'ಮೋದಿ ಮೆಚ್ಚಿದ ಯೋಗಿ' ಪುಸ್ತಕ ಬಿಡುಗಡೆ ಮಾಡಿದ ನಿರ್ಮಲಾನಂದನಾಥ ಶ್ರೀ
ಬೆಂಗಳೂರು, ಜನವರಿ 29 : ಆಧ್ಯಾತ್ಮ ಪರಂಪರೆ, ಗುರು ಪರಂಪರೆ, ಸೇವಾ ಪರಂಪರೆಯ ಜೊತೆ ಗುರುತಿಸಿಕೊಂಡಿರುವ ಸನ್ಯಾಸಿಗಳು, ಮಠಾಧೀಶರು ರಾಜಕೀಯ ರಂಗ ಪ್ರವೇಶಿಸುವುದು ಹೊಸತೇನೂ ಅಲ್ಲ. ಅದು ತಪ್ಪು ಕೂಡಾ ಅಲ್ಲ ಎಂದು ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಶಿಕ್ಷಣ ತಜ್ಞ, ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಹೆಚ್.ಎಂ. ಚಂದ್ರಶೇಖರ್ ಅವರ "ಮೋದಿ ಮೆಚ್ಚಿದ ಯೋಗಿ" ಅನುವಾದಿತ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜನ ಕಲ್ಯಾಣಕ್ಕಾಗಿ ಅಧಿಕಾರ ಹಿಡಿದವರು ಹಾಗೂ ಅಡಳಿತಗಾರರಿಗೆ ಮಾರ್ಗದರ್ಶನ ಮಾಡಿದ ಸನ್ಯಾಸಿಗಳನ್ನು ಇತಿಹಾಸ ಕಂಡಿದೆ ಎಂದರು.
ಪ್ರಸನ್ನ ಕಾರ್ತಿಕ್ ಅವರ 'Narendra Modi for 2019' ಪುಸ್ತಕ ಲೋಕಾರ್ಪಣೆ
ನಾಥ ಪಂಥದ ಗೋರಖ್ಪುರ ಮಠದ ಮಹಂತರಾದ ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಸನ್ಯಾಸಿಗಳು, ಮಠಾಧೀಶರು, ಮಹಂತರು ರಾಜಕಾರಣ ಪ್ರವೇಶಿಸುವುದು ಸರಿಯೇ ತಪ್ಪೇ ಎಂಬ ಜಿಜ್ಞಾಸೆ ಮೂಡಿದೆ. ಇದಕ್ಕೆ ಇತಿಹಾಸದಲ್ಲಿ ಉತ್ತರವಿದೆ.
14ನೇ ಶತಮಾನದ ಅದ್ವೈತ ಪಂಥದ ಯತಿಗಳಾದವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಶಿಷ್ಯರಾದ ಹಕ್ಕ ಬುಕ್ಕರನ್ನು ಪ್ರೇರೇಪಿಸಿ ರಾಜ್ಯ ಸ್ಥಾಪನೆ ಮಾಡಿಸಿದ್ದಲ್ಲದೆ ಆಡಳಿತದಲ್ಲಿ ಮಾರ್ಗದರ್ಶನ ಮಾಡುತ್ತ ರಾಜಕಾರಣ, ಧಾರ್ಮಿಕ, ಸಾಹಿತ್ಯ-ಸಂಗೀತದಲ್ಲೂ ತೊಡಗಿಸಿಕೊಂಡಿದ್ದರು.
ಯೋಗಿಯವರು ಗುರು ಪರಂಪರೆಯನ್ನು ಪಾಲಿಸುವ ನಿಟ್ಟಿನಲ್ಲೂ ರಾಜಕಾರಣ ಪ್ರವೇಶಿಸಿರಬಹುದು ಎಂದು ವ್ಯಾಖ್ಯಾನಿಸಿದರು. 20 ಕೋಟಿ ಜನಸಂಖ್ಯೆಯಿರುವ ಉತ್ತರಪ್ರದೇಶದಲ್ಲಿ ಯಶಸ್ವಿ ಆಡಳಿತ ನಡೆಸುವ ಮೂಲಕ ಸನ್ಯಾಸಿಯೊಬ್ಬರು ಛಾಪು ಮೂಡಿಸಿದ್ದಾರೆ.
ಸರಳ, ತ್ಯಾಗಮಯ ಜೀವಿಯಾದ ಅವರು ರಾಜಕೀಯ, ಆಧಿಕಾರದ ಮೂಲಕ ಸೇವೆ ಮೂಡುತ್ತಿದ್ದಾರೆ. ಯಾವುದೇ ಕರ್ಮದಿಂದ ಮಾತ್ರ ಮುಕ್ತಿ ಸಾಧ್ಯ ಎಂದು ನಂಬಿ ಜನಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ ಎಂದರು.
ಯೋಗಿ ಆದಿತ್ಯನಾಥರ ಜೀವನ ಬದುಕು ಕುರಿತ ಪುಸ್ತಕವನ್ನು ಕನ್ನಡಕ್ಕೆ ತಂದಿರುವುದು ಸಾರ್ಥಕ ಕಾರ್ಯ. ನಾಥ ಪಂಥದ ಮೂಲಸ್ಥಳ ಕನ್ನಡನಾಡು. ನಾಥ ಪರಂಪರೆಯ ಮೊದಲ ಮಠ ಅದಿಚುಂಚನಗಿರಿಯಲ್ಲಿ ಸ್ಥಾಪನೆಯಾಯಿತು.
ನಂತರ ಸ್ಥಾಪನೆಯಾದದ್ದು ಗೋರಖ್ಪುರ್ ಮಠ ಹೀಗಾಗಿ ಆದಿತ್ಯನಾಥರ ಗುರು ಪರಂಪರೆಗೆ ಕರ್ನಾಟಕವೇ ಮೂಲಸ್ಥಳ ಎಂದರು. ಪುಸ್ತಕಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇತಿಹಾಸ ಸಾಗಿಸುವ ಸಂಪರ್ಕ ಕೊಂಡಿಗಳು. ಮಾನವ ದೇಹದಲ್ಲಿ ಡಿಎನ್ಎ ಮಾಡುವ ಕೆಲಸವನ್ನು ಸಾಮಾಜಿಕವಾಗಿ ಪುಸ್ತಕಗಳು ಮಾಡುತ್ತವೆ.
ಹೀಗಾಗಿ ಪುಸ್ತಕಗಳು ಜ್ಞಾನ, ಜೀವನ ದರ್ಶನ ಮಾಡಿಸುವುದರ ಜೊತೆಗೆ ಇತಿಹಾಸವನ್ನೂ ಹಿಡಿದಿಡುತ್ತವೆ. ಅನುವಾದ ಸಾಹಿತ್ಯವೂ ಅಷ್ಟೇ ಮುಖ್ಯವಾದ್ದದ್ದು. ಅನ್ಯ ಭಾಷೆಯ ಸಾಹಿತ್ಯ ಕನ್ನಡಕ್ಕೆ ಬರದೇ ಇದ್ದಿದ್ದರೆ ನಮ್ಮ ಸಾಹಿತ್ಯ ಇಷ್ಟು ವಿಫುಲವಾಗಿ ಬೆಳೆಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಮೇಲುಕೋಟೆ ಮಠದ ಪೀಠಾಧ್ಯಕ್ಷರಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಮಾತನಾಡಿ, "ಸಂತರು ಸಹಸ್ರ ಸಹಸ್ರ ವರ್ಷಗಳಿಂದ ಮನುಕುಲದ ಉದ್ಧಾರಕ್ಕಾಗಿ ದುಡಿದಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಯೋಗಿ ಸಿಎಂ ಆಗಿರುವುದು ನಮ್ಮೆಲ್ಲ ಸಂತರಿಗೆ ಸಂಭ್ರಮ ತಂದಿದೆ ಎಂದರು.
ಕೊಳದ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಭಾರತ ಪ್ರಪಂಚದ ದೇಗುಲ. ಪವಿತ್ರ ಪುಣ್ಯಭೂಮಿಯ ಈ ಮಣ್ಣಿನಲ್ಲಿ ಎಲ್ಲ ಧರ್ಮಗಳ ಸಂಗಮವಾಗಿದೆ. ಸಾಧು ಸಂತರು ದೇಶ ಮುನ್ನೆಡೆಯಲು ಮಾರ್ಗದರ್ಶಕರ ಸ್ಥಾನದಲ್ಲಿ ಕುಳಿತಿದ್ದಾರೆ. ರಾಜಕಾರಣ, ರಾಜ್ಯಾಡಳಿತ ಆನಾದಿಕಾಲದಿಂದಲೂ ಇಲ್ಲಿ ಸಂತರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದಿದೆ. ಮನುಕುಲದ ಉದ್ಧಾರಕ್ಕೆ ಸನ್ಯಾಸಿಗಳ ಸೇವೆ ಅಪಾರ ಎಂದರು.
ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶ ಜಂಗಲ್ ರಾಜ್ ಕುಖ್ಯಾತಿಯನ್ನು ಕಳಚಿಕೊಂಡಿದೆ. ಕಾನೂನು ಗಟ್ಟಿಯಾಗಿದೆ. ಜನರ ಬದುಕುವ ಹಕ್ಕು ಮರುಸ್ಥಾಪನೆಯಾಗಿದೆ.
ಅವರು ನಮ್ಮ ನಾಡಿನ ನಾಥ ಪರಂಪರೆಯವರು ಎಂಬುದೇ ನಮ್ಮ ಪ್ರೀತಿಗೆ ಕಾರಣ ಎಂದರು. ಮಹಾಭಾರತದ ಕಾಲದಿಂದ ಹಿಡಿದು ಈಗಿನವರೆಗೆ ಸನ್ಯಾಸಿಗಳು ತೆರೆಯ ಮುಂದೆ ಹಾಗೂ ಹಿಂದೆ ರಾಜ್ಯಕಟ್ಟುವ ಆಳುವ ವಿಚಾರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ.
ಚಲನಚಿತ್ರ ನಿರ್ದೇಶಕ ನಾಗಾಭರಣ, ಮಾಜಿ ಸಚಿವ ನಾಗರಾಜಶೆಟ್ಟಿ, ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಚಿ.ನಾ. ರಾಮು, ಪರಿಷತ್ ಸದಸ್ಯ. ಅ.ದೇವೇಗೌಡ, ಮಾಜಿ ಸದಸ್ಯ ಅಶ್ವತ್ಥನಾರಾಯಣ, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್. ಸದಾಶಿವ, ಸುಬ್ಬನರಸಿಂಹ ಉಪಸ್ಥಿತರಿದ್ದರು.