ಕೊರೊನಾಗೆ ಬಿಎಂಟಿಸಿ 30 ಸಿಬ್ಬಂದಿ ಸಾವು: ಐದು ಪೈಸೆ ಪರಿಹಾರ ಕೊಟ್ಟಿಲ್ಲ
ಬೆಂಗಳೂರು, ಫೆಬ್ರವರಿ 05: ನರ್ಸ್ ಗಳು, ವೈದ್ಯರು, ಪೊಲೀಸರು, ಆಂಬ್ಯೂಲೆನ್ಸ್ ಚಾಲಕರು ಕರೋನಾ ವಾರಿಯರ್ಸ್ ! ಅದೇ ರೀತಿ ಸಂಕಷ್ಟ ಕಾಲದಲ್ಲಿ ಸೇವೆ ಮಾಡಿದ ಬಿಎಂಟಿಸಿ ಸಿಬ್ಬಂದಿ ಕರೋನಾ ವಾರಿಯರ್ಸ್ ಅಲ್ಲವೇ ? ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ನೌಕರರು ಕೂಡ ಕರೋನಾ ವಾರಿಯರ್ಸ ಎಂದು ಸ್ವತಃ ಸಾರಿಗೆ ಸಚಿವರೇ ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಕರೋನಾ ಸೋಂಕಿಗೆ ಬಲಿಯಾದ ಬಿಎಂಟಿಇಸ ಸಿಬ್ಬಂದಿಗೆ ಐದು ಪೈಸೆ ಪರಿಹಾರ ಸಿಕ್ಕಿಲ್ಲ!
ರಾಜಧಾನಿ ಬೆಂಗಳೂರಿನಲ್ಲಿ ಬಡವರ ಸೇವೆ ಒದಗಿಸುವ ಬಿಎಂಟಿಸಿ ಚಾಲಕ ಮತ್ತು ನಿವಾರ್ಹಕರು ಸೇರಿ 30 ಮಂದಿ ಬಿಎಂಟಿಸಿ ಸಿಬ್ಬಂದಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕರ್ತವ್ಯ ನಿರ್ವಹಣೆ ವೇಳೆಯೇ ಸೋಂಕು ತಗುಲಿ ಬಹುತೇಕರು ತೀರಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಕರೋನಾ ಸೋಂಕಿಗೆ ಬಲಿಯಾದ ಬಿಎಂಟಿಸಿ ಸಿಬ್ಬಂದಿಗೆ ಐದು ಪೈಸೆ ಪರಿಹಾರ ನೀಡಿಲ್ಲ. ಈ ಸಂಗತಿ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆರ್ಟಿಐ ಕಾರ್ಯಕಗರ್ತ ಶ್ರೀನಿವಾಸ್ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳಲ್ಲಿ ಬಹಿರಂಗವಾಗಿದೆ.
30 ಲಕ್ಷ ಪರಿಹಾರ
ಕರೋನಾ ಸೋಂಕು ಹಿನ್ನೆಲೆಯಲ್ಲಿ ತುರ್ತು ಸೇವೆ ಸಲ್ಲಿಸುವ ವೈದ್ಯರು, ನರ್ಸ್ ಆಂಬ್ಯೂಲೆನ್ಸ್ ಚಾಲಕರು, ಪೊಲೀಸ್ ಸಿಬ್ಬಂದಿ ಹಾಗೂ ಸಾರಿಗೆ ಸಿಬ್ಬಂದಿ ಕರೋನಾ ವಾರಿಯರ್ಸ್. ಕರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟರೆ, ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವ ಘೋಷಣೆಯನ್ನು ಸರ್ಕಾರ ಮಾಡಿತ್ತು. ಅದರಂತೆ ಕರೋನಾ ಸೋಂಕಿಗೆ ಬಲಿಯಾದ ನರ್ಸ್, ವೈದ್ಯರಿಗೆ ಹಾಗೂ ಪೊಲೀಸರಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ, ಬಿಎಂಟಿಸಿ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಮಾತ್ರ ಐದು ಪೈಸೆ ಪರಿಹಾರ ನೀಡಿಲ್ಲ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮ ದಡಿ ಸಲ್ಲಿಸಿದ ಅರ್ಜಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉತ್ತರ ನೀಡಿದ್ದು, ಈ ಸ್ಫೋಟಕ ಸಂಗತಿ ಇದರಿಂದ ಹೊರ ಬಿದ್ದಿದೆ.
ಸರ್ಕಾರದ ತಾರತಮ್ಯ
ಕರೋನಾ ಸೋಂಕಿಗೆ ಬಿಎಂಟಿಸಿ ಚಾಲಕರು, ನಿರ್ವಾಹಕರು ಸೇರಿದಂತೆ 30 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಾರಿಗೆ ಸಿಬ್ಬಂದಿಯನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವ ಬಗ್ಗೆ ಸರ್ಕಾರ ಯಾವುದೇ ಆದೇಶ, ಸೂಚನೆಯಾಗಲಿ ನೀಡಿಲ್ಲ. ಹೀಗಾಗಿ ಮೃತರಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಮಾಹಿತಿ ಹಕ್ಕು ಅಧಿನಿಯಮದ ಅರ್ಜಿಗೆ ಬಿಎಂಟಿಸಿ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದಾರೆ. ಕರೋನಾ ವಾರಿಯರ್ಸ್ ಎಂದು ದುಡಿಸಿಕೊಂಡು ಇದೀಗ ಕೈ ಎತ್ತಿರುವ ಇಲಾಖೆಯ ನಡೆಯ ಬಗ್ಗೆ ನೌಕರರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ತಾರತಮ್ಯ ಸರಿಪಡಿಸಬೇಕು ಎಂದು ಬಿಎಂಟಿಸಿ ಚಾಲಕರು ಮತ್ತು ಮತ್ತು ನಿರ್ವಾಹಕರು ಒತ್ತಾಯಿಸಿದ್ದಾರೆ. ನಿಗಮದ ಮೇಲೆ ಸರ್ಕಾರ, ಸರ್ಕಾರದ ಮೇಲೆ ನಿಗಮ ಎತ್ತಿ ಹಾಕಿ ಸಾರಿಗೆ ನೌಕರರಿಗೆ ದಿಕ್ಕುತಪ್ಪಿಸಲಾಗುತ್ತಿದೆ ಎಂದು ನೌಕಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಡೋಣ.. ನೋಡೋಣ ಅಂದ್ರೆ ಬರುತ್ತಾ ?
ಇನ್ನು ಕರೋನಾ ಸೋಂಕಿಗೆ ಬಲಿಯಾದ ಬಿಎಂಟಿಸಿ ಸಿಬ್ಬಂದಿಯ ಕುಟುಂಬ ಸ್ಥಿತಿ ಚಿಂತಾಜನಕವಾಗಿದೆ. ಕೆಲಸದ ವಿಚಾರಕ್ಕೆ ಬಂದರೆ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ವಾರಿಯರ್ಸ್ .ಅದೇ ಪರಿಹಾರದ ವಿಚಾರಕ್ಕೆ ಬಂದರೆ ವಾರಿಯರ್ಸ್ ಅಲ್ಲ. ಬೇರೆ ಇಲಾಖೆಯ ಸಿಬ್ಬಂದಿಯನ್ನು ಪರಿಗಣಿಸಿದ ಸರ್ಕಾರ ಯಾಕೆ ಸಾರಿಗೆ ಇಲಾಖೆ ನೌಕರರನ್ನು ಪರಿಗಣಿಸಿಲ್ಲ. ಈ ಕುರಿತು ಸಚಿವ ಲಕ್ಷ್ಮಣ ಸವಧಿ ಅವರ ಗಮಕಕ್ಕೆ ತರಲಾಗಿದೆ. ಅವರು ಯಾವಾಗ ಕೇಳಿದ್ರೂ ನೋಡೋಣ, ನೋಡೋಣ ಎಂದು ಹಾರಿಕೆ ಉತ್ತರ ನೀಡಿ ಸುಮ್ಮನಾಗಿದ್ದಾರೆ. ಕರೋನಾಗೆ ಬಲಿಯಾದ ಬಿಎಂಟಿಸಿ ಸಿಬ್ಬಂದಿ ಏನು ಮಾಡಿದ್ದರು ? ಯಾಕೆ ಅವರಿಗೆ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ. 30 ಲಕ್ಷ ಬೇಡ, ಕನಿಷ್ಠ ಅವಲಂಭಿತರ ಬದುಕಿಗೆ ಆಗುವ ಪರಿಹಾರ ಸಂದಾಯ ಮಾಡಬೇಕಿತ್ತು. ತುರ್ತು ಪರಿಸ್ಥಿತಿಯಲ್ಲಿ ಅವರು ವಾಹನ ಚಾಲನೆ ಮಾಡಿಲ್ಲವೇ ? ಚಾಲನೆ ಮಾಡಿದ ವಾಹನಗಳನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಬೇಕಿತ್ತು ಅಲ್ಲವೇ ? ಸಚಿವರು ಕೂಡ ನೌಕರರ ವಿರುದ್ಧ ನೀತಿ ಅನುಸರಿಸುತ್ತಿರುವುದು ಇದು ಸಿಬ್ಬಂದಿ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
Recommended Video
20 ಸಾವಿರ ಮಾಸ್ಕ್ ವೇಸ್ಟ್
ಕರೊನಾ ಬಂದು ಜನ ಸಿಕ್ಕ ಸಿಕ್ಕಲ್ಲಿ ಸಾವಿಗೀಡಾಗುತ್ತಿದ್ದರು. ಬಿಎಂಟಿಸಿ ಬಳಿ 20 ಸಾವಿರ ಮಾಸ್ಕ್ ಗಳು ಇದ್ದವು. ಕರೋನಾ ಸಂಕು ಬಂದಾಗಿನಿಂದಲೂ ಈ ಪ್ರಮಾಣದ ಮಾಸ್ಕ್ ಇದ್ದರೂ ಈವರೆಗೂ ಸಿಬ್ಬಂದಿಗೆ ವಿತರಿಸಿಲ್ಲ ! ಬಿಎಂಟಿಸಿ ಅಧಿಕಾರಿಗಳು ಅದ್ಯಾವ ಉದ್ದೇಶ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಮಾಹಿತಿ ಹಕ್ಕು ಅಧಿನಿಯಮದಡಿ ಹೊರ ತೆಗೆದ ದಾಖೆಲಗಳಲ್ಲಿ ಬಿಎಂಟಿಸಿ ಬಳಿ 20 ಸಾವಿರ ಮಾಸ್ಕ್ ಗಳು ಕರೋನಾ ಬರುವ ಮೊದಲಿನಿಂದಲೂ ಇದೆ. ಆದರೆ ಯಾರಿಗೂ ಬಳಕಗೆ ನೀಡಿಲ್ಲ. ಬಿಎಂಟಿಸಿ ಅದ್ಯಾವ ಲೆಕ್ಕಾಚಾರದಿಂದ ಮಾಸ್ಕ್ ಖರೀದಿಸಿ ಇಟ್ಟುಕೊಂಡಿದ್ದೆಯೋ ಗೊತ್ತಿಲ್ಲ. ಇದಕ್ಕೆ ಕೂಡ ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕು. ಯಾಕೆಂದರೆ ಸದ್ಯ ಕರೋನಾ ಸೋಂಕಿಗೆ ವ್ಯಾಕ್ಸಿನ್ ಬಂದಾಗಿದೆ. ಎಲ್ಲಡೆ ಹಂಚುತ್ತಿದ್ದಾರೆ. ಇಷ್ಟಾಗಿಯೂ ಮಾಸ್ಕ್ ಇಟ್ಟುಕೊಂಡು ಬಿಎಂಟಿಸಿ ಮೇಲಾಧಿಕಾರಿಗಳು ಪೂಜೆ ಮಾಡುತ್ತಾರಾ ನೋಡಬೇಕು.