ಸಿಐಡಿ ಕೈ ಸೇರಿದ ನಿತ್ಯಾನಂದ ಪುರುಷತ್ವ ಪರೀಕ್ಷೆ ವರದಿ
ಬೆಂಗಳೂರು, ಸೆ. 16 : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಪುರುಷತ್ವ ಪರೀಕ್ಷೆ ವರದಿ ಸೋಮವಾರ ಸಿಐಡಿ ಅಧಿಕಾರಿಗಳ ಕೈ ಸೇರಿದೆ. ತಪಾಸಣೆ ವರದಿಯನ್ನು ಬಹಿರಂಗಗೊಳಿಸಲು ಸಾಧ್ಯವಾಗದ ಕಾರಣ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ಟಿ.ದುರ್ಗಣ್ಣ ಹೇಳಿದ್ದಾರೆ.
ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ಟಿ.ದುರ್ಗಣ್ಣ ಪುರುಷತ್ವ ಪರೀಕ್ಷೆ ನಡೆಸಿದ ಆರು ಮಂದಿಯ ವೈದ್ಯ ತಂಡ ವರದಿಗೆ ಸಹಿ ಹಾಕಿ ಸಿಐಡಿಗೆ ಹಸ್ತಾಂತರಿಸಿದೆ. ತಂಡದ ಎಲ್ಲಾ ವೈದ್ಯರ ಸಹಮತದೊಂದಿಗೆ ವರದಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]
ರಕ್ತ ಪರೀಕ್ಷೆ, ದೈಹಿಕ ಪರೀಕ್ಷೆ, ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಲಾಗಿದೆ. ಡೋಪ್ಲರ್ ಪರೀಕ್ಷೆಗೆ ನಿತ್ಯಾನಂದ ಸ್ವಾಮೀಜಿ ಸಹಕರಿಸದ ಕಾರಣ ಅದನ್ನು ನಡೆಸಿಲ್ಲ ಎಂದು ದುರ್ಗಣ್ಣ ಅವರು ಸ್ಪಷ್ಟಪಡಿಸಿದರು. ರೋಗಿಯ ಒಪ್ಪಿಗೆ ಇಲ್ಲದೆ ಪರೀಕ್ಷೆ ನಡೆಸುವುದು ಅಸಾಧ್ಯ. ಹೀಗಾಗಿ ತನಿಖಾಧಿಕಾರಿಗಳು ಕೋರಿದ್ದ ಅಂಶಗಳನ್ನು ಕಾನೂನು ಹಾಗೂ ವೈದ್ಯ ವಲಯದ ವ್ಯಾಪ್ತಿಯಲ್ಲೆ ನಡೆಸಲಾಗಿದೆ ಎಂದರು. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!]
ಸಾಮೀಜಿಗೆ ಇನ್ನೊಮ್ಮೆ ಪುರುಷತ್ವ ಪರೀಕ್ಷೆ ನಡೆಸುವ ಅಗತ್ಯ ಇದೆಯೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಬಗ್ಗೆ ತನಿಖಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ಪರೀಕ್ಷೆಗೆ ಸಹಕರಿಸುವಂತೆ ನಿತ್ಯಾನಂದ ಸ್ವಾಮಿಗೆ ಒತ್ತಡ ಹೇರಿಲ್ಲ. ಅಶ್ಲೀಲ ಚಿತ್ರ ತೋರಿಸಿರುವ, ಹಸ್ತಮೈಥುನ ಮಾಡಿಸಿರುವ ಅಥವಾ ಹುಡುಗಿಯರನ್ನು ಪ್ರಚೋದನೆಗೆ ಬಳಸಿಕೊಂಡಿರುವ ಆರೋಪ ಆಧಾರರಹಿತವಾಗಿದ್ದು ಎಂದು ಅವರು ಹೇಳಿದರು.
ರಾಮನಗರ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ಸೆ.8ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿತ್ತು. ಪರೀಕ್ಷೆ ವರದಿ ರಾಸಲೀಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಕೈ ಸೇರಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಅದನ್ನು ರಾಮನಗರ ಕೋರ್ಟ್ಗೆ ಸಲ್ಲಿಸುವ ಸಾಧ್ಯತೆ ಇದೆ.