ನೈಜೀರಿಯಾ ಸಹೋದರರಿಗೆ ಮರುಹುಟ್ಟು ನೀಡಿದ ನಾರಾಯಣ ಹೆಲ್ತ್ ಸಿಟಿ
ಬೆಂಗಳೂರು, ಜೂನ್ 19: ವಿಶ್ವ ರಕ್ತಹೀನತೆ ದಿನ ಸಮೀಪಿಸುತ್ತಿರುವಂತೆಯೇ, ಸೊನಾಯೆ ಮತ್ತು ಜ್ಯೂಡ್ ಅವರ ಪೋಷಕರು ನಿರಾಳವಾಗಿದ್ದಾರೆ. ಕಾರಣ ಇಷ್ಟೇ; ಅವರ ಮಕ್ಕಳು ಮಾರಕ ಹಾಗೂ ಜೀವಾಪಾಯದ ತೀರಾ ಸಂಕೀರ್ಣ ರಕ್ತಹೀನತೆ (ಸಿಕಲ್ ಸೆಲ್ ಡಿಸೀಸ್) ರೋಗದಿಂದ ಮುಕ್ತರಾಗಿದ್ದಾರೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಅಸ್ಥಿಮಜ್ಜೆ ಕಸಿ ವಿಧಾನದ ಮೂಲಕ ಈ ಮಕ್ಕಳಿಗೆ ಮರುಹುಟ್ಟು ದೊರಕಿದೆ.
ಸಿಕಲ್ ಸೆಲ್ ಎನ್ನುವುದು ರಕ್ತಹೀನತೆಯ ವಂಶಪಾರಂಪರ್ಯ ಕಾಯಿಲೆಯಾಗಿದ್ದು, ಇದರಲ್ಲಿ ಕೆಂಪುರಕ್ತ ಕಣಗಳು ವಿರೂಪಗೊಳ್ಳುತ್ತವೆ ಹಾಗೂ ದೇಹಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಇವು ಒಯ್ಯುವುದಿಲ್ಲ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ, ಇದು ಸಂಕೀರ್ಣ ಆರೋಗ್ಯ ಸಮಸ್ಯೆಗಳಾದ ಪಾಶ್ರ್ವವಾಯು, ಅಂಧತ್ವ, ಪದೇ ಪದೇ ಅಸಾಧ್ಯ ನೋವು ಮತ್ತು ಅಂಗಾಂಗ ಹಾನಿಗೂ ಕಾರಣವಾಗುತ್ತವೆ.
ಸೊನಾಯೆ ದಂಪತಿಯ ಮಕ್ಕಳಾದ ಏಳು ವರ್ಷದ ಸೊನಾಯೆ ಮತ್ತು ಮೂರು ವರ್ಷದ ಜ್ಯೂಡ್ ಎಂಬ ಮಕ್ಕಳಿಗೆ ಈ ಮಾರಕ ಸಿಕೆಲ್ ಸೆಲ್ ಡಿಸೀಸ್ ಪತ್ತೆಯಾಗುವವರೆಗೂ ಅವರು ಸಹಜ ಬಾಲ್ಯವನ್ನು ಆಸ್ವಾದಿಸುತ್ತಿದ್ದರು. ಈ ಮಾರಕ ರೋಗ ಪತ್ತೆಯಾದ ಬಳಿಕ ಅವರಿಗೆ ಚಿಕಿತ್ಸೆ ಆರಂಭಿಸಲಾಯಿತು. ಆದಾಗ್ಯೂ ಅದು ಅವರಿಗೆ ಯಾವುದೇ ರೀತಿಯಲ್ಲಿ ನೆರವಾಗಲಿಲ್ಲ. ದೊಡ್ಡ ಮಗುವಿಗೆ ರಕ್ತಹೀನತೆಯ ಸಂಕೀರ್ಣ ಸ್ಥಿತಿ ಕಾಣಿಸಿಕೊಂಡಿತು. ಈ ಮಗು ಪಾರ್ಶ್ವವಾಯು ಪೀಡಿತ ಮಗುವಾಯಿತು. ದೇಹದ ಒಂದು ಭಾಗ ಶಕ್ತಿಹೀನವಾಯಿತು. ಸೊನೆಯೇ ದಂಪತಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾದರು. ವೈದ್ಯರ ಜತೆ ಚರ್ಚಿಸಿದಾಗ ಅವರ ಮಕ್ಕಳ ಅನಾರೋಗ್ಯ ಸ್ಥಿತಿಗೆ ಇರುವ ಏಕೈಕ ಪರಿಹಾರವೆಂದರೆ, ಅಸ್ಥಿಮಜ್ಜೆ ಕಸಿ ಎನ್ನುವ ವಾಸ್ತವ ಅವರ ಗಮನಕ್ಕೆ ಬಂತು. ಮಕ್ಕಳ ಅಸ್ಥಿಮಜ್ಜೆ ಕಸಿಗೆ ಸುಸಜ್ಜಿತ ಸೌಲಭ್ಯಗಳು ಇರುವ ಆಸ್ಪತ್ರೆಗಾಗಿ ಹುಡುಕಾಟ ಆರಂಭಿಸಿದರು. ಆಗ ಅವರಿಗೆ ಕಾಣಿಸಿದ್ದು ನಾರಾಯಣ ಹೆಲ್ತ್ ಸಿಟಿ. ಹೆಲ್ತ್ ಸಿಟಿ ಈಗಾಗಲೇ 1000ಕ್ಕೂ ಹೆಚ್ಚು ಅಸ್ಥಿಮಜ್ಜೆ ಕಸಿಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಮಕ್ಕಳನ್ನು ನಾರಾಯಣ ಹೆಲ್ತ್ ಸಿಟಿಯ ಮಜೂಂದಾರ್ ಶಾ ಕ್ಯಾನ್ಸರ್ ಕೇಂದ್ರದ ಮಕ್ಕಳ ಕ್ಯಾನ್ಸರ್, ಹೆಮೆಟಾಲಜಿ ಮತ್ತು ಅಸ್ಥಿಮಜ್ಜೆ ಕಸಿ ಕೇಂದ್ರದ ನಿರ್ದೇಶಕ ಮತ್ತು ಕ್ಲಿನಿಕಲ್ ಮುಖ್ಯಸ್ಥ ಡಾ.ಸುನೀಲ್ ಭಟ್ ಅವರ ಅಧೀನದಲ್ಲಿ ಮಕ್ಕಳನ್ನು ದಾಖಲಿಸಲಾಯಿತು. ಅವರ ನೇತೃತ್ವದ ತಜ್ಞ ವೈದ್ಯರ ತಂಡ ವಿಸ್ತೃತವಾದ ಮೌಲ್ಯಮಾಪನ ಮಾಡಿ, ಅಸ್ಥಿಮಜ್ಜೆಗಾಗಿ ಸೂಕ್ತ ಹೊಂದಾಣಿಕೆಯಾಗುವ ವ್ಯಕ್ತಿಗೆ ಹುಡುಕಾಟ ಆರಂಭಿಸಿತು. ಆದಾಗ್ಯೂ ಹೊಂದಾಣಿಕೆಯಾಗುವ ಸೂಕ್ತ ದಾನಿಯನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಇಷ್ಟು ಮಾತ್ರವಲ್ಲದೇ ಮಕ್ಕಳ ಕುಟುಂಬದಲ್ಲಿ ಕೂಡಾ ಎಚ್ಎಲ್ಎ ಹೊಂದಾಣಿಕೆಯಾಗುವ ಯಾವ ದಾನಿಗಳೂ ಕಂಡುಬರಲಿಲ್ಲ. ನೈಜೀರಿಯಾದಲ್ಲಿ ದಾನಿಗಳ ರಿಜಿಸ್ಟ್ರಿ ಇಲ್ಲದಿರುವುದರಿಂದ ಹಾಗೂ ಇತರ ರಿಜಿಸ್ಟ್ರಿಗಳಲ್ಲಿ ಇದ್ದ ನೈಜೀರಿಯಾ ಪ್ರಜೆಗಳ ಸಂಖ್ಯೆ ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ, ಸಂಬಂಧ ಇಲ್ಲದ ದಾನಿಯನ್ನು ಹುಡುಕುವುದು ಕಷ್ಟಸಾಧ್ಯವಾಯಿತು. ಆದರೆ ವೈದ್ಯರ ತಂಡ ಕೈಚೆಲ್ಲಿ ಕೂರಲಿಲ್ಲ. ಅವರು ತಂದೆಯ ಅಸ್ತಿಮಚ್ಚೆ ಅರ್ಧದಷ್ಟು ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ಕಂಡುಕೊಂಡು, ಹ್ಲಾಪ್ಲೊ ಸಮಾನ ಕಸಿ ವಿಧಾನ ಅನುಸರಿಸಲು ಮುಂದಾದರು. ಇದೀಗ ಅಸ್ಥಿಮಜ್ಜೆ ಕಸಿಯ ಬಳಿಕ ಇಬ್ಬರೂ ಮಕ್ಕಳು ರೋಗಮುಕ್ತರಾಗಿದ್ದಾರೆ.
ಈ ಸಿಕೆಲ್ ಸೆಲ್ ಡಿಸೀಸ್ ಅಥವಾ ವಂಶಪಾರಂಪರ್ಯ ರಕ್ತಹೀನತೆ ಕಾಯಿಲೆ ಮತ್ತು ಈ ಪ್ರಕರಣದ ಬಗ್ಗೆ ಮಾತನಾಡಿದ, ನಾರಾಯಣ ಹೆಲ್ತ್ ಸಿಟಿಯ ಮಜೂಂದಾರ್ ಶಾ ಕ್ಯಾನ್ಸರ್ ಕೇಂದ್ರದ ಮಕ್ಕಳ ಕ್ಯಾನ್ಸರ್, ಹೆಮೆಟಾಲಜಿ ಮತ್ತು ಅಸ್ಥಿಮಜ್ಜೆ ಕಸಿ ಕೇಂದ್ರದ ನಿರ್ದೇಶಕ ಮತ್ತು ಕ್ಲಿನಿಕಲ್ ಮುಖ್ಯಸ್ಥ ಡಾ.ಸುನೀಲ್ ಭಟ್, "ವಂಶಪಾರಂಪರ್ಯ ರಕ್ತಹೀನತೆ ಎನ್ನುವುದು ಅತ್ಯಂತ ಸಂಕೀರ್ಣ ಸ್ಥಿತಿಗೆ ಕಾರಣವಾಗುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಬಹುತೇಕ ರೋಗಪೀಡಿತರು ಇಪ್ಪತ್ತು ಇಲ್ಲವೇ ನಲುವತ್ತನೇ ವಯಸ್ಸಿನೊಳಗೆ ಸಾಯುತ್ತಾರೆ. ಈ ಸಂಕೀರ್ಣ ಆರೋಗ್ಯ ಸಮಸ್ಯೆಗೆ ಇರುವ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯೆಂದರೆ ಅಸ್ಥಿಮಜ್ಜೆ ಕಸಿ. ಆದಾಗ್ಯೂ ಈ ಪ್ರಕರಣದಲ್ಲಿ, ಹೊಂದಾಣಿಕೆಯಾಗುವ ದಾನಿಗಳು ಸಿಗದೇ ಇರುವುದರಿಂದ ಅಸ್ಥಿಮಜ್ಜೆ ಕಸಿ ಅತ್ಯಂತ ಸವಾಲಿನದ್ದಾಗಿತ್ತು. ನಾವು ಆ ಮಕ್ಕಳ ತಂದೆಯ ಅರೆ ಹೊಂದಾಣಿಕೆಯಾಗುವ ಕೋಶಗಳನ್ನು ಬಳಸಿಕೊಂಡು ವಿನೂತನ ಹೆಪ್ಲೊ-ಸಾಮ್ಯತೆಯ ಕಸಿ ವಿಧಾನ ಅನುಸರಿಸಿ ಯಶಸ್ವಿಯಾದೆವು" ಎಂದು ವಿವರಿಸಿದರು.
ಮಕ್ಕಳಿಗೆ ಮರುಹುಟ್ಟು ನೀಡಿದ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಸಮಸ್ಯಾತ್ಮಕ ಮಕ್ಕಳ ತಂದೆ, ಸೊನೆಯೆ "ವಂಶಪಾರಂಪರ್ಯ ರಕ್ತಹೀನತೆಯಿಂದಾಗಿ ನನ್ನ ಹಿರಿಯ ಮಗ ಪಾರ್ಶ್ವವಾಯುಪೀಡಿತನಾಗಿದ್ದ ಹಾಗೂ ದೇಹದ ಒಂದು ಭಾಗ ಶಕ್ತಿ ಕಳೆದುಕೊಂಡಿದ್ದ. ಇಬ್ಬರು ಮಕ್ಕಳಾದ ಸೊನಾಯೆ ಮತ್ತು ಜ್ಯೂಡ್ ವಂಶಪಾರಂಪರ್ಯ ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದ ಕೂಡಲೆ ನಮಗೆ ಆಘಾತವಾಯಿತು. ಮಕ್ಕಳಿಗೆ ಮರುಹುಟ್ಟು ನೀಡಿದ ಡಾ.ಸುನೀಲ್ ಭಟ್ ಹಾಗೂ ವೈದ್ಯರ ತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
"ನಮ್ಮ ಕರಾಳ ಸಮಯದಲ್ಲಿ ನಾರಾಯಣ ಹೆಲ್ತ್ ಸಿಟಿ ನಮ್ಮ ಜೀವನದ ಆಶಾಕಿರಣವಾಯಿತು" ಎಂದು ಅವರು ಬಣ್ಣಿಸಿದರು.
ಹಾಪ್ಲೊ ಸಾಮ್ಯತೆಯ ಕಸಿ ತಂತ್ರ ಅನುಸರಿಸಿ ದೊಡ್ಡ ಮಗುವಿಗೆ ಜನವರಿಯಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಪುಟ್ಟ ಮಗುವಿಗೆ ಇತ್ತೀಚೆಗೆ ಈ ಚಿಕಿತ್ಸೆ ನೀಡಲಾಯಿತು. ಇದೀಗ ಇಬ್ಬರೂ ಮಕ್ಕಳು ರಕ್ತಹೀನತೆ ಸಮಸ್ಯೆಯಿಂದ ಮುಕ್ತರಾಗಿದ್ದಾರೆ. ಅಸ್ಥಿಮಜ್ಜೆ ಕಸಿಯೊಂದೇ 100ಕ್ಕೂ ಹೆಚ್ಚು ರಕ್ತ ಸಂಬಂದಿತ, ಮಾರಕ ರೋಗಗಳಿಗೆ ಇರುವ ಪರಿಹಾರ. ಈ ರೋಗಗಳಲ್ಲಿ ಲ್ಯುಕೇಮಿಯಾ, ಲಿಂಫೋಮಾ, ಘನ ಕ್ಯಾನ್ಸರ್ ನಿಂದ ಹಿಡಿದು ವಂಶವಾಹಿಯಾಗಿ ಕಾಡುವ ರಕ್ತಕಣಗಳ ವಿರೂಪಗಳು, ಪ್ರತಿರೋಧ ಶಕ್ತಿಯ ಮೇಲೆ ಪರಿಣಾಮ ಬೀರುವ ತಲಸ್ಸೇಮಿಯಾ ಮೇಜರ್, ಸಿಕಲ್ ಸೆಲ್ ಅನೀಮಿಯಾ, ತೀವ್ರತರ ಪ್ರತಿರೋಧ ಶಕ್ತಿ ವ್ಯತ್ಯಯಗಳು ಸೇರಿವೆ.