ನಿಖಿಲ್ ಕುಮಾರಸ್ವಾಮಿಗೆ ಸೋಲಿಗಿಂತಲೂ ತುಂಬಾ ನೋವು ಕೊಟ್ಟ ಸಂಗತಿ ಇದು
ಬೆಂಗಳೂರು, ಜುಲೈ 4: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಇಳಿದಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಮಂಡ್ಯ ಕ್ಷೇತ್ರದಲ್ಲಿ ಓಡಾಡುವ ಮೂಲಕ ಪಕ್ಷ ಸಂಘಟನೆಯ ಕೆಲಸದಲ್ಲಿ ಕಾಣಿಸಿಕೊಂಡಿದ್ದ ನಿಖಿಲ್, ಅವರಿಗೆ ಅವರ ತಾತ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರಮುಖ ಜವಾಬ್ದಾರಿ ವಹಿಸಿದ್ದಾರೆ.
ವಿರೋಧದ ನಡುವೆಯೂ ಯುವ ಘಟಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಿಖಿಲ್
ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯಲು ಸಮರ್ಥನಿದ್ದೇನೆ ಎಂಬ ಭಾವನೆಯೊಂದಿಗೆ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಆದರೆ ಇಂದಿಗೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ನನಗೆ ಈ ಸ್ಥಾನಮಾನ ಮುಖ್ಯವಾಗುವುದಿಲ್ಲ. ಮಧು ಬಂಗಾರಪ್ಪ ಅವರು ಹಲವು ವರ್ಷದಿಂದ ಈ ಸ್ಥಾನವನ್ನು ಸಂಪೂರ್ಣವಾಗಿ ತುಂಬಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸ ಕಾರ್ಯಗಳನ್ನು ಉಳಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಹುದ್ದೆ ನಿರೀಕ್ಷೆ ಮಾಡಿರಲಿಲ್ಲ
ಬೆಳಿಗ್ಗೆ 11 ಗಂಟೆಗೆ ಪಕ್ಷದ ವರಿಷ್ಠರಿಂದ ಕರೆ ಬಂತು. ನನಗೆ ಈ ಸ್ಥಾನ ದೊರಕುತ್ತದೆ ಎಂದು ನಿಜಕ್ಕೂ ನಿರೀಕ್ಷೆಯಿರಲಿಲ್ಲ. ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಹೆಚ್ಚಿನ ಶ್ರಮ ವಹಿಸಿ ದುಡಿದ ನಂತರ ಈ ಸ್ಥಾನ ಸ್ವೀಕಾರ ಮಾಡಿದ್ದರೆ ಇನ್ನೂ ಖುಷಿ ಸಿಗುತ್ತಿತ್ತು. ಮಧು ಅಣ್ಣ ಅವರು ಹಲವು ವರ್ಷದಿಂದ ಈ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ನಿನ್ನೆ ಪಕ್ಷದ ವರಿಷ್ಠರು ಶರಣ್ ಗೌಡ ಅವರನ್ನು ಮನೆಗೆ ಕರೆದು ಈ ಸ್ಥಾನ ಸ್ವೀಕಾರ ಮಾಡಬೇಕು ಎಂದು ಹೇಳಿದಾಗ ಅವರು ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದು ನಿಖಿಲ್ ಹೇಳಿದರು.
ಜೆಡಿಎಸ್ಗೆ ಹೊಸ ಅಧ್ಯಕ್ಷರ ನೇಮಕ : ಪಣ ತೊಟ್ಟಂತೆ ಮಾಡಿದ ದೇವೇಗೌಡ!
ಪಕ್ಷ ಉಳಿದಿರುವುದು ದೇವೇಗೌಡರಿಂದ
ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹುಡುಗ ಮುಂದಾಗುತ್ತಾನೆ ಎಂಬ ಭರವಸೆ ಇಟ್ಟು ಪಕ್ಷ ತೀರ್ಮಾನ ತೆಗೆದುಕೊಂಡಿದೆ. ಅತ್ಯಂತ ಜವಾಬ್ದಾರಿಯುತ ಸ್ಥಾನ ಇದು ಎಂದು ನನಗೆ ಗೊತ್ತಿದೆ. ಇಂದಿಗೂ ಪಕ್ಷ ಉಳಿದಿರುವುದು ದೇವೇಗೌಡ ಸಾಹೇಬರ ಶ್ರಮ ಏನಿದೆ ಅದರಿಂದ ಮಾತ್ರ. ಸಂಘಟನೆ ಮಾಡುವ ವಿಚಾರದಲ್ಲಿ ನಿರಂತರವಾಗಿ ಅವರ ದುಡಿಮೆಯನ್ನು ಮಾಡಿದ್ದರು. ಇಂದು ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಅದೇ ಹಾದಿಯಲ್ಲಿ ನಾನೂ ಹೆಜ್ಜೆ ಹಾಕಬೇಕು ಎಂಬ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.
ಮತ ಹಾಕದವರ ಮನಗೆಲ್ಲುವ ಪ್ರಯತ್ನ
ಮಂಡ್ಯ ಚುನಾವಣಾ ಫಲಿತಾಂಶ ಬಂದ ಬಳಿಕ ಪತ್ರಿಕಾಗೋಷ್ಠಿ ಮಾಡಿರಲಿಲ್ಲ. ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದೆ. ನನ್ನ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಐದೂ ಮುಕ್ಕಾಲು ಲಕ್ಷ ಜನರು ನಿಖಿಲ್ ಕುಮಾರಸ್ವಾಮಿ ಅಥವಾ ಜನತಾದಳದ ಪರವಾಗಿ ಮತ ಹಾಕಿದ್ದೀರಿ. ಇದು ತಮಾಷೆಯ ಸಂಗತಿ ಅಲ್ಲ. ಐದೂ ಮುಕ್ಕಾಲು ಲಕ್ಷ ಜನ ನನ್ನ ಪರವಾಗಿದ್ದಾರೆ. ನನ್ನ ವಿರುದ್ಧ ಮತಹಾಕಿದವರ ಮನ ಗೆಲ್ಲಲು ಮುಂದಿನ ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜೆಡಿಎಸ್ ರಾಧ್ಯಾಕ್ಷರಾಗಿ ದೇವೇಗೌಡ ಆಪ್ತ ಎಚ್.ಕೆ.ಕುಮಾರಸ್ವಾಮಿ ನೇಮಕ
ನೋವುಂಟು ಮಾಡಿದ ಸಂಗತಿ
ಮಂಡ್ಯದಲ್ಲಿ ಸೋಲಿನ ವಿಚಾರ ನನಗೆ ನೋವು ನೀಡಲಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಗಾಳಿಸುದ್ದಿಯನ್ನು ನಂಬಿ, 'ನನ್ನನ್ನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲಿಸಿ ಜೀವನ ಹಾಳು ಮಾಡಿದ್ದೀರಿ' ಎಂದು ನನ್ನ ಪಾಲಿನ ದೇವರ ಎದುರು ಸಿಟ್ಟು ತೋರಿಸಿಕೊಂಡಿದ್ದಾಗಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದು ನನ್ನ ಮನಸಿಗೆ ತುಂಬಾ ನೋವು ಉಂಟುಮಾಡಿದ ಸಂಗತಿ. ಸೋಲು ಗೆಲುವು ಸಾಮಾನ್ಯ. ಒಳ್ಳೆಯ ಮನೋಭಾವದಿಂದ ಸ್ವಾಗತಿಸಬೇಜು. ನಾನು ಕೂಡ ಹಾಗೆ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಮಗನಾಗಿ ನನಗೆ ತುಂಬಾ ಜವಾಬ್ದಾರಿ ಇದೆ ಎಂದು ಸ್ಪಷ್ಟನೆ ನೀಡಿದರು.