ಕಾಳೇನ ಅಗ್ರಹಾರ ಕೆರೆ ಉಳಿವಿಗೆ ಟೊಂಕಕಟ್ಟಿದ ನಿರ್ಮಲಾ
ನಿರ್ಮಲಾ ಸೀತಾರಾಮನ್ ಅವರೇ, ನೀವು ವಿಷಾನಿಲ ಸೂಸುತ್ತಿರುವ ಮತ್ತು ನೊರೆಯಿಂದಾಗಿ ಇಡೀ ದೇಶದ ಗಮನ ಸೆಳೆದಿರುವ ಬೆಳ್ಳಂದೂರು ಕೆರೆಯನ್ನು ಏಕೆ ದತ್ತು ತೆಗೆದುಕೊಂಡಿಲ್ಲ? ಕಾಳೇನ ಅಗ್ರಹಾರ ಕೆರೆಯನ್ನೇಕೆ ದತ್ತು ತೆಗೆದುಕೊಂಡಿದ್ದೀರಿ?
ಬೆಂಗಳೂರು, ಏಪ್ರಿಲ್ 22 : ಬನ್ನೇರುಘಟ್ಟದ ಬಳಿಯಿರುವ ಕಾಳೇನ ಅಗ್ರಹಾರ ಕೆರೆಯನ್ನು ಪುನರುಜ್ಜೀವನಗೊಳಿಸಲು, ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕೆರೆಯನ್ನು ದತ್ತು ತೆಗೆದುಕೊಂಡಿದ್ದಾರೆ.
ವಾಣಿಜ್ಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು, ಶನಿವಾರ ಬೆಳಿಗ್ಗೆ ಕೆರೆಗೆ ಭೇಟಿ ನೀಡಿ, ಅಲ್ಲಿನ ಕಾರ್ಪೊರೇಟರ್, ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳನ್ನು ಭೇಟಿ ಮಾಡಿ ಕೆರೆಗೆ ಹೇಗೆ ಮರುಜೀವ ನೀಡಬೇಕು ಎಂಬ ಕುರಿತು ಚರ್ಚಿಸಿದರು.
ಶಾಸಕ ಕೃಷ್ಣಪ್ಪ ಅವರು ನಿರ್ಮಲಾ ಸೀತಾರಾಮನ್ ಅವರ ಜೊತೆಗಿದ್ದರು. ಒಂದಾನೊಂದು ಕಾಲದಲ್ಲಿ ಏಳು ಎಕರೆಯಷ್ಟು ವಿಸ್ತರಿಸಿಕೊಂಡಿದ್ದ ಬೃಹತ್ ಕೆರೆ, ಅಕ್ರಮ ಒತ್ತುವರಿಯಿಂದಾಗಿ ಅದರ ಅರ್ಧದಷ್ಟು ಇಳಿದಿದೆ. ಈ ಕುರಿತು ಅವರು ಮಾತುಕತೆ ನಡೆಸಿದರು. [ಪುಟ್ಟೇನಹಳ್ಳಿ ಕೆರೆಯಂಗಳದಲ್ಲಿ ಸಾರ್ಥಕ ಕೆಲಸ ಮಾಡಿದ ಎಂಪ್ರಿ]
ಶಾಸಕ, ನಗರಸಭಾ ಸದಸ್ಯ, ಅಧಿಕಾರಿಗಳಿಗೆ ಧನ್ಯವಾದ ಹೇಳುವ ಮೊದಲು ಅವರು ಕೆರೆಯ ಬಗ್ಗೆ ಕಾಳಜಿಯಿಂದ ಅಲ್ಲಿ ನೆರೆದಿದ್ದ ಸ್ಥಳೀಯರನ್ನು ಶ್ಲಾಘಿಸಿದರು. ಕೆರೆ ಪುನರುಜ್ಜೀವನದ ಪ್ರತಿ ಹಂತದಲ್ಲಿ ನಿವಾಸಿಗಳ ಸಹಕಾರದ ಅಗತ್ಯವಿದೆ ಎಂದು ಒತ್ತಿ ಹೇಳಿದರು. [ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಎನ್ ಜಿಟಿಯಿಂದ ರಾಜ್ಯ ಸರಕಾರದ ತರಾಟೆ]
ಕೊಳಚೆ ನೀರು ಹರಿದುಬಂದು ಕೆರೆ ಸೇರುತ್ತಿದೆ
ಕೆರೆಯ ಉಳಿವಿಗಾಗಿ ಕೂಗು ಎದ್ದಿರುವುದು ಇಂದು ನಿನ್ನೆಯದಲ್ಲ. ದಶಕದಿಂದ ಕೆರೆಗಾಗಿ ಹೋರಾಟ ನಡೆಯುತ್ತಲೇ ಇದೆ. ಕೆರೆಯಲ್ಲಿ ಹೂಳು ತುಂಬಿದ್ದಲ್ಲದೆ, ಸುತ್ತಲಿನ ಅಪಾರ್ಟ್ಮೆಂಟುಗಳಿಂದ ಕೊಳಚೆ ನೀರು ಹರಿದುಬಂದು ಕೆರೆಯನ್ನು ಸೇರಿ ವಿಷಯುಕ್ತಗೊಳಿಸುತ್ತಿದೆ.
ಇಲ್ಲದಿದ್ದರೆ ಸತ್ತು ಸ್ವರ್ಗ ಸೇರಿರುತ್ತಿತ್ತು
ಜನರ ಕೂಗಿಗೆ ಯಾವುದೇ ಪ್ರತಿಸ್ಪಂದನೆ ಜನಪ್ರತಿನಿಧಿಗಳಿಂದ ಬಾರದಿದ್ದಾಗ, ರೊಚ್ಚಿಗೆದ್ದ ಸುತ್ತಲಿನ ನಿವಾಸಿಗಳು ಸ್ವತಃ ಸಂಘ ಕಟ್ಟಿಕೊಂಡು, ತಾವೇ ಹಣವನ್ನು ಸಂಗ್ರಹಿಸಿ ಕೆರೆ ಇನ್ನೂ ಉಸಿರಾಡುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಪ್ರಯತ್ನದಿಂದಾಗಿ ಕೆರೆ ಇನ್ನೂ ಜೀವಂತವಾಗಿದೆ. ಇಲ್ಲದಿದ್ದರೆ ಸತ್ತು ಸ್ವರ್ಗ ಸೇರಿರುತ್ತಿತ್ತು.
ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ
ಹೋರಾಟಗಾರರು ಕೆರೆಯನ್ನು ಸ್ವಚ್ಛಗೊಳಿಸುತ್ತ ಉಸಿರಾಡುವಂತಾಗಲು ಶ್ರಮಿಸುತ್ತಿದ್ದರೆ ಇನ್ನೂ ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ. ಅದರಲ್ಲಿ ಪ್ರಮುಖವಾದುದು, ಕೆರೆಯ ಒತ್ತುವರಿ. ಪ್ರಭಾವಿ ವ್ಯಕ್ತಿಗಳು ಅಲ್ಲಿ ಕಸತಂದು ಬಿಸಾಕುತ್ತಿದ್ದು, ಒಂದು ದಿನ ಅಲ್ಲಿ ವಾಣಿಜ್ಯ ಕಟ್ಟಡಗಳು, ಮತ್ತೊಂದಿಷ್ಟು ಅಪಾರ್ಟ್ಮೆಂಟ್ ನಿರ್ಮಾಣವಾದಲ್ಲಿ ಅಚ್ಚರಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಕೆರೆ ಮತ್ತೆ ತನ್ನ ಮೂಲಸ್ವರೂಪಕ್ಕೆ ಮರಳುತ್ತದೆ
ಈಗ ಕೇಂದ್ರ ಸಚಿವೆಯೇ ಕೆರೆಯ ಉಳಿವಿಗೆ, ಅದರ ಪುನರುಜ್ಜೀವನಕ್ಕೆ ಆಸಕ್ತಿ ತಳೆದಿರುವುದರಿಂದ ಕೆರೆ ಮತ್ತೆ ತನ್ನ ಮೂಲಸ್ವರೂಪಕ್ಕೆ ಮರಳುತ್ತದೆ, ಅಂತರ್ಜಲ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಸ್ಥಳೀಯರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಬೆಳ್ಳಂದೂರು ಕೆರೆಯನ್ನು ಏಕೆ ದತ್ತು ತೆಗೆದುಕೊಂಡಿಲ್ಲ?
ಟ್ವಿಟ್ಟಗರೊಬ್ಬರು, ನಿರ್ಮಲಾ ಸೀತಾರಾಮನ್ ಅವರೇ, ನೀವು ವಿಷಾನಿಲ ಸೂಸುತ್ತಿರುವ ಮತ್ತು ನೊರೆಯಿಂದಾಗಿ ಇಡೀ ದೇಶದ ಗಮನ ಸೆಳೆದಿರುವ ಬೆಳ್ಳಂದೂರು ಕೆರೆಯನ್ನು ಏಕೆ ದತ್ತು ತೆಗೆದುಕೊಂಡಿಲ್ಲ? ಕಾಳೇನ ಅಗ್ರಹಾರ ಕೆರೆಯನ್ನೇಕೆ ದತ್ತು ತೆಗೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೇಂದ್ರ ಸಚಿವೆ ಉತ್ತರಿಸುವರೆ?