ನಿರ್ಭಯಾ ನಿಧಿ ಟೆಂಡರ್ ಅಕ್ರಮ: ಐಪಿಎಸ್ ಅಧಿಕಾರಿಗಳ ನಡುವೆ ಡಿಶುಂ ಡಿಶುಂ !
ಬೆಂಗಳೂರು, ಡಿಸೆಂಬರ್ 26: ಜೈಲು ಅಕ್ರಮ ಕುರಿತು ಸಮರ ಸಾರಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಐಪಿಎಸ್ ಅಧಿಕಾರಿ ಡಿ. ರೂಪಾ ಇದೀಗ ನಿರ್ಭಯ ನಿಧಿ ಮಹಿಳಾ ಸುರಕ್ಷತಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಕೈ ಹಾಕಿದ್ದಾರೆ. ಇದು ಇಬ್ಬರು ಐಪಿಎಸ್ ಅಧಿಕಾರಿಗಳ ನಡುವೆ ಸಮರಕ್ಕೆ ನಾಂದಿ ಹಾಡಿದೆ.
ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ನಡುವಿನ ಪತ್ರ ಸಮರ ಇದೀಗ ತನಿಖೆಗೆ ನಾಂದಿ ಹಾಡಿದೆ. ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟದ ನಡುವೆಯೇ ಟೆಂಡರ್ ಪ್ರಕ್ರಿಯೆಯ ಅಕ್ರಮ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಬೆಚ್ಚಿ ಬೀಳಿಸುವಂತಿವೆ ಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವರದಿ!
ನಿರ್ಭಯ ನಿಧಿ ಮಹಿಳಾ ಸುರಕ್ಷತಾ ಯೋಜನೆ ಅಡಿ ಟೆಂಡರ್ ಪಡೆದಿದ್ದ ದೆಹಲಿ ಮೂಲದ ಕಂಪನಿಗೆ ಗೃಹ ಇಲಾಖೆ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿ ದಾಖಲೆಗಳನ್ನು ಕೇಳಲಾಗಿತ್ತು. ದೆಹಲಿ ಮೂಲದ ಕಂಪನಿಗೆ ಕರೆ ಮಾಡಿ ಟೆಂಡರ್ ಗೆ ಸಂಬಂಧಿಸಿದ ದಾಖಲೆಗಳನ್ನು ಗೃಹ ಇಲಾಖೆ ಕಾರ್ಯದರ್ಶಿ ಮಹಿಳೆ ಹೆಸರಿನಲ್ಲಿ ಏಕೆ ಕರೆ ಮಾಡಬೇಕು ? ಇದರಲ್ಲಿ ಉತ್ಸಾಹಕತೆ ತೋರುತ್ತಿರುವುದು ಏಕೆ ? ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿ. ರೂಪಾ ಅವರು, ನಿಯಮ ಉಲ್ಲಂಘಿಸಿ ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಅನರ್ಹ ಕಂಪನಿಗೆ ಟೆಂಡರ್ ನೀಡಲಾಗಿದೆ. ಹತ್ತು ಕೋಟಿಗಿಂತಲೂ ಹೆಚ್ಚಿನ ಮೊತ್ತದ ಟೆಂಡರ್ ನೀಡುವ ಮೊದಲು ಸಂಪುಟದ ಅನುಮೋದನೆ ಪಡೆಯಬೇಕು ಎಂದು ರೂಪಾ ಆರೋಪಿಸಿದ್ದಾರೆ. ಇದು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದೆ.
ನಿರ್ಭಯ ನಿಧಿ ಮಹಿಳಾ ಸುರಕ್ಷತಾ ಯೋಜನೆ ಟೆಂಡರ್ ನಲ್ಲಿ ಅಕ್ರಮ ಕುರಿತು ತನಿಖೆ ನಡೆಸಿ ಒಳಾಡಳಿತ ಇಲಾಖೆಗೆ ವರದಿ ನೀಡುವಂತೆ ಸೂಚಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯೆದರ್ಶಿ ವಿಜಯ ಭಾಸ್ಕರ್ ಆದೇಶಿಸಿದ್ದಾರೆ.
ಐಪಿಎಸ್ ರೂಪಾ ಭಾವಚಿತ್ರ ಬಳಸಿ ಅಸ್ಸಾಂನಲ್ಲಿ ಚಂದಾ ವಸೂಲಿ !
ಮೋದಿಗೆ ದೂರು: ನಿರ್ಭಯ ನಿಧಿ ಮಹಿಳಾ ಸುರಕ್ಷತೆ ಯೋಜನೆಯಡಿ ಕೇಂದ್ರ ಸರ್ಕಾರ 700 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ 367 ಕೋಟಿ ರೂ. ನೀಡಿತ್ತು. ಈ ಯೋಜನೆಯಡಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಸೇರಿದಂತೆ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಲು ಈ ನಿಧಿ ಬಳಸಲು ಅವಕಾಶ ನೀಡಲಾಗಿತ್ತು. ಆದರೆ, ಈ ಕುರಿತು ಕರೆದಿರುವ ಟೆಂಡರ್ ಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಪ್ರಧಾನಿ ಕಚೇರಿಗೆ ದೂರು ನೀಡಿತ್ತು. ನಿರ್ಭಯ ನಿಧಿ ದುರ್ಬಳಕೆ ಕುರಿತು ಗೃಹ ಇಲಾಖೆ ತನಿಖೆ ನಡೆಸಿತ್ತು. ಇದೇ ವಿಚಾರವಾಗಿ ಭ್ರಷ್ಟಾಚಾರ ವಿರೋಧಿ ಸಂಘದ ಮುಖ್ಯಸ್ಥರು ನೀಡಿದ್ದ ದೂರಿನ ಮೇರೆಗೆ ಡಿ. ರೂಪಾ ಅವರು ದೆಹಲಿ ಮೂಲದ ಕಂಪನಿಗೆ ಕರೆ ಮಾಡಿ ಪ್ರಶ್ನಿಸಿದ್ದರು ಎನ್ನಲಾಗಿದೆ. ನಿರ್ಭಯ ನಿಧಿ ಸುರಕ್ಷತಾ ಯೋಜನೆ ಯಡಿ ಬೆಂಗಳೂರು ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಬಿಇಎಲ್, ಎಲ್ ಅಂಡ್ ಟಿ, ಮ್ಯಾಟ್ರಿಕ್ಸ್ ಸೆಕ್ಯುರಿಟಿ, ಸರ್ವಲೆನ್ಸ್ ಸೆಕ್ಯುರಿಟಿ ಕಂಪನಿಗಳು ಭಾಗವಹಿಸಿದ್ದವು. ಈ ಟೆಂಡರ್ ನಲ್ಲಿ ಒಳ ಒಪ್ಪಂದ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಬಿಇಎಲ್ ಪ್ರಧಾನಿ ಕಚೇರಿಗೆ ಬರೆದ ದೂರಿನಲ್ಲಿ ಉಲ್ಲೇಖಿಸಿತ್ತು.
ನಿಂಬಾಳ್ಕರ್ ಗೆ ಸಮಸ್ಯೆ: ಐಎಂಎ ವಂಚನೆ ಪ್ರಕರಣದಲ್ಲಿ ಕಂಪನಿ ಪರ ವರದಿ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇದೀಗ ಟೆಂಡರ್ ಅಕ್ರಮದ ಬಗ್ಗೆ ಪ್ರಶ್ನಿಸಿದ ರೂಪಾ ಅವರನ್ನು ಕೆಣಿಕಿ ತನಿಖೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಿರ್ಭಯ ನಿಧಿ ಬಳಕೆ ಸಂಬಂಧ ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಸಾಧ್ಯತೆಯಿದೆ.
Recommended Video
ಜೈಲು ಅಕ್ರಮವನ್ನು ಬಯಲಿಗೆ ಎಳೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಡಿ. ರೂಪಾ ಅವರು ನಿರ್ಭಯದ ನಿಧಿಗೆ ಕೈ ಹಾಕಿದ್ದಾರೆ. ಯೋಜನೆಯಲ್ಲಿ ಭ್ರಷ್ಟಾಚಾರ ಆಗಬಾರದು ಎಂಬ ಕಾರಣಕ್ಕೆ ಪ್ರಶ್ನಿಸಿದ್ದೇನೆ. ಇದು ತಪ್ಪಾ ? ಈ ಯೋಜನೆಯ ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ಈ ಹುದ್ದೆಯಿಂದ ತೆಗೆಯಬೇಕು ಹಾಗೂ ಟೆಂಡರ್ ಪಡೆದಿರುವ ಐ ಎಂಡ್ ವೈ ಕಂಪನಿಯನ್ನು ಈ ಪ್ರಕ್ರಿಯಿಂದ ಹೊರಗಿಡಬೇಕು ಎಂದು ರೂಪಾ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.