ಎಲಿವೇಟೆಡ್ ಕಾರಿಡಾರ್ ಯೋಜನೆ ಮತ್ತೊಂದು ಅಧ್ಯಯನ
ಬೆಂಗಳೂರು, ಏ.22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎಲಿವೇಟೆಡ್ ಕಾರಿಡಾರ್ ಯೋಜನೆ ಕುರಿತು ಎನ್ಜಿಓಗಳಿಂದ ಅಧ್ಯಯನ ನಡೆಯಲಿದೆ.
ಈಗಾಗಲೇ ಎಲಿವೇಟೆಡ್ ಕಾರಿಡಾರ್ನಿಂದ ಆಗುವ ಅಪಾಯಗಳ ಕುರಿತು ಹಲವು ಸಂಘ, ಸಂಸ್ಥೆಗಳು ಆನ್ಲೈನ್ ಅಭಿಯಾನವನ್ನು ಕೈಗೊಂಡಿದ್ದವು. ಈ ಕುರಿತು ಎನ್ಜಿಓಗಳು ಇನ್ನೊಂದು ಸುತ್ತಿನ ಅಧ್ಯಯನವನ್ನು ಮೇ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಿದೆ.
'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ
ಯೋಜನೆಯ ಮೊದಲ ಹಂತಕ್ಕೆ ಈಗಾಗಲೇ ಕೆಆರ್ಡಿಸಿಎಲ್ ಟೆಂಡರ್ ಆಹ್ವಾನಿಸಿದೆ. ಆದರೆ, ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮಗಳ ಕುರಿತು ಸರ್ಕಾರ ಅಧ್ಯಯನ ನಡೆಸದೆ ಟೆಂಡರ್ಗೆ ಹಸಿರು ನಿಶಾನೆ ನೀಡಿರುವುದು ಜನರ ಅಭಿಪ್ರಾಯವನ್ನು ಸಂಗ್ರಹಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕಾರಿಡಾರ್ನ ಮೊದಲ ಹಂತ ಹೆಬ್ಬಾಳ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಿಲ್ಕ್ ಬೋರ್ಡ್ವರೆಗೆ ಇರಲಿದೆ. ಬರೋಬ್ಬರಿ 22.12 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳುವ ಮೂರು ಪ್ಯಾಕೇಜ್ಗೆ ಟೆಂಡರ್ ಆಹ್ವಾನಿಸಲಾಗಿದೆ.
ಎಲಿವೇಟೆಡ್ ಕಾರಿಡಾರ್ನಿಂದ ಮರಗಳಿಗಷ್ಟೇ ಅಲ್ಲ ಬಫರ್ ವಲಯಕ್ಕೂ ಅಪಾಯ
ಈ ಮಾರ್ಗ ಹಾದು ಹೋಗುವ ಕಡೆಗೆ ಇರುವ ಅನೇಕ ಕಟ್ಟಡಗಳು, ಸಾರ್ವಜನಿಕರ ಸ್ವತ್ತುಗಳು, ವಾಣಿಜ್ಯ ಚಟುವಟಿಕೆ, ವ್ಯಾಪಾರಿಗಳ ಮೇಲಾಗುವ ಪರಿಣಾಮದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಸಿಟಿಜನ್ಸ್ ಫಾರ್ ಬೆಂಗಳೂರು ಹಾಗೂ ದಿ ಸ್ಟೂಡೆಂಟ್ಸ್ ಔಟ್ಪೋಸ್ಟ್ ಸಂಘಟನೆಗಳು ಒಟ್ಟಾಗಿ ಈ ಕೆಲಸ ನಿರ್ವಹಿಸಲಿದೆ.