ಕಬ್ಬನ್ ಪಾರ್ಕ್ ಅಂದ ಹೆಚ್ಚಿಸಲಿವೆ ಬೃಹತ್ ಶಿಲ್ಪ ಕಲಾಕೃತಿಗಳು
ಬೆಂಗಳೂರು, ಡಿಸೆಂಬರ್ 27 : ಕಬ್ಬನ್ ಪಾರ್ಕ್ ನಲ್ಲಿ ಬೃಹತ್ ಶಿಲ್ಪ ಕಲಾಕೃತಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ಮೂರು ಸ್ಥಳಗಳಲ್ಲಿ ಮಹಿಳಾ ಸ್ವಾತಂತ್ರ್ಯ, ಪುಸ್ತಕ ಓದುತ್ತಿರುವ ಮಹಿಳೆ ಹಾಗೂ ಸೋರೆಕಾಯಿಯ ಚಿತ್ರಣವಿರುವ ಬೃಹತ್ ಶಿಲ್ಪ ಕಲಾಕೃತಿಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರು ನಗರದಲ್ಲಿರುವ ಪರಿಸತ ಬಿಂಬಿಸುವ ಉದ್ಯಾನದ ಜತೆಗೆ ಶಿಲ್ಪಕಲೆಯನ್ನೂ ಪರಿಚಯಿಸುವ ಉದ್ದೇಶದಿಂದ ಕಲ್ಲಿನ ಕಲಾಕೃತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ನ ಸಲಹಾ ಸಮಿತಿಯೊಂದಿಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆದಿದ್ದು, ಭಾಗಶಃ ಒಪ್ಪಿಗೆ ಸಿಕ್ಕಿದೆ. ಅಲ್ಲದೆ, ಕಲಾಕೃತಿ ರಚನೆಗೆ ಸಂಬಂಧಿಸಿದಂತೆ ಕಲಾವಿದರಿಂದ ಸಲಹೆಗಳನ್ನು ಕೇಳಲಾಗಿದೆ.
ಕಬ್ಬನ್ ಪಾರ್ಕ್ ನಲ್ಲಿ ನಿರ್ಮಾಣವಾಗಲಿರುವ ಕಲಾಕೃತಿಗಳು ಕನಿಷ್ಟ ನೂರು ವರ್ಷಗಳ ಕಾಲ ಉಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಕಾಲ ಉಳಿಯುವ ಕಲ್ಲುಗಳನ್ನು ಗುರುತಿಸುವ ಸಲುವಾಗಿ ಗಣಿ ಮತ್ತು ಭೂಗರ್ಭ ಇಲಾಖೆಯಿಂದ ಸಲಹೆ ಕೇಳಲಾಗಿದೆ.
ಅಲ್ಲಿಂದ ಮಾಹಿತಿ ಬಂದ ಬಳಿಕ ಸಚಿವರ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳಿಂದ ಆಹ್ವಾನ: ನಗರದಲ್ಲಿ ಸಾಫ್ಟ್ ವೇರ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಪರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ನೆರವು ನೀಡಲಿವೆ. ಕಬ್ಬನ್ ಪಾರ್ಕ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲಾಕೃತಿಗಳಿಗೆ ಹಣಕಾಸಿನ ನೆರವು ಪಡೆಯಲು ಖಾಸಗಿ ಸಂಸ್ಥೆಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಮೂರು ಸ್ಥಳ ಗುರುತು: ಕಬ್ಬನ್ ಪಾರ್ಕ್ ನಲ್ಲಿ ಅತಿ ಹೆಚ್ಚು ಪರಿಚಿತವಾಗಿರುವ ಹಾಗೂ ಜನ ಸಂಚಾರ ವಿರುವ ಶೇಷಾದ್ರಿ ಐಯ್ಯರ್ ಕೇಂದ್ರ ಗ್ರಂಥಾಲಯದ ಹಿಂಭಾಗದ ವೃತ್ತ, ಬ್ಯಾಂಡ್ ಸ್ಟ್ಯಾಂಡ್ ನ ಮುಂಭಾಗ ಖಾಲಿ ಪ್ರದೇಶ ಹಾಗೂ ಐಸೂರು ಮಹಾರಾಜರ ಪ್ರತಿಮೆ ಬಳಿ ಕಲಾಕೇರತಿಗಳ ಅನಾವರಣಕ್ಕೆ ಈಗಾಗಲ ಸ್ಥಳ ಗುರುತಿಸಲಾಗಿದೆ.