ನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಡಿಕೆಶಿ ಹೋಗಿದ್ದೇಕೆ ಗೊತ್ತಾ?
ಬೆಂಗಳೂರು, ನವೆಂಬರ್.22: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಅಂದ್ರೆ ಸುದ್ದಿ. ಸುದ್ದಿ ಅಂದ್ರೆನೇ ನಿತ್ಯಾನಂದ ಸ್ವಾಮೀಜಿ. ರಾಜ್ಯದಲ್ಲೇ ಇರುವ ಈ ದೇವಮಾನವ ಏನೇ ಮಾಡಿದರೂ ಸುದ್ದಿ ಆಗುತ್ತದೆ. ವೈರಲ್ ಆಗುತ್ತದೆ.
ಇತ್ತೀಚಿಗಷ್ಟೇ ನಿತ್ಯಾನಂದ ಸ್ವಾಮೀಜಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಅದಕ್ಕೆ ಕಾರಣವಾಗಿದ್ದೇ ಮಾಜಿ ಸಚಿವರೊಬ್ಬರ ಜೊತೆಗಿನ ಫೋಟೋ. ರಾಜ್ಯದ ಪ್ರಭಾವಿ ನಾಯಕರ ಜೊತೆ ನಿತ್ಯಾನಂದ ಸ್ವಾಮೀಜಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಕೆರಳಿಸಿತ್ತು.
ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ: ಪಾಸ್ಪೋರ್ಟ್ ಯಾರದ್ದು?
ರಾಜ್ಯ ಸರ್ಕಾರದ ಪವರ್ ಫುಲ್ ಮಿನಿಸ್ಟರ್ ಎನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಸ್ವತಃ ನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಇಬ್ಬರ ನಡುವಿನ ಭೇಟಿ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಅದಕ್ಕೆಲ್ಲ ಇಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ.
ನಿತ್ಯಾನಂದ ಸ್ವಾಮೀಜಿ ಜೊತೆಗೆ ತೆಗೆಸಿಕೊಂಡಿರುವ ಆ ಫೋಟೋ ಒಂದು ವರ್ಷದ ಹಿಂದಿನದ್ದು ಕಣ್ರಿ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಚುನಾವಣೆ ಸಂದರ್ಭದಲ್ಲಿ ಬಿಡದಿಯ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿದ್ದೆನು. ಅಂದು ತೆಗೆದ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಇತ್ತೀಚಿಗೆ ನಾನು ಬಿಡದಿಯ ಆಶ್ರಯಕ್ಕೂ ಭೇಟಿ ನೀಡಿಲ್ಲ. ನಿತ್ಯಾನಂದ ಸ್ವಾಮೀಜಿಯವರನ್ನೂ ಭೇಟಿ ಮಾಡಿಲ್ಲ. ಈ ಫೋಟೋಗೆ ಸುಖಾಸುಮ್ಮನೆ ಬಣ್ಣ ಕಟ್ಟುವುದು, ಚರ್ಚೆ ಮಾಡುವುದು ತರವಲ್ಲ ಎಂದು ಡಿಕೆಶಿ ಕಿಡಿ ಕಾರಿದ್ದಾರೆ.