ಬೆಂಗಳೂರು IISC ಉಗ್ರ ದಾಳಿ: ಬಂಧಿತ 4 ವರ್ಷಗಳ ಬಳಿಕ ದೋಷಮುಕ್ತ
ಬೆಂಗಳೂರು, ಜೂನ್ 21 : ಐಐಎಸ್ಸಿ ಉಗ್ರ ದಾಳಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಯನ್ನು ಎನ್ಐಎ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿ ಕೆಲ ಮಂದಿ ಗಾಯಗೊಂಡಿದ್ದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ 2005ರಲ್ಲಿ ನಡೆದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಲ್ಲಿ ಪ್ರಕರಣ ಎದುರಿಸುತ್ತಿದ್ದ ಮೊಹಮ್ಮದ್ ಹಬೀಬ್ ಎಂಬುವವರನ್ನು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಐಐಎಸ್ಸಿ ದಾಳಿ : ಶಂಕಿತ ಉಗ್ರರ ಸೆರೆ
ಆರೋಪಿಯ ವಿರುದ್ಧದ ಆರೋಪಗಳಿಗೆ ಪ್ರಾಸಿಕ್ಯೂಷನ್ ಸೂಕ್ತ ಪುರಾವೆ ಒದಗಿಸಿಲ್ಲ ಹಾಗೂ ಈ ಪ್ರಕರಣದಲ್ಲಿ ಆತನನ್ನು ಆರೋಪಿಯೆಂದು ಏಕೆ ಬಂಧಿಸಲಾಯಿತೆಂದು ಅರ್ಥವಾಗುತ್ತಿಲ್ಲ ಎಂದು ತೀರ್ಪು ನೀಡಿದ ನ್ಯಾ. ಡಾ. ಕಾಸನಪ್ಪ ನಾಯ್ಕ್ ಹೇಳಿದ್ದಾರೆ.
ಐಐಎಸ್ಸಿ ಮೇಲೆ ದಾಳಿ ಹಾಗೂ ಸರಣಿ ಸ್ಫೋಟ ಪ್ರಕರಣದಲ್ಲಿ ಬೇಕಾದ ಉಗ್ರರು ಅಡಗಿರುವ ಬಗ್ಗೆ ಬಾಂಗ್ಲಾದೇಶಕ್ಕೆ ಭಾರತ ಪುರಾವೆ ಒದಗಿಸಿತ್ತು. ಅದರನ್ವಯ ನಾಜೀರ್ ಮತ್ತು ಶೇಖ್ ಎಂಬ ಇಬ್ಬರು ಲಷ್ಕರ್ ಇ ತೊಯ್ಬಾ ಉಗ್ರರನ್ನು ಬಾಂಗ್ಲಾ ಭದ್ರತಾ ಪಡೆಗಳು 2009ರಲ್ಲಿ ಬಂಧಿಸಿತ್ತು ಬಳಿಕ ಭಾರತೀಯ ಗಡಿ ಭದ್ರತಾ ಪಡೆಗೆ ಒಪ್ಪಿಸಿತ್ತು.
ಹಬೀಬ್ನನ್ನು ತ್ರಿಪುರಾದಲ್ಲಿ ಬಂಧಿಸಲಾಗಿತ್ತು
ಈ ಪ್ರಕರಣದಲ್ಲಿ ಲಕ್ನೋ ಪೊಲೀಸರಿಂದ 2008ರಲ್ಲಿ ಬಂಧಿತನಾಗಿದ್ದ ಸಬಾಬುದ್ದೀನ್ ಅಹಮದ್ ಎಂಬಾತನ ಹೇಳಿಕೆಯ ಆಧಾರದ ಮೇಲೆ ಹಬೀಬ್ನನ್ನು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ 2017ರಲ್ಲಿ ಬಂಧಿಸಲಾಗಿತ್ತು.
ಆರೋಪಿ ಕುರಿತು ಏನೂ ಹೇಳಿಲ್ಲ
ಪೊಲೀಸರು ಚಾರ್ಜ್ಶೀಟ್ನಲ್ಲಿ ಆರೋಪಿ ಕುರಿತು ಏನನ್ನೂ ಹೇಳಿಲ್ಲ ಅಥವಾ ಆತ ಪ್ರಕರಣದಲ್ಲಿ ಶಾಮೀಲಾಗಿದ್ದ ಅಥವಾ ಘಟನೆ ಕುರಿತು ಆತನಿಗೆ ಮೊದಲೇ ತಿಳಿದಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನೂ ಒದಗಿಸಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದಿಸಿದ್ದರು.
ವಕೀಲರು ವಾದಿಸಿದ ವಿಷಯವೇನು?
ತನಗೆ ಬೆಂಗಳೂರಿನಲ್ಲಿ ವಾಸಸ್ಥಳ ಏರ್ಪಾಟು ಮಾಡಿದ್ದ ಹಾಗೂ ಹಲವು ರೀತಿಯಲ್ಲಿ ಸಹಾಯ ಮಾಡಿದ್ದ ಹಲವು ವ್ಯಕ್ತಿಗಳ ಹೆಸರನ್ನು ಸಬಾಬುದ್ದೀನ್ ತನ್ನ ಸ್ವಯಂ ಪ್ರೇರಿತ ಹೇಳಿಕೆಯಲ್ಲಿ ತಿಳಿಸಿದ್ದರೂ, ಅವರನ್ನು ಆರೋಪಿಗಳೆಂದು ಅಥವಾ ಸಾಕ್ಷಿಗಳೆಂದು ಹೆಸರಿಸಲಾಗಿಲ್ಲ ಎಂದೂ ವಕೀಲರು ವಾದಿಸಿದ್ದರು.
Recommended Video
ಹಬೀಬ್ ಭೇಟಿಯಾಗಿದ್ದ ಆರೋಪಿ
ಪ್ರಕರಣದ ಮೊದಲ ಆರೋಪಿ, ತನ್ನ ಹೇಳಿಕೆಯಲ್ಲಿ ತಾನು ಅಗರ್ತಲಾಗೆ ಮೇ 2005ರಲ್ಲಿ ಹೋಗಿದ್ದ ವೇಳೆ ಹಬೀಬ್ ಮಿಯಾನನ್ನು ಭೇಟಿಯಾಗಿ ಆತನ ಸ್ನೇಹ ಸಂಪಾದಿಸಿ ತನ್ನ ಉದ್ದೇಶವೇನೆಂದು ವಿವಿರಿಸದೆ ಅಕ್ರಮವಾಗಿ ಗಡಿ ದಾಟಿ ಬಾಂಗ್ಲಾದೇಶಕ್ಕೆ ಹೋಗಲು ಆತನ ಸಹಾಯ ಪಡೆದಿದ್ದಾಗಿ ಹೇಳಿದ್ದೆನೆಂದು ವಕೀಲರು ತಮ್ಮ ವಾದದ ವೇಳೆ ತಿಳಿಸಿದ್ದರು.