ಅಮೂಲ್ಯಳ ಪಾಕ್ ಪರ ಘೋಷಣೆ; ಬೆಂಗಳೂರು ವಕೀಲರ ನಿರ್ಧಾರ ಏನು?
ಬೆಂಗಳೂರು ಫೆಬ್ರವರಿ 25: ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಳ ಪರ ಕೋರ್ಟ್ನಲ್ಲಿ ವಾದಿಸದಿರಲು ಬೆಂಗಳೂರು ವಕೀಲರ ಸಂಘ (ದಿ ಅಡ್ವೋಕೇಟ್ ಅಸೋಸಿಯೇಷನ್ ಬೆಂಗಳೂರು) ನಿರ್ದಾರ ತೆಗೆದುಕೊಂಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬೆಂಗಳೂರು ವಕೀಲರ ಸಂಘ, "ಕುಮಾರಿ ಅಮೂಲ್ಯ ಲಿಯೋನಾ ಎಂಬ ವಿದ್ಯಾರ್ಥಿನಿ ಪಾಕಿಸ್ತಾನ್ ಜಿಂದಾಬಾದ್ ಎಂದು ದೇಶ ವಿರೋಧಿ ಹೇಳಿಕೆ ನೀಡಿದ್ದು, ಸದ್ಯ ಆರೋಪಿಯಾಗಿದ್ದಾಳೆ. ಅಮೂಲ್ಯಳ ಪರವಾಗಿ ಯಾವ ವಕೀಲರು ಕೋರ್ಟ್ನಲ್ಲಿ ವಾದಿಸಬಾರದು ಎಂದು ಬೆಂಗಳೂರು ವಕೀಲರ ಸಂಘ ಮನವಿ ಮಾಡುತ್ತದೆ' ಎಂದಿದ್ದಾರೆ.
ಪಾಕ್ ಪರ ಘೋಷಣೆ; ಸಮಾವೇಶ ಆಯೋಜಿಸಿದ್ದ ಸಂಘಟಕರಿಗೆ ಪೊಲೀಸ್ ಬುಲಾವ್
ಈ ಬಗ್ಗೆ ವಕೀಲರ ಸಂಘದ ಅಂತಿಮ ತೀರ್ಮಾನ ಬಂದಿಲ್ಲವಾದರೂ ವಕೀಲರು ವಾದಿಸಬಾರದು ಎಂದು ಮನವಿ ಮಾಡುತ್ತೇವೆ ಎಂದು ದಿ ಅಡ್ವೋಕೇಟ್ ಅಸೋಸಿಯೇಷನ್ ಬೆಂಗಳೂರು ಮನವಿ ಮಾಡಿದೆ.
ಮೊದಲು ಕೋರ್ಟ್ಗೆ ಕರೆ ತನ್ನಿ
ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನಾಳನ್ನು ಹೆಚ್ಚಿನ ವಿಚಾರಣೆ ನಡೆಸಲು ಪಶ್ಚಿಮ ವಿಭಾಗದ ಪೊಲೀಸರು ಇಂದು ಕೋರ್ಟ್ ಗೆ ಮನವಿ ಮಾಡಿದರು. ಪೊಲೀಸ್ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದರು. ವಿಡಿಯೋ ಕಾನ್ಪರೆನ್ಸ ಮೂಲಕ ವಿಚಾರಣೆಗೆ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದರು. ಆದರೆ, ಹೈಕೋರ್ಟ್ ಇದಕ್ಕೆ ನಿರಾಕರಿಸಿದ್ದು, ಅಮೂಲ್ಯ ಲಿಯೋನಾಳನ್ನು ಕೋರ್ಟ್ಗೆ ಹಾಜರುಪಡಿಸಿ ಮೊದಲು ಎಂದು ಹೇಳಿದೆ.
ಕೋರ್ಟ್ಗೆ ಕರೆ ತರಲು ಹಿಂದೇಟು
ಪರಪ್ಪನ ಅಗ್ರಹಾರದಲ್ಲಿರುವ ಅಮೂಲ್ಯ ಲಿಯೋನಾಳನ್ನು ಪಶ್ಚಿಮ ವಿಭಾಗದ ಪೊಲೀಸರು ಭದ್ರತೆ ದೃಷ್ಠಿಯಿಂದ ಕೋರ್ಟ್ಗೆ ಕರೆ ತರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಮೂಲ್ಯಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಂಬಂಧ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿ ಎಂದು ಪೊಲೀಸರು ಮನವಿ ಮಾಡಿದ್ದರು.
'ಪಾಕಿಸ್ತಾನ್ ಜಿಂದಾಬಾದ್' ಎಂದವಳಿಗೆ ವೇದಿಕೆಯಲ್ಲೇ ಓವೈಸಿ ಪ್ರತಿಕ್ರಿಯೆ ಏನು?
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ
ಕಳೆದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಫೌಂಡೇಶನ್ ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಮೈಕ್ ತೆಗೆದುಕೊಂಡು ಭಾಷಣ ಮಾಡುವ ವೇಳೆ ಚಿಕ್ಕಮಗಳೂರು ಮೂಲದ ಜಯನಗರ ಖಾಸಗಿ ಕಾಲೇಜು ಒಂದರ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು.
ಸಂಘಟಕರ ವಿಚಾರಣೆ
ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಪಶ್ಚಿಮ ವಿಭಾಗ ಪೊಲೀಸರು ಮತ್ತೆ ವಿಚಾರಣೆ ನಡೆಸಿದ್ದಾರೆ. ಅಮೂಲ್ಯ ಎನ್ನುವ ಯುವತಿ ನೀವು ಆಯೋಜಿಸಿದ್ದ ಸಮಾವೇಶದಲ್ಲಿ ಏಕೆ ದೇಶ ವಿರೋಧಿ ಹೇಳಿಕೆ ನೀಡಿದ್ದು? ಅವಳಿಗೆ ಕಾರ್ಯಕ್ರಮಕ್ಕೆ ಆಹ್ವಾನವಿತ್ತಾ? ಇನ್ನೂ ಯಾವೆಲ್ಲ ಸಂಘಟನೆಗಳು ಸಮಾವೇಶಕ್ಕೆ ಕೈ ಜೋಡಿಸಿದ್ದವು ಎಂದು ಪೊಲೀಸರು ಇಮ್ರಾನ್ ಪಾಷಾ ಅವರನ್ನು ಪ್ರಶ್ನಿಸಿದ್ದಾರೆ.