ಬೆಂಗಳೂರಿನ ಪ್ರಸಿದ್ಧ ಅವರೆ ಬೇಳೆ ಮೇಳಕ್ಕೆ ಬಿಬಿಎಂಪಿ ಅಡ್ಡಗಾಲು
ಬೆಂಗಳೂರು, ಜನವರಿ 9: ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ವಿವಿ ಪುರಂನ ಅವರೆ ಬೇಳೆ ಮೇಳಕ್ಕೆ ಬಿಬಿಎಂಪಿ ಅಡ್ಡಗಾಲು ಹಾಕಿದೆ.
ಸ್ವಚ್ಛತೆ ನೆಪವೊಡ್ಡಿ ಈ ಬಾರಿ ಅವರೆ ಬೇಳೆ ಮೇಳಕ್ಕೆ ಅನುಮತಿ ನಿರಾಕರಿಸಿದೆ. ಎಲ್ಲರ ಬಾಯಲ್ಲಿ ನೀರೂರಿಸುವ ಅವರೆ ಬೇಳೆಯಿಂದ ತಯಾರಿಸಿರುವ ಪದಾರ್ಥಗಳು ಈ ಮೇಳದಲ್ಲಿ ಲಭ್ಯವಿರುತ್ತಿದ್ದವು. ವಾಸವಿ ಕಾಂಡಿಮೆಂಟ್ಸ್ ಪ್ರತಿ ವರ್ಷ ಈ ಮೇಳವನ್ನು ಆಯೋಜಿಸುತ್ತಿತ್ತು.
ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ. ಆದರೆ ಈ ವರ್ಷ ಸ್ವಚ್ಛತೆಯ ಕಾರಣವೊಡ್ಡಿ ಮೇಳ ನಡೆಸಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅನುಮತಿ ನಿರಾಕರಿಸಿದೆ.
ಮೇಳವನ್ನು ರಸ್ತೆ ಬದಿ ನಡೆಸುವಾಗ ಸ್ವಚ್ಛತೆಯಿರುವುದಿಲ್ಲ. ಅಲ್ಲದೆ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಈ ವರ್ಷ ಮೇಳಕ್ಕೆ ಅನುಮತಿಯಿಲ್ಲ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವಾಸವಿ ಕಾಂಡಿಮೆಟ್ಸ್ ಗೆ ಕಳುಹಿಸಿದ ನೊಟಿಸ್ ನಲ್ಲಿ ತಿಳಿಸಿದೆ.
ವಿ ವಿ ಪುರಂ ಕಾರ್ಪೊರೇಟರ್ ವಾಣಿ ವಿ ರಾವ್, ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಬದಿ ಜನರು ತಿಂದ ಆಹಾರದ ತಟ್ಟೆಗಳನ್ನು ಚರಂಡಿಯಲ್ಲಿ ಎಸೆದು ಹೋಗುತ್ತಾರೆ, ವಸತಿ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ಸಹ ಗಲೀಜು ಮಾಡಿ ಹೋಗುತ್ತಾರೆ ಎಂದು ನಮಗೆ ದೂರುಗಳು ಬಂದಿವೆ.
ಮೇಳಕ್ಕೆ ಬರುವವರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸುವ ನಿವಾಸಿಗಳಿಂದ ನಮಗೆ ಸಾಕಷ್ಟು ದೂರುಗಳು ಬಂದಿವೆ. ಇದಕ್ಕಾಗಿ ಈ ಬಾರಿ ಪಾಲಿಕೆ ಅನುಮತಿ ಕೊಟ್ಟಿಲ್ಲ ಎಂದಿದ್ದಾರೆ.