ಇತರ ಸಚಿವರಿಗೆ ಮಾದರಿ ಗೃಹ ಸಚಿವ ಎಂ.ಬಿ.ಪಾಟೀಲ್ ನಿರ್ಣಯ
ಬೆಂಗಳೂರು, ಜನವರಿ 04: ನಾನು ಸಂಚರಿಸುವಾಗ ಝೀರೋ ಟ್ರಾಫಿಕ್ ಬೇಡ, ಸಾಮಾನ್ಯ ಭದ್ರತೆ ಇದ್ದರೆ ಸಾಕು ಎಂದು ಹೊಸ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಕಿರಿ-ಕಿರಿ ಆಗುವ ಝೀರೋ ಟ್ರಾಫಿಕ್ ಬೇಡ ಎನ್ನುವ ಮೂಲಕ ಇತರ ಸಚಿವರಿಗೆ ಮಾದರಿ ಆಗುವ ನಿರ್ಣಯವನ್ನು ಎಂ.ಬಿ.ಪಾಟೀಲ್ ತೆಗೆದುಕೊಂಡಿದ್ದಾರೆ.
ನಾನು ಸಂಚರಿಸುವ ಮಾರ್ಗದಲ್ಲಿ ಸಂಚಾರ ನಿರ್ಭಂದ ಬೇಡ, ಸಾಮಾನ್ಯ ಜನರಂತೆ ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹಿಂದಿನ ಗೃಹ ಮಂತ್ರಿ ಪರಮೇಶ್ವರ್ ಅವರಿಗೆ ಝೀರೋ ಟ್ರಾಫಿಕ್ ಇತ್ತು, ಅದನ್ನು ತೆರವು ಮಾಡಲು ಅವರು ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದು.
ನಾನು ವಾಸ ಇರುವ ಸ್ಥಳದಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಹ ಅತಿಯಾದ ಭದ್ರತೆಯ ಅಗತ್ಯವಿಲ್ಲ, ಸಾಧಾರಣ ಭದ್ರತೆ ವ್ಯವಸ್ಥೆ ಇದ್ದರೆ ಸಾಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಂ.ಬಿ.ಪಾಟೀಲ್ ಹೇಳಿದ್ದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಗೃಹ ಸಚಿವರಾದ ನಂತರ ಇಂದು ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿದ ಅವರು, ಇಲಾಖೆಯ ಹಲವು ವಿಷಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಜೊತೆಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.
ನಾಳೆ ಉಡುಪಿಗೆ ತೆರಳುತ್ತಿರುವುದಾಗಿ ಹೇಳಿರುವ ಅವರು, ಕಾಣೆ ಆಗಿರುವ ಮೀನುಗಾರರ ಕುಟುಂಬ ಸದಸ್ಯರೊಂದಿಗೆ ಮಾತನಾಡುವುದಾಗಿ ಮಾಧ್ಯಗಳಿಗೆ ತಿಳಿಸಿದರು.