ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಕೇಸ್: NIA ವಿಶೇಷ ಕೋರ್ಟ್ ಆದೇಶ
ಬೆಂಗಳೂರು, ಜುಲೈ 1: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಿಶೇಷ ನ್ಯಾಯಾಲಯವು ತನ್ನ ಆದೇಶ ನೀಡಿದೆ. ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ದೋಷಿ ಎಂದು ಮಂಗಳವಾರದಂದು ಆದೇಶಿಸಿದೆ.
ಬಿಹಾರದ ದರ್ಬಾಂಗದ ಗೌಯುರ್ ಅಹ್ಮದ್ ಜಮಾಲಿ ಹಾಗೂ ಅಫ್ತಾಬ್ ಆಲಂ ಫಾರೂಕ್ ಅವರಿಗೆ 8 ವರ್ಷ ಶಿಕ್ಷೆ ಹಾಗೂ ತಲಾ 4 ಲಕ್ಷ ರು ದಂಡ ವಿಧಿಸಲಾಗಿದೆ. ಸ್ಫೋಟದ ಹೊಣೆ ಹೊತ್ತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜೊತೆ ಇಬ್ಬರು ಅಪರಾಧಿಗಳು ಸಂಪರ್ಕ ಹೊಂದಿರುವುದು ಸಾಬೀತಾಗಿದೆ. 2018ರಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಅವರು 6 ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ: ಮೂವರಿಗೆ ಏಳು ವರ್ಷ ಶಿಕ್ಷೆ
2010ರ ಆಗಸ್ಟ್ 27ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸಂಜೆ ಪಂದ್ಯ ನಡೆದಿತ್ತು. ಪಂದ್ಯದ ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಕ್ರೀಡಾಂಗಣದ ಹೊರಭಾಗದಲ್ಲಿ ಲಘು ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಯುರ್ ಅಹ್ಮದ್ ಜಮಾಲಿ ಅಲಿಯಾಸ್ ಅಜೀಜಿ ಕೋಮನಿ, ಅಫ್ತಾಬ್ ಆಲಂ, ಮೊಹಮ್ಮದ್ ಕಫೀಲ್ ಅಖ್ತರ್ ಹಾಗೂ ನವದೆಹಲಿಯ ಮಹಮದ್ ತಾರೀಕ್ ಅಂಜುಮ್ ಎಹ್ಸಾನ್ ಅವರನ್ನು ಬಂಧಿಸಲಾಗಿತ್ತು.
ಎನ್ಐಎ ನ್ಯಾಯಾಲಯದ ಮುಂದೆ ಮಹಮದ್ ತಾರೀಕ್ ಅಂಜು ಎಹ್ಸಾನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸ್ಫೋಟಗಳ ಹಿಂದಿನ ರುವಾರಿ ನಾನೇ ಎಂದು ಯಾಸಿನ್ ಭಟ್ಕಳ ಹೇಳಿಕೆ ನೀಡಿದ್ದ. ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಹಾಗೂ ಮೋಹ್ಸಿನ್ ಚೌಧರಿ ಮುಂತಾದ ಇಂಡಿಯನ್ ಮುಜಾಹಿದ್ದೀನ್ ಮುಖಂಡರ ಮೇಲೆ ಶಂಕೆ ವ್ಯಕ್ತವಾಗಿತ್ತು. ತನಿಖೆ, ಉಳಿದ ಆರೋಪಿಗಳ ವಿಚಾರಣೆ ಜಾರಿಯಲ್ಲಿದೆ.