹೊರಡಿಸಿಲ್ಲ ಹಾಗೂ ಹಣ ಸಹ ಬಿಡುಗಡೆ ಮಾಡಿಲ್ಲ ಎಂದು ಸಚಿವೆ ಉಮಾಶ್ರೀ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ರಾಷ್ಟ್ರಕೂಟ ಉತ್ಸವ ಆಚರಣೆಗೆ ಮಾತ್ರ 30 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದ್ದು, ಈ ಸಂಬಂಧ ಜನವರಿ 25ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಬಹಮನಿ ಉತ್ಸವ ಕುರಿತ ಯಾವುದೇ ಅಂಶ ಇಲ್ಲ ಎಂದಿದ್ದಾರೆ.
ಈಶ್ವರಪ್ಪ ಹಾಗೂ ಇನ್ನತರರ ಬಿಜೆಪಿ ಮುಖಂಡರು ಸರ್ಕಾರವು ಬಹಮನಿ ಉತ್ಸವ ಆಚರಿಸಲು ಹೊರಟಿದೆ, ಉತ್ಸವ ಆಚರಿಸಿದರೆ ಉಗ್ರ ಹೊರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಬಹಮನಿ ಉತ್ಸವವನ್ನು ಬೆಂಬಲಿಸಿ 'ಉತ್ಸವ ಆಚರಿಸಿದರೆ ಏನು ತಪ್ಪು' ಎಂದು ಪ್ರಶ್ನಿಸಿದ್ದರು.
ಆದರೆ ಈಗ ಸಚಿವೆ ಉಮಾಶ್ರೀ ಅವರ ಹೇಳಿಕೆ ಪ್ರಕಾರ ಸರ್ಕಾರ ಬಹಮನಿ ಉತ್ಸವ ನಡೆಸುವುದಿಲ್ಲ ಎಂಬುದು ಖಾತರಿ ಆದಂತಾಗಿದೆ.