ತರಗುಪೇಟೆ ಸ್ಫೋಟ ಪ್ರಕರಣ: ರೀಲ್ ಪಟಾಕಿ ಕೆಳಗೆ ಬಿದಿದ್ದೇ ಸ್ಫೋಟಕ್ಕೆ ಕಾರಣ
ಬೆಂಗಳೂರು, ಸೆ. 24: ಮುಗ್ಧರ ಜೀವ ತೆಗೆದ ' ಪಟಾಕಿ ಸ್ಫೋಟ ಪ್ರಕರಣ'ದಿಂದ ಎಚ್ಚೆತ್ತಿರುವ ಪೊಲೀಸರು ರಾಜಧಾನಿಯ ಪಟಾಕಿ ವಹಿವಾಟಿನ ಗೋಡನ್ಗಳಲ್ಲಿ ಅಕ್ರಮ ದಾಸ್ತಾನು ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಇದರ ನಡುವೆ ಸ್ಫೋಟಕ್ಕೆ ಕಾರಣವಾದ ವಸ್ತು ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ.
Recommended Video
ಗುರುವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ನಿಂದ ತಯಾರಿಸಲ್ಪಟ್ಟ ರೀಲ್ ಪಟಾಕಿ ಅಕ್ರಮ ದಾಸ್ತಾನು ಕಾರಣ ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ನ್ಯೂ ತರಗುಪೇಟೆಯ ಪ್ರತಿಯೊಂದು ಗೋಡನ್ನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ನಾಲ್ಕು ಮುಖ್ಯ ರಸ್ತೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಶೋಧ ಕಾರ್ಯ ಮುಗಿಯುವ ವರೆಗೂ ವಾಣಿಜ್ಯ ವಹಿವಟು ನಡೆಸಸದಂತೆಯೂ ಎಚ್ಚರಿಕೆ ನೀಡಲಾಗಿದೆ. ವಿವಿಪುರ, ಗಿರಿನಗರ ಹಾಗೂ ಶಂಕರಪುರ ಪೊಲೀಸ್ ಠಾಣೆಗಳ ನೂರಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಪರಿಶೀಲನೆ ವರೆಗೂ ವಹಿವಾಟು ಬಂದ್: ದೀಪಾವಳಿ ಸಮೀಪಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಮಳಿಗೆ ಸೇರಿದಂತೆ ಬೆಳಗ್ಗೆಯೇ ಅಂಗಡಿಗಳಲ್ಲಿ ವಹಿವಾಟು ಆರಂಭವಾಗುತ್ತದೆ. ಆದರೆ, ಗುರುವಾರ ಸ್ಫೋಟ ಸಂಭವಿಸಿದ ಪರಿಣಾಮ ಹೊಸ ತರಗುಪೇಟೆ ಸೇರಿದಂತೆ ಎಲ್ಲಾ ಬೀದಿಗಳಲ್ಲಿ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರು ಮೊದಲು ಗೋಡನ್ ಶೋಧ ನಡೆಸಿದ ಬಳಿಕವೇ ಕೆಲಸಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ತಪಾಸಣೆ ಮುಗಿಯುವ ವರೆಗೂ ಯಾವುದೇ ಗೂಡ್ಸ್ ವಾಹನಗಳಿಗೂ ಅವಕಾಶ ಕಲ್ಪಿಸಿಕೊಡಲಿಲ್ಲ. ಈ ಮೂಲಕ ಮತ್ತೆ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಚಿಕ್ಕಪೇಟೆ- ಕಾಟನ್ ಪೇಟೆಯಲ್ಲಿ ಶೋಧಕ್ಕೆ ಸೂಚನೆ: ಇನ್ನು ಅಮೋನಿಯಂ ನೈಟ್ರೇಟ್ನಿಂದ ತಯಾರಿಸಲ್ಪಟ್ಟ ರೀಲ್ ಪಟಾಕಿ ಬಾಕ್ಸ್ ಸ್ಫೋಟದ ಹಿನ್ನೆಲೆಯಲ್ಲಿ ಪಟಾಕಿಯ ಅತಿ ಹೆಚ್ಚು ವಹಿವಾಟು ಸಂಗ್ರಹಿಸುವ ಚಿಕ್ಕಪೇಟೆ ಮತ್ತು ಕಾಟನ್ ಪೇಟೆಯ ಮಳಿಗೆಗಳಲ್ಲಿ ಸುರಕ್ಷತೆ, ಪಟಾಕಿ ಸಂಗ್ರಹ, ಪಟಾಕಿ ತಯಾರಿಕೆ ರಾಸಾಯನಿಕ ಸಂಗ್ರಹ ಬಗ್ಗೆ ಶೋಧ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಬಾರಿ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಸುರಕ್ಷತೆ ಸಂಬಂಧ ಹೆಚ್ಚಿನ ಷರತ್ತುಗಳನ್ನು ವಿಧಿಸಲು ಪೊಲೀಸ್ ಇಲಾಖೆ ಚಿಂತನೆ ಮಾಡಿದೆ.
ಬ್ಲಾಸ್ಟ್ ಗೆ ಕಾರಣವಾಗಿದ್ದು ರೀಲ್ ಪಟಾಕಿ: ಚಾಮರಾಜಪೇಟೆಯ ನ್ಯೂ ತರಗುಪೇಟೆಯಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟಕ್ಕೆ ಕಾರಣವಾಗಿದ್ದು ಅಮೋನಿಯಂ ನೈಟ್ರೇಟ್ನಿಂದ ತಯಾರಿಸಲ್ಪಟ್ಟ ಪಟಾಕಿ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನೈಟ್ರೇಟ್ ನಿಂದ ತಯಾರಿಸಲ್ಪಟ್ಟ ರೀಲ್ ಪಟಾಕಿ ಬಾಕ್ಸ್ಗಳು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಸ್ಫೋಟ ಗೊಂಡ ಸ್ಥಳದಲ್ಲಿ ಇನ್ನೂ 50 ಬಾಕ್ಸ್ಗಳು ಇದ್ದು, ಅಷ್ಟು ಸ್ಫೋಟಗೊಂಡಿದ್ದರೆ, ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋಡನ್ನಲ್ಲಿದ್ದ ಎಲ್ಲಾ ಬಾಕ್ಸ್ಗಳು ಸ್ಫೋಟಗೊಂಡಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು. ದೊಡ್ಡ ಅವಘಡ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲೀಕ ಅಂದರ್: ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ನ ಮಾಲೀಕ ಗಣೇಶ್ ಬಾಬುನನ್ನು ವಿವಿಪುರಂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪರವಾನಗಿ ಪಡೆಯದೇ ಅಮೋನಿಯಂ ನೈಟ್ರೇಟ್ ಅಕ್ರಮವಾಗಿ ಸಾಗಾಟ ಮಾಡಿದ್ದಾರೆ. ಪಟಾಕಿ ಸಾಗಟಕ್ಕೆ ಪ್ರತ್ಯೇಕ ಸುರಕ್ಷತಾ ನಿಯಮ ಪಾಲಿಸಬೇಕು. ಆದರೆ ಎಲ್ಲಾ ನಿಯಮ ಗಾಳಿಗೆ ತೂರಿ ಪಟಾಕಿ ಜತೆಗೆ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ. ಅಕ್ರಮವಾಗಿ ಪಟಾಕಿ ಹಾಗೂ ಪಟಾಕಿ ತಯಾರಿಕೆಯ ರಾಸಾಯನಿಕಗಳನ್ನು ಅಕ್ರಮವಾಗಿ ಗೋಡನ್ನಲ್ಲಿ ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತರಗುಪೇಟೆ ಗೋಡನ್ ಗಳ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮುಂದುವರೆದ ಚಿಕಿತ್ಸೆ: ಹೊಸ ತರಗುಪೇಟೆ ಸ್ಫೋಟದಲ್ಲಿ ಗಾಯಗೊಂಡಿರುವ ಜೇಮ್ಸ್, ಗಣಪತಿ, ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 30 ರಷ್ಟು ಸುಟ್ಟು ಗಾಯಗಳಿಗೆ ಒಳಗಾಗಿರುವ ಜೇಮ್ಸ್ ಬದುಕು ಉಳಿಯುವುದು ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ಉಳಿದಂತೆ ರಂಗಸ್ವಾಮಿ ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು, ಶೇ. 30 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವರ ಜೀವ ಉಳಿಯುವದೇ ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ.