ತಾಜ್ವೆಸ್ಟೆಂಡ್ನಲ್ಲಿ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ
Recommended Video
ಬೆಂಗಳೂರು, ಫೆ. 09: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಮನೆಯಲ್ಲೀಗ ಮದುವೆ ಸಂಭ್ರಮ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ಸೋಮವಾರ (ಫೆ.10) ಬೆಳಗ್ಗೆ ನಡೆಯಲಿದೆ. ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಆಹ್ವಾನ ಕೊಟ್ಟಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ನಾಡಿನ ಪ್ರಮುಖ ರಾಜಕಾರಾಣಿಗಳು, ಮಠಾಧೀಶರು ಹಾಗೂ ಗಣ್ಯರು ಭಾಗವಹಿಸುವ ನಿರೀಕ್ಷಯಿದೆ. ಈಗಾಗಲೇ ಮಾಜಿ ಸಿಎಂ ಎಚ್ಡಿಕೆ ಅವರು, ಖುದ್ದು ಭೇಟಿಯಾಗಿ, ದೂರವಾಣಿ ಮೂಲಕ ಎಲ್ಲ ಗಣ್ಯರಿಗೆ ಆಹ್ವಾನ ಕೊಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರೂ ಸೇರಿದಂತೆ, ಆಪ್ತ ಬಳಗ ಸಮಾರಂಭದಲ್ಲಿ ಭಾಗವಹಿಸಲಿದೆ.
ರಾಮನಗರದ ಋಣ ನನ್ನ ಮೇಲಿದೆ, ಇಲ್ಲೇ ಮದುವೆ ಮಾಡ್ತೀನಿ ಎಂದ ಎಚ್ ಡಿಕೆ
ನಾಳೆ ನಡೆಯುವ ನಿಶ್ಚಿತಾರ್ಥಕ್ಕೆ ಎಲ್ಲ ರೀತಿಯ ಸಿದ್ಧತೆಗಳು ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಆಗಿದ್ದು, ಪಕ್ಷದ ಕಾರ್ಯಕರ್ತರು, ಆಪ್ತರು ಸೇರಿದಂತೆ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯಿದೆ.
ಹೋಟೆಲ್ ತಾಜ್ವೆಸ್ಟೆಂಡ್ನಲ್ಲಿ ನಡೆಯಲಿದೆ ನಿಶ್ಚಿತಾರ್ಥ
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಪಂಚತಾರಾ ಹೋಟೆಲ್ ತಾಜ್ವೆಸ್ಟೆಂಡ್ನಲ್ಲಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಬೆಂಗಳೂರಿನ ವಿಜಯನಗರ ಶಾಸಕ, ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಅಣ್ಣನ ಪುತ್ರಿ ರೇವತಿ ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ನಿಶ್ಚಯವಾಗಿದೆ. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಆಯ್ದ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕಾರ್ಯಕ್ರಮ ಮುಂದುವರೆಯಲಿದ್ದು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷಾತೀತವಾಗಿ ಎಲ್ಲ ನಾಯಕರಿಗೆ ಎಚ್ಡಿಕೆ ಆಹ್ವಾನ
ನಿಖಿಲ್ ಕುಮಾರಸ್ವಾಮಿ-ರೇವತಿ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಡಾ. ಪರಮೇಶ್ವರ್ ಸೇರಿದಂತೆ ಎಲ್ಲ ನಾಯಕರಿಗೆ ಎಚ್ಡಿಕೆ ಆಹ್ವಾನ ಕೊಟ್ಟಿದ್ದಾರೆ.
'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಎಲ್ಲಾ ಪಕ್ಷಗಳ ನಾಯಕರು, ಶಾಸಕರು, ಸಿನಿಮಾ ನಟ-ನಟಿಯರು ನಿಶ್ಚಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರೇ ಸ್ವತಃ ಎಲ್ಲರಿಗೂ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರಂತೆ.
ಏಪ್ರಿಲ್ 17ರಂದು ನಿಖಿಲ್-ರೇವತಿ ವಿವಾಹ?
ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚಿಂತನೆ ನಡೆಸಿದೆ ಎಂಬ ಮಾಹಿತಿಯಿದೆ. ರಾಮನಗರ-ಚನ್ನಪಟ್ಟಣದ ಮಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದು, ಆ ಕುರಿತು ಶೀಘ್ರದಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂಬ ಮಾಹಿತಿಯಿದೆ.
ಅದ್ಧೂರಿಯಾಗಿ ಪುತ್ರನ ವಿವಾಹ ಮಾಡಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯನ್ನು ಮತ್ತಷ್ಟು ಭದ್ರಪಡಿಸುವುದು, ಜೊತೆಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೆಲ್ಲರೂ ನಿಖಿಲ್ ಅವರ ವಿವಾಹದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮದುವೆ ಸ್ಥಳವನ್ನು ಎಚ್ಡಿಕೆ ಗುರುತಿಸಿದ್ದಾರೆ ಎಂಬ ಮಾಹಿತಿಯಿದೆ.
ನಾಳೆ ನಾಲ್ಕೈದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ
ನಟ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಗಣ್ಯರು, ಹೊರ ರಾಜ್ಯಗಳ ಗಣ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೂ ಆಹ್ವಾನ ಕೊಡಲಾಗಿದೆ. ಹೀಗಾಗಿ ಎಲ್ಲರಿಗೂ ಭೋಜನ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಎರಡೂ ಕುಟುಂಬಗಳು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬಗಳಾಗಿವೆ. ಹೀಗಾಗಿ ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಹಿಂದೆ ಮುರಿದು ಬಿದ್ದಿದ್ದ ಬೇರೆ ನಿಶ್ಚಿತಾರ್ಥ
ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರಿಗೆ ನಿಶ್ಚಿತಾರ್ಥವಾಗಿ ಅದು ಮುರಿದು ಬಿದ್ದಿತ್ತು. ನಿರ್ಮಾಪಕ ಕೆ.ಸಿ.ಎನ್. ಮೋಹನ್ ಅವರ ಪುತ್ರಿಯೊಂದಿಗೆ ನಡೆದಿದ್ದ ನಿಶ್ಚಿತಾರ್ಥ ಕಾರಣಾಂತರಗಳಿಂದ ಮುರಿದು ಬಿದ್ದತ್ತು. ನಂತರ ಆಂಧ್ರಪ್ರದೇಶದ ಪ್ರಖ್ಯಾತ ಉದ್ಯಮಿಯೊಬ್ಬರ ಪುತ್ರಿಯೊಂದಿಗೆ ವಿವಾಹ ನಡೆಯಲಿದೆ ಎಂದು ಸುದ್ದಿ ಹರಡಿತ್ತು. ಬಳಿಕ ಇದೀಗ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ರೇವತಿ ಅವರೊಂದಿಗೆ ನಡೆಯುತ್ತಿದೆ.