ಬೆಂಗಳೂರಲ್ಲಿ ಐಎಸ್ಐಎಸ್ ಶಂಕಿತ ಉಗ್ರನ ಬಂಧನ
ಬೆಂಗಳೂರು, ಫೆಬ್ರವರಿ 26: ಶಂಕಿತ ಐಎಸ್ಐಎಸ್ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಫಜಿ ಉರ್ ರೆಹಮಾನ್ ಮಾಹಿತಿ ಕಲೆ ಹಾಕಲು ಎನ್ಐಎ ಅಧಿಕಾರಿಗಳು ಮಾರುವೇಷದಲ್ಲಿ ಹೋಗಿದ್ದರು. ಬಾಂಬ್ ತಯಾರಿ ಹಾಗೂ ಶೂಟಿಂಗ್ ತರಬೇತಿಗೆ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ರೆಹಮಾನ್ ಬಂಧಿಸಲು ಹೋದಾಗ ಪರಾರಿಯಾಗಲು ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದಾನೆ.
ಕಾಶ್ಮೀರದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಇಬ್ಬರು ಉಗ್ರರ ಹತ್ಯೆ
ಫಜಿ ಉರ್ ರೆಹಮಾನ್ ಬಂಧಿತ ವ್ಯಕ್ತಿ. ಒಂದು ವಾರದಿಂದ ಶಂಕಿತ ಉಗ್ರನ ಚಲನ ವಲನದ ಬಗ್ಗೆ ನಿಗಾ ವಹಿಸಿದ್ದ ಎನ್ಐಎ ಕೊನೆಗೂ ಬಂಧಿಸಿದೆ. ಚರ್ಮಗಳನ್ನು ಹದಮಡುವ ಜಾಗದ ಒಳಗೆ ಓಡಿ ಹೋಗಿ ಫಜಿ ಅವಿತು ಕುಳಿತ್ತಿದ್ದ. ಕತ್ತಲು ಹಾಗೂ ದುರ್ವಾಸನೆ ಇರುವ ಜಾಗದಲ್ಲಿ ಆರೋಪಿ ಅವಿತಿದ್ದರಿಂದ ಒಳಗಡೆ ಹೋಗಲು ಪೊಲೀಸರು ಮತ್ತು ಅಧಿಕಾರಿಗಳು ಒದ್ದಾಡಿದ್ದಾರೆ.
ಬಂಧನದ ಸಮಯದಲ್ಲಿ ಜೋರಾಗಿ ಗಲಾಟೆ ಮಾಡಿ ಗೊಂದಲ ಸೃಷ್ಟಿಸಿದ್ದರಿಂದ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಅಧಿಕಾರಿಗಳು ಅಲ್ಲಿದ್ದ ಜನರಿಗೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿ ಒಂದೂವರೆ ಗಂಟೆಯ ನಂತರ ಫಜಿಯನ್ನು ಬಂಧಿಸಿದ್ದಾರೆ.
ಹಿಂದು ಮುಖಂಡರ ಹತ್ಯೆ ಹಾಗೂ ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಚು ರೂಪಿಸಿ ಸೆರೆಸಿಕ್ಕಿರುವ 17 ಶಂಕಿತ ಉಗ್ರರ ಪ್ರಕರಣ ಸಂಬಂಧ ಸೋಮವಾರ ತಮಿಳುನಾಡು ಹಾಗೂ ಕರ್ನಾಟಕದ 25 ಕಡೆ ದಾಳಿ ನಡೆಸಿರುವ ಎನ್ಐಎ ತಂಡ ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್, ಸಿಮ್ ಕಾರ್ಡ್ಗಳು ಹಾಗೂ ಜಿಹಾದಿ ಪುಸ್ತಕಗಳನ್ನು ಜಪ್ತಿ ಮಾಡಿದೆ.
ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸಲು ಮುಂದಾಗಿದ್ದ ಆಲ್ ಹಿಂದ್ ಮಾಡೆಲ್ ವಿರುದ್ಧ ಚೆನ್ನೈ ಕ್ಯೂ ಬ್ರಾಂಚ್ ಅಧಿಕಾರಿಗಳು ಜನವರಿಯಲ್ಲಿ ದಾಳಿ ನಡೆಸಿ ಜಿಹಾದಿ ಗ್ಯಾಂಗ್ನ ಶಂಕಿತ ಉಗ್ರ ಖಾಜಾ ಮೋಹಿದ್ದೀನ್ನನ್ನು ಬಂಧಿಸಿದ್ದರು.
ನಂತರ ಬೆಂಗಳೂರಿನ ಸಿಸಿಬಿ ಪೊಲೀಸರು, ಸದ್ದುಗುಂಟೆಪಾಳ್ಯದ ಮೆಹಬೂಬ್ ಪಾಷ ಸೇರಿ ರಾಜ್ಯಾದ್ಯಂತ 17 ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ಕುರಿತು ದಾಖಲಾಗಿದ್ದ ಪ್ರತ್ಯೇಕ ಮೂರು ಪ್ರಕರಣಗಳ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.