ನಿಪಾಹ್ ಭೀತಿ: ಹಂದಿಗಳ ಸೆರೆಗೆ ಮುಂದಾದ ಬಿಬಿಎಂಪಿ
ಬೆಂಗಳೂರು, ಜೂನ್ 10: ನಿಪಾಹ್ ವೈರಸ್ ಭೀತಿಯಿಂದ ನಗರದಲ್ಲಿರುವ ಹಂದಿಗಳ ಸೆರೆಗೆ ಬಿಬಿಎಂಪಿ ಮುಂದಾಗಿದೆ.
ಕೇರಳದಲ್ಲಿ ನಿಪಾಹ್ ವೈರಸ್ನಿಂದ 15 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ರಸ್ತೆಗಳೆಲ್ಲಡೆ ಓಡಾಡುವ ಹಂದಿಗಳಿಂದಲೂ ನಿಪಾಹ್ ಬರಬಹುದು ಎಂದು ಹಂದಿಗಳ ಸೆರೆಗೆ ಬಿಬಿಎಂಪಿ ಮುಂದಾಗಿದೆ.ನಗರದ ಹೊರ ವಲಯದ ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿ, ಹೆಸರಘಟ್ಟ, ಕೆಂಗೇರಿ, ಸುಂಕದಕಟ್ಟೆ, ಪೀಣ್ಯದಲ್ಲಿ ಅಕ್ರಮವಾಗಿ ಹಂದಿಗಳ ಸಾಕಾಣಿಕೆ ನಡೆಯುತ್ತಿದೆ.
ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?
ಹಾಗೆಯೇ ತಳಿ ಸಂವರ್ಧನೆ ಮಾಡುತ್ತಿರುವ ಬಗ್ಗೆಯೂ ಸ್ಥಳೀಯರು ಪಾಲಿಕೆ ದೂರು ನೀಡಿದ್ದಾರೆ. ಬಾವಲಿಗಳು ತಿಂದುಬಿಟ್ಟ ಆಹಾರವು ಹಂದಿಗಳ ಹೊಟ್ಟೆ ಸೇರುವುದರಿಂದ ನಿಪಾಹ್ ಸೋಂಕು ಹರಡುವ ಸಾಧ್ಯತೆ ಇದೆ. ಹಂದಿಗಳ ಸೆರೆಗೆ ಏಪ್ರಿಲ್ನಲ್ಲೇ ಟೆಂಡರ್ ಕರೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.
ಹಂದಿಗಳ ಸೆರೆಗೆ ಕರೆದಿದ್ದ ಟೆಂಡರ್ನಲ್ಲಿ ಮೂವರು ಗುತ್ತಿಗೆದಾರರು ಭಾಗವಹಿಸಿದ್ದರು, ಹಂದಿಗಳನ್ನು ಸೆರೆ ಹಿಡಿಯುವ ಗುತ್ತಿಗೆದಾರರಿಗೆ ತೂಕದ ಆಧಾರದ ಮೇಲೆ ಬಿಲ್ ಪಾವತಿ ಮಾಡಲಾಗುತ್ತದೆ. ಪ್ರತಿ ಕೆಜಿ 70 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಸೆರೆ ಹಿಡಿಯಲಾಗುವ ಹಂದಿಗಳನ್ನು ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ಪಶುಪಾಲನೆ ಇಲಾಖೆ ಜಂಟಿ ನಿರ್ದೇಶಕ ಡಾ. ಜಿ. ಆನಂದ್ ಹೇಳಿದ್ದಾರೆ.