ವಿವಾದಕ್ಕೆ ಕಾರಣವಾಯ್ತು ಶಾಸಕ ಜಮೀರ್ ಅಹಮ್ಮದ್ ಖಾನ್ 'ಪಾದಪೂಜೆ'!
ಬೆಂಗಳೂರು, ಜು. 01: ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿ ಆಗುವ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಕೋವಿಡ್-19, ಲಾಕ್ಡೌನ್ ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಚರ್ಚೆಗೆ ಬಂದಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಇದೀಗ ಪಾದಪೂಜೆ ಮೂಲಕ ಮತ್ತೆ ಚರ್ಚೆಗೆ ವಸ್ತುವಾಗಿದ್ದಾರೆ.
Recommended Video
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಕಟ್ಟುನಿಟ್ಟಾಗಿ ಸಾಮಾಜಿಕ ಸಂತರ ಕಾಪಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಬೆಂಗಳೂರು ಮಹಾನಗರವೊಂದರಲ್ಲೆ 4,555 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 485 ಕಂಟೈನ್ಮೆಂಟ್ ಝೋನ್ಗಳಿವೆ.
ಕೋವಿಡ್: ಜಮೀರ್ ಅಹಮ್ಮದ್ಗೆ ಕೊನೆಗೂ ಬುದ್ದಿ ಬಂದಿದ್ದು ಹೇಗೆ ಗೊತ್ತಾ?
ಹೀಗಾಗಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡುತ್ತಲೇ ಇದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಬಿಬಿಎಂಪಿ ದಂಡವನ್ನೂ ಹಾಕುತ್ತಿದೆ. ಆದರೂ ನಮ್ಮ ಜನಪ್ರತಿನಿಧಿಗಳು ಮಾತ್ರ ಪೈಪೋಟಿಗೆ ಬಿದ್ದವರಂತೆ ಲಾಕ್ಡೌನ್ ನಿಯಮಾವಳಿಗಳನ್ನು ಮುರಿಯುತ್ತಿದ್ದಾರೆ. ಇದೀಗ ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ? ಅನ್ನೋ ರೀತಿ ಅನ್ನಿಸಿದರೂ ಪಾದಪೂಜೆಯ ವಿಡಿಯೊ ವೈರಲ್ ಆಗಿದೆ.
ಜಮೀರ್ ಅಹಮ್ಮದ್ ಖಾನ್ ಪಾದಪೂಜೆ
ಸ್ವಾಮೀಜಿಗಳಿಗೆ ಪಾದಪೂಜೆ ಮಾಡುವುದು ಸಂಪ್ರದಾಯ. ಆದರೆ ಇತ್ತೀಚೆಗೆ ಪೌರ ಕಾರ್ಮಿಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಪಾದಪೂಜೆ ಮಡುವ ಮೂಲಕ ಅವರ ಸೇವಾಮನೋಭಾವನೆಯನ್ನು ಗೌರವಿಸಲಾಗುತ್ತಿದೆ. ಅವರ ಪಾದಪೂಜೆ ಮಾಡುವುದು ಅವರಿಗೆ ಕೊಡುವ ಗೌರವ. ಆದರೆ ಇದೀಗ ಶಾಸಕರೊಬ್ಬರಿಗೆ ಬೆಂಬಲಿಗರಿಗೆ ಪಾದಪೂಜೆ ಮಾಡಿದ್ದಾರೆ
ಹೌದು ಚಾಮರಾಜಪೇಟೆಯೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಕೊರೊನಾ ವೈರಸ್ ಸಂಕಷ್ಟದಲ್ಲಿ ಪಾದಪೂಜೆ ಮಾಡಿಸಿಕೊಂಡಿದ್ದಾರೆ. ಜಮೀರ್ ಅವರ ಕಾಲು ತೊಳೆದು, ಹೂ ಹಾಕಿ ಪಾದಪೂಜೆಯನ್ನು ಮಾಡಲಾಗಿದೆ. ಬಳಿಕ ಬಟ್ಟೆಯಿಂದ ಜಮೀರ್ ಅಹಮ್ಮದ್ ಅವರ ಪಾದಗಳನ್ನು ಬೆಂಬಲಿಗರು ಒರೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಅಂತರ?
ಪಾದಪೂಜೆ ನಡೆದಿರುವುದನ್ನು ನೋಡಿದರೆ ಕೋವಿಡ್ 19 ಸಂದರ್ಭದಲ್ಲಿ ಸಾಮಾಜಿಕ ಅಂತರ ಎಂದರೇನೂ ಎಂದು ಪ್ರಶ್ನೆ ಮಾಡುವಂತಿದೆ. ಯಾವುದೇ ಸಾಮಾಜಿಕ ಅಂತರವಿಲ್ಲದೆ ಶಾಸಕರ ಪಾದಪೂಜೆ ಕಾರ್ಯಕ್ರಮ ನಡೆದಿದೆ.
ಚಾಮರಾಜಪೇಟೆಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಜಮೀರ್ ಅವರ ಬೆಂಬಲಿಗರು ಒಟ್ಟೊಟ್ಟಾಗಿ ನಿಂತು ಪಾದಪೂಜೆ ಮಾಡಿದ್ದಾರೆ. ಕೋವಿಡ್ 19 ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿರುವುದು ಸಧ್ಯದ ಕೊರೊನಾ ವೈರಸ್ ಸಂಕಷ್ಟವನ್ನು ಲೇವಡಿ ಮಾಡುವಂತಿದೆ.
ಪಾದಪೂಜೆ ಯಾಕೆ?
ಹೀಗೆ ಬೆಂಬಲಿಗರು ಶಾಸಕ ಜಮೀರ್ ಅಹಮ್ಮದ್ ಪಾದಪೂಜೆ ಮಾಡಲು ಅತ್ಯುತ್ತಮ ಕಾರಣವಿದೆ. ಜಮೀರ್ ಅವರು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಉಚಿತವಾಗಿ ನೆರವೇರಿಸಲು ಸಹಾಯ ಮಾಡುತ್ತಿದ್ದಾರಂತೆ. ಅದಕ್ಕಾಗಿ ಶಾಸಕ ಜಮೀರ್ ಅಹಮದ್ ಗೆ ಸನ್ಮಾನ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಉದ್ದೇಶವೇನೊ ಒಳ್ಳೆಯದಿದೆ. ಆದರೆ ಸಮಯ, ಸಂದರ್ಭ ಮಾತ್ರ ಸರಿಯಾಗಿಲ್ಲ.
ಕಳೆದ ಜೂನ್ 28 ರಂದು ಚಾಮರಾಜಪೇಟೆಯ ಕೆಂಪೇಗೌಡ ನಗರ 5ನೇ ಹಂತದಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಈ ಪಾದಪೂಜೆ ಕಾರ್ಯಕ್ರಮ ನಡೆದಿದೆ. ಬಂಗಾರದ ಮನುಷ್ಯ ಜಮೀರಣ್ಣ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬ ಮಾಹಿತಿಯಿದೆ.
ಸಚಿವರಿಂದ ಆರಂಭ
ಕೊರೊನಾ ವೈರಸ್ ಸಂದರ್ಭದಲ್ಲಿ ಲಾಕ್ಡೌನ್ ನಿಯಮಾವಳಿಗಳನ್ನು ಮುರಿಯುವುದು ಚುನಾಯಿತ ಜನಪ್ರತಿನಿಧಿಗಳಿಂದಲೇ ಶುರುವಾಗಿದೆ ಎಂಬುದು ದುರ್ದೈವದ ಸಂಗತಿ. ಆರೋಗ್ಯ ಸಚಿವ ಶ್ರೀರಾಮುಲು ಅವರು ಚಿತ್ರದುರ್ಗದಲ್ಲಿ ಸಾರ್ವಜನಿಕ ಮೆರವಣಿಗೆಯ ಮೂಲಕ ಮೊದಲ ಬಾರಿ ಲಾಕ್ಡೌನ್ ನಿಯಮ ಮುರಿದರು.
ಆಮೇಲೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ.ಟಿ. ಪರಮೇಶ್ವರ್ ನಾಯಕ್ ಅವರ ಪುತ್ರನ ಮದುವೆಯಲ್ಲಿ ಪಕ್ಷಬೇಧ ಬಿಟ್ಟು ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಲಾಕ್ಡೌನ್ ನಿಯಮಾವಳಿ ಗಾಳಿಗೆ ತೂರಿದ್ದರು. ನಂತರ ಬೆಂಗಳೂರಿನಲ್ಲಿ ಇಂಧನ ದರ ವಿರೋಧಿಸಿ ಮಾಡಿದ ಸೈಕಲ್ ಪ್ರತಿಭಟನೆಯಲ್ಲಿಯೂ ಲಾಕ್ಡೌನ್ ಇದೆಯಾ ಎಂಬ ಸಂಶಯ ಬರಯವಂತಿತ್ತು.
ಒಟ್ಟಾರೆ ಜನರಿಗೆ ಮಾದರಿಯಾಗಿ ತಿಳುವಳಿಕೆ ಮೂಡಿಸಬೇಕಿದ್ದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ಮಾಡುತ್ತಿರುವುದು ದುರ್ದೈವದ ಸಂಗತಿ.