'ಸಂಸದರು ಕಚೇರಿ ತೆರೆದರೆ ಮನೆ ಪಾಠಕ್ಕೆ ತೊಂದರೆ ಇಲ್ಲ'
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಅವರು ಜಯನಗರ 168ನೇ ವಾರ್ಡ್ನಲ್ಲಿ ಗ್ರಂಥಾಲಯದ ಜಾಗದಲ್ಲಿ ಕಚೇರಿ ತೆರೆದರೆ ಅಲ್ಲಿ ನಡೆಯುತ್ತಿರುವ ಮಕ್ಕಳ ಪಾಠಕ್ಕೆ ಯಾವುದೇ ರೀತಿ ತೊಂದರೆ ಇಲ್ಲವೆಂದು ಜಯನಗರ ಶೈಕ್ಷಣಿಕ ಸಮಿತಿ ಹೇಳಿದೆ.
ಸಂಸದರು ಕಚೇರಿ ತೆರೆದರೆ ವರ್ಷಗಳಿಂದ ಅದೇ ಜಾಗದಲ್ಲಿ ನಡೆದುಕೊಂಡು ಬರುತ್ತಿರುವ ಉಚಿತ ಮನೆ ಪಾಠಕ್ಕೆ ತೊಂದರೆ ಆಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದ್ದರಿಂದ ಇದಕ್ಕೆ ಪ್ರತಿಕ್ರಿಯೆಯಾಗಿ ಜಯನಗರ ಶೈಕ್ಷಣಿಕ ಸಮಿತಿ ಸ್ಪಷ್ಟನೆ ನೀಡಿದೆ.
ಸಂಸದರು ಗ್ರಂಥಾಲಯದಲ್ಲಿ ಕಚೇರಿ ನಡೆಸುವುದರಿಂದ ಮಕ್ಕಳ ಪಾಠಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಬದಲಿಗೆ ಶೈಕ್ಷಣಿಕ ಸಮಿತಯ ಕಾರ್ಯಗಳಿಗೆ ಇನ್ನಷ್ಟು ಪುಷ್ಠಿ ದೊರೆಯಲಿದೆ ಎಂದು ಸಮಿತಿಯು ಹೇಳಿದೆ. ಆ ಮೂಲಕ ಸಂಸದರ ಕಚೇರಿಯು ಗ್ರಂಥಾಲಯದಲ್ಲಿ ತೆರೆಯಲು ತಮ್ಮ ವಿರೋಧವಿಲ್ಲ ಎಂದು ಸಮಿತಿಯು ಸ್ಪಷ್ಟಪಡಿಸಿದೆ.
ಸಂಸದರು ಕಚೇರಿ ತೆರೆಯುವದಕ್ಕೆ ನಮ್ಮ ವಿರೋಧವಿದೆ ಎಂಬುದು ಆಧಾರ ರಹಿತ ಸುಳ್ಳು ಸುದ್ದಿ, ಇದಕ್ಕೆ ಮಾಧ್ಯಮಗಳು ಮತ್ತು ಸಾರ್ವಜನಿಕರು ಕಿವಿಗೊಡಬಾರದು ಎಂದು ಜಯನಗರ ಶೈಕ್ಷಣಿಕ ಸಮಿತಿ ಮನವಿ ಮಾಡಿದೆ.