ನೈಸ್ ಯೋಜನೆಯಿಂದ ಬೆಂಗಳೂರಿಗರಿಗೆ ಯಾವುದೇ ಪ್ರಯೋಜವಿಲ್ಲ : ಸಚಿವ ಆರ್.ಅಶೋಕ್
ಬೆಂಗಳೂರು, ಏಪ್ರಿಲ್ 26 : ನೈಸ್ ಸಂಸ್ಥೆ ಕೈಗೆತ್ತಿಕೊಂಡಿರುವ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್(BMIC)ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ಸೋಮವಾರ ಸಂಪುಟ ಉಪ ಸಮಿತಿ ಸಭೆ ನಡೆಸಲಾಯಿತು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್, ನೈಸ್ ಯೋಜನೆಯಿಂದ ಬೆಂಗಳೂರಿಗರಿಗೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ಹೊರೆಯೇ ಜಾಸ್ತಿ ಎಂದು ಹೇಳಿದ್ದಾರೆ.
"ನೈಸ್ ಕಂಪನಿಯು ಬಿಎಂಐಸಿ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಲ್ಲ, ಕ್ರಾಂಕೀಟ್ರಸ್ತೆ ಮೇಲ್ಸೇತುವೆ ಮಾಡಬೇಕಿತ್ತು. ಅದಾವುದನ್ನೂ ಸರಿಯಾಗಿ ಮಾಡದೇ ಬಹಳಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಅಲ್ಲದೆ ಈ ಹಿಂದೆ ಇದ್ದ ಸರ್ಕಾರ ನೈಸ್ ಸಂಸ್ಥೆಗೆ ಹೆಚ್ಚುವರಿ ಭೂಮಿಯನ್ನು ಕೊಟ್ಟಿತ್ತು. ಆದರೆ ಯೋಜನೆಯು ಪೂರ್ಣಗೊಳ್ಳಲಿಲ್ಲ. ಸರ್ಕಾರದ ಷರತ್ತುಗಳು ಕೂಡ ಪಾಲನೆಯಾಗಿಲ್ಲ. ಈ ಯೋಜನೆಯಿಂದ ಬೆಂಗಳೂರಿನ ಜನತೆಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ಈ ಯೋಜನೆಗೆ ನೀಡಲಾಗಿದ್ದ ಸರ್ಕಾರದ ಭೂಮಿಯನ್ನ ವಾಪಾಸ್ ಪಡೆದುಕೊಳ್ಳುತ್ತೇವೆ," ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
"ಸದ್ಯಕ್ಕೆ ಹೆಚ್ಚುವರಿಯಾಗಿ ನೀಡಿದ್ದ ಸರ್ಕಾರಿ ಭೂಮಿಯನ್ನ ವಾಪಾಸ್ ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳೊಳಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಈ ಹಿಂದೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ನೈಸ್ ಯೋಜನೆಗೆ ಎಲ್ಲಾ ರೀತಿಯಲ್ಲೂ ಅನುಮತಿ ನೀಡಿತ್ತು. ಈ ಯೋಜನೆಯ ಹಿಂದೆ ಕಾಂಗ್ರೆಸ್-ಜೆಡಿಎಸ್ ಪಾಲಿದೆ ಹೊರತು ಬಿಜೆಪಿಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ಈ ಯೋಜನೆಯೆ ಮೂಲಪುರುಷರು ಕಾಂಗ್ರೆಸ್-ಜೆಡಿಎಸ್ ನಾಯಕರು. ಇವರಿಬ್ಬರ ಮ್ಯಾಚ್ ಫಿಕ್ಸಿಂಗ್ನಿಂದ ನೈಸ್ ಯೋಜನೆ ಆರಂಭವಾಯಿತು," ಎಂದು ವಿಪಕ್ಷಗಳ ವಿರುದ್ದ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದರು.
ಇಷ್ಟೇ ಅಲ್ಲದೆ ನಮ್ಮದೆ ಭೂಮಿಯನ್ನು ನೈಸ್ ಯೋಜನೆಗೆ ಕೊಟ್ಟು ನಾವು ಸಂತ್ರಸ್ತರಾಗಿದ್ದೇವೆ. ಆದರೆ ಸರ್ಕಾರದ ಭೂಮಿಯನ್ನು ನೈಸ್ ಸಂಸ್ಥೆಯವರು ಅನುಭವಿಸುತ್ತಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಒಪ್ಪಂದದಿಂದಾಗಿ ಈಗ ಸರ್ಕಾರವೇ 100 ಕೋಟಿ ಕೊಡುವಂತಾಗಿದೆ. ಮೆಟ್ರೋ ಯೋಜನೆಗೂ ಇದು ಅಡ್ಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್.ರವಿಕುಮಾರ್ ಭಾಗವಹಿಸಿದ್ದರು.